ಕಾರವಾರ : ಇದೇ ಬರುವ ಮೇ 4 ರಿಂದ 5 ದಿನಗಳ ಕಾಲ ತಾಲೂಕಿನಲ್ಲಿ ಅದ್ಧೂರಿಯಾಗಿ ಕರಾವಳಿ ಉತ್ಸವ ನಡೆಯಲಿದೆ. ಕಾರವಾರದ ರವೀಂದ್ರ ನಾಥ್ ಟಾಗೂರ್ ಕಡಲತೀರದಲ್ಲಿ ಅದ್ದೂರಿಯಾಗಿ ಕರಾವಳಿ ಉತ್ಸವ ಆಯೋಜಿಸಲು ನಿರ್ಧರಿಸಲಾಗಿದೆ. ಮೊದಲ ದಿನವೇ ಸೋನು ನಿಗಮ್ ಆಗಮಿಸಿ ಸಂಗೀತ ಪ್ರದರ್ಶನ ನೀಡಲಿದ್ದಾರೆ.
5 ಕೋಟಿ ರೂ ವೆಚ್ಚದಲ್ಲಿ ಐದು ದಿನಗಳ ಕಾಲ ಈ ಉತ್ಸವ ನಡೆಯಲಿದೆ. ಮೇ 4 ರಂದು ಸಂಜೆ ಸೋನು ನಿಗಮ್, 5ರಂದು ಇಂಡಿಯನ್ ಐಡಲ್ ಖ್ಯಾತಿಯ ಮೊಹಮದ್ ದಾನಿಶ್, 6ರಂದು ಮಿಕಾ ಸಿಂಗ್, 7ರಂದು ಅನನ್ಯ ಭಟ್, 8ರಂದು ಶಂಕರ್ ಮಹಾದೇವನ್ ಅವರಿಂದ ಸಂಗೀತ ರಸ ಮಂಜರಿ ಕಾರ್ಯಕ್ರಮ ಆಯೋಜಿಸಲಾಗಿದೆ.

ಈ ಎಲ್ಲಾ ಕಾರ್ಯಕ್ರಮಕ್ಕೂ ಮುನ್ನ ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಮೇ 4ರಂದು ಸಂಜೆ ನಡೆಯುವ ಕರಾವಳಿ ಉತ್ಸವದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಭಾಗವಹಿಸುವ ಸಾಧ್ಯತೆಯಿದೆ. ಉದ್ಘಾಟನೆ ಕಾರ್ಯಕ್ರಮಕ್ಕೂ ಮುನ್ನ ರಾಜ್ಯದ ಎಲ್ಲಾ ಪ್ರಕಾರಗಳ ಕಲೆಗಳನ್ನು ಬಿಂಬಿಸುವ ಕಲಾವಿದರಿಂದ ಆಕರ್ಷಕ ಮೆರವಣಿಗೆ ನಡೆಯಲಿದೆ.
ಕರಾವಳಿ ಉತ್ಸವದ ಅಂಗವಾಗಿ ಮಹಿಳೆಯರಿಗಾಗಿ ಕರಾವಳಿ ರನ್ ಕಾರ್ಯಕ್ರಮ, ರಂಗೋಲಿ ಸ್ಪರ್ಧೆ, ಗೋಡೆಗಳ ಮೇಲೆ ಚಿತ್ರ ಬಿಡಿಸುವ ಸ್ಪರ್ಧೆ, ಮೀನುಗಾರರಿಗಾಗಿ ದೋಣಿ ಸ್ಪರ್ಧೆ, ಕರಾವಳಿ ಆಹಾರ ತಯಾರಿಕಾ ಸ್ಪರ್ಧೆ, ವಿವಿಧ ಇಲಾಖೆ ಅಧಿಕಾರಿ ಹಾಗೂ ಜನಪ್ರತಿನಿಧಿಗಳು ತಂಡಗಳ ನಡುವೆ ಕಬಡ್ಡಿ ಸ್ಪರ್ಧೆ, ಸಾಕು ಪ್ರಾಣಿಗಳ ಪ್ರದರ್ಶನ ಸ್ಪರ್ಧೆ, ಸಾಕು ಪ್ರಾಣಿಗಳ ಅಲಂಕಾರ ಸ್ಪರ್ಧೆ, ರಾಜ್ಯದಲ್ಲಿಯೇ ಮೊದಲ ಬಾರಿಗೆ ಎಲ್ಇಡಿ ಗಾಳಿಪಟ ಪ್ರದರ್ಶನ ನಡೆಯಲಿದೆ.