ಕುಮಟಾ : ಎಲ್ಲರೊಂದಿಗೆ ಆತ್ಮೀಯವಾಗಿ ಬೆರೆಯುವ ಸಮಾಜಕ್ಕೆ ಮಾದರಿಯಾದ ವ್ಯಕ್ತಿ ಗಣಪತಿ ಹೊಳೆಗದ್ದೆ ಎಂದು ಎಸ್.ಟಿ.ನಾಯ್ಕ ಹೇಳಿದರು. ಇತ್ತೀಚೆಗೆ ಶ್ರೀ ತಾರಿ ಬೀರಪ್ಪ ದೇವಸ್ಥಾನದ ಆವರಣದಲ್ಲಿ ನಡೆದ ಗಣಪತಿ ಹೊಳೆಗದ್ದೆಯವರಿಗೆ ಶ್ರದ್ಧಾಂಜಲಿ ಸಲ್ಲಿಸಿ ಮಾತನಾಡಿದರು.
ಕುಮಟಾಕ್ಕೆ ಜಮುನಾ ಸರ್ಕಸ್ ಕಂಪನಿ ಬರಲು ಮೂಲ ಕಾರಣಿಕರ್ತರಾದ ಗಣಪತಿ ಹೊಳೆಗದ್ದೆಯವರು ಎಲ್ಲರೊಂದಿಗೆ ಆತ್ಮೀಯವಾಗಿ ಬೆರೆಯುವ ಹೃದಯವಂತರಾಗಿದ್ದರು. ಸಮಾಜಕ್ಕಾಗಿ ನಿಸ್ವಾರ್ಥ ಸೇವೆ ಸಲ್ಲಿಸುವ ಆಸ್ತಿಯನ್ನು ಕಳೆದುಕೊಂಡಿದ್ದೇವೆ ಎಂದರು.

ಜಿಲ್ಲಾ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಪಿ. ಆರ್. ನಾಯ್ಕ ಮಾತನಾಡಿ, ಕಿಲುಬಿಲ್ಲದ ನಮ್ಮ ಮಧ್ಯದ ಒಂದು ಸೃಜನಶೀಲ ಮನಸ್ಸನ್ನು ನಾವು ಕಳೆದುಕೊಂಡಿದ್ದೇವೆ. ಸಮಾಜದ ಗತಿ- ಸ್ಥಿತಿಗಳ ಕುರಿತು ಚಿಂತಿಸುವ ಹಾಗೂ ಆ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳುವ ಪಲಾಪೇಕ್ಷೆ ಇಲ್ಲದೆ ದುಡಿಯುವ ಅಂತರ್ಮುಖಿ. ಶ್ರಮ ಸಂಸ್ಕೃತಿಯ ನೇತಾರರಾಗಿದ್ದ ಗಣಪತಿ ಹೊಳೆಗದ್ದೆಯವರು ಜನಪರ ಕೆಲಸದ ಮೂಲಕವೇ ಮನೆ ಮಾತಾಗಿದ್ದರು. ಅವರ ಸಾವು ಸಮಾಜಕ್ಕೆ ದೊಡ್ಡ ನಷ್ಟವನ್ನುಂಟು ಮಾಡಿದೆ ಎಂದರು.
ನಿವೃತ್ತ ಅಂಚೆ ಅಧಿಕಾರಿ ಅನಿಲ್ ಬೆರಂಕಿ ಮಾತನಾಡಿ, ಕಳೆದ ಎರಡು ದಶಕಗಳಿಗೂ ಹೆಚ್ಚು ಕಾಲ ಹೊಳೆಗದ್ದೆ ಶ್ರೀ ತಾರಿ ಬೀರಪ್ಪ ದೇವಸ್ಥಾನದ ಅಭಿವೃದ್ಧಿಗಾಗಿ ನಿರಂತರವಾಗಿ ಶ್ರಮಿಸಿರುತ್ತಾರೆ. ಬಂಡಿ ಹಬ್ಬದಲ್ಲಿ ಅವರು ಸಲ್ಲಿಸುವ ಸೇವೆ ಅವಿಸ್ಮರಣೀಯವಾಗಿದೆ ಎಂದರು.
ಯುವಜನ ಸೇವಾ ಕ್ರೀಡಾಧಿಕಾರಿ ಸುದೀಶ ನಾಯ್ಕ ಮಾತನಾಡಿ, ಧಾರ್ಮಿಕ ಕ್ಷೇತ್ರದಲ್ಲಿ ಎಲ್ಲರ ಮನಸ್ಸನ್ನು ಗೆದ್ದು ತನ್ನ ವ್ಯಕ್ತಿತ್ವವನ್ನು ರೂಪಿಸಿಕೊಂಡು ಇತರರಿಗೆ ಮಾದರಿಯಾಗಿದ್ದರು. ತನ್ನ ಹೆಸರಿನೊಂದಿಗೆ ಊರಿನ ಹೆಸರನ್ನು ಸೇರಿಸಿ ಊರಿಗೆ ಹೆಮ್ಮೆ ತರುವ ಕೆಲಸ ಇವರಿಂದಾಗಿದೆ ಎಂದರು.
ವೇದಿಕೆಯಲ್ಲಿ ಕುಟುಂಬದ ಸದಸ್ಯರಾದ ಯೋಗೀಶ ವೈದ್ಯ, ಗ್ರಾಮ ಪಂಚಾಯತ ಸದಸ್ಯರಾದ ಪಾಂಡು ಪಟಗಾರ, ದೇವೇಂದ್ರ ಶೇರುಗಾರ, ಉದ್ದಿಮೆದಾರ ಸಚಿನ ನಾಯ್ಕ, ಅಧ್ಯಾಪಕ ಅಶೋಕ ನಾಯ್ಕ, ರಾಜು ನಾಯ್ಕ ಗಣಪತಿ ಹೊಳೆಗದ್ದೆಯವರ ಸೇವಾ ಮನೋಭಾವ ಕುರಿತು ಮಾತನಾಡಿದರು.
ಸಭೆಯಲ್ಲಿ ಹಿರಿಯರಾದ ರಾಮಣ್ಣ, ಎಂ.ಎಸ್. ನಾಯ್ಕ ಕೇಶವ ಮಡಿವಾಳ, ನಿರಂಜನ ವೈದ್ಯ, ಜೆ.ಕೆ. ಅಶೋಕ ನಾಯ್ಕ, ಜಟ್ಟಪ್ಪ ನಾಯ್ಕ, ವಿನು ನಾಯ್ಕ ಮುಂತಾದವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಮೃತರ ಆತ್ಮಕ್ಕೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.