ಕುಮಟಾ : ಸಂಸ್ಕೃತವು ಕೇವಲ ಅಂಕ ಗಳಿಕೆಗೆ ಸುಲಭವಾದ ವಿಷಯವಷ್ಟೇ ಆಗಿರದೇ, ಸಂಸ್ಕೃತದ ಅಧ್ಯಯನದಿಂದ ಸಂಸ್ಕಾರವು ಸಂವರ್ಧನೆಗೊಂಡು ಸಮಾಜದಲ್ಲಿ ಸುಸಂಸ್ಕೃತ ನಾಗರಿಕರಾಗಿ ನಿರ್ಮಾಣಗೊಳ್ಳಲು ಸಾಧ್ಯವಿದೆ ಎಂದು ತಾಲ್ಲೂಕಾ ಪಂಚಾಯತದ ಅಕ್ಷರ ದಾಸೋಹದ ಸಹಾಯಕ ನಿರ್ದೇಶಕರಾದ ವಿನಾಯಕ ವೈದ್ಯರವರು ನುಡಿದರು.
ಅವರು ತಾಲ್ಲೂಕಿನ ಬರ್ಗಿಯ ಸರ್ಕಾರಿ ಪ್ರೌಢ ಶಾಲೆಗೆ ಮಂಗಳವಾರದಂದು ಮುಂಜಾನೆಯ ಅವಧಿಯಲ್ಲಿ ಆಕಸ್ಮಿಕವಾಗಿ ಸಂದರ್ಶಿಸಿದ ಸಮಯದಲ್ಲಿ ಸಂಸ್ಕೃತ ತರಗತಿಯನ್ನು ವೀಕ್ಷಿಸಿ, ವಿದ್ಯಾರ್ಥಿಗಳೊಂದಿಗೆ ಮುಕ್ತವಾಗಿ ಸಂವಾದಗೈದು, ವಿದ್ಯಾರ್ಥಿಗಳಲ್ಲಿನ ಸಂಸ್ಕೃತದ ಕುರಿತಾದ ಅಭಿರುಚಿ ಮತ್ತು ಅರಿವಿನ ಕುರಿತಂತೆ ವಿಸ್ಮಯಗೊಂಡು, ಮುಕ್ತಕಂಠದಿಂದ ಶ್ಲಾಘಿಸಿ ಮಾತನಾಡಿದರು.

ಸಂಸ್ಕೃತವು ಭಾರತೀಯ ಮೂಲದ ವಿಶ್ವಮಾನ್ಯವಾದ ದೇವಭಾಷೆಯಾಗಿದ್ದು, ಸಂಸ್ಕೃತದ ಕಲಿಕೆಯಿಂದ ಅಂತರಂಗವು ಶುದ್ದಿಗೊಂಡು ಧೀ:ಶಕ್ತಿಯು ಮೈಗೂಡುವುದಲ್ಲದೇ, ಸಂಸ್ಕೃತವನ್ನು ಕಲಿತವರ ಮುಖದಲ್ಲಿ ತೇಜಸ್ಸು ನೆಲೆಗೊಂಡು ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಾಗುವುದು ಎಂದ ಅವರು, ಸಂಸ್ಕೃತವು ಇತರ ವಿಷಯಗಳಿಗೂ ಪೂರಕವಾಗಿದ್ದು, ಸಂಸ್ಕೃತವನ್ನು ಕಲಿತವರು ಇತರ ವಿಷಯಗಳನ್ನು ಪರಿಣಾಮಕಾರಿಯಾಗಿ ಗ್ರಹಿಸಬಲ್ಲರು ಎಂದು ಅವರು ಹೇಳಿದರು. ಜೊತೆಯಲ್ಲಿ ತಾನು ವಿಜ್ಞಾನದ ವಿದ್ಯಾರ್ಥಿಯಾಗಿಯೂ ಪ್ರೌಢ ಶಾಲಾ ಹಂತದಿಂದ ಉನ್ನತ ಶಿಕ್ಷಣದವರೆಗೂ ಸಂಸ್ಕೃತವನ್ನು ಒಂದು ವಿಷಯವನ್ನಾಗಿ ಅಭ್ಯಸಿಸಿದ್ದನ್ನು ಸ್ಮರಿಸಿಕೊಂಡು, ಸಂಸ್ಕೃತದ ಅಭ್ಯಾಸಕ್ಕೆ ಕರೆಗೊಟ್ಟರು.
ಸಂಸ್ಕೃತ ಅಧ್ಯಾಪಕರಾದ ಮಂಜುನಾಥ ಗಾಂವಕರ್ ಬರ್ಗಿಯವರು ಸ್ವಾಗತಿಸಿ – ಪರಿಚಯಿಸಿ, ವಂದಿಸಿದರು. ಪ್ರೌಢ ಶಾಲೆಯ ಪತ್ರಾಂಕಿತ ಮುಖ್ಯಾಧ್ಯಾಪಕರಾದ ಮಧುಕೇಶ್ವರ ನಾಯ್ಕರವರು ಉಪಸ್ಥಿತರಿದ್ದರು.