ಕುಮಟಾ: ಅನೇಕತೆಯಿಂದ ಏಕತೆಯ ಕಡೆಗೆ ಸಾಗುವುದೇ ವೈರಾಗ್ಯ. ಅದೇ ಪರಬ್ರಹ್ಮನ ಕಡೆಗೆ ಹೋಗುವ ಮಾರ್ಗ ಎಂದು ಮಹಾಮಂಡಲೇಶ್ವರ ೧೦೦೮ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಮಹಾರಾಜ್ ಅವರು ನುಡಿದರು.
ತಾಲೂಕಿನ ಕೋನಳ್ಳಿಯಲ್ಲಿ ನಡೆಯುತ್ತಿರುವ ಶ್ರೀಗಳ ಚಾತುರ್ಮಾಸ್ಯ ಕಾರ್ಯಕ್ರಮದ ೯ನೇ ದಿನದ ಕಾರ್ಯಕ್ರಮದಲ್ಲಿ ಭಕ್ತರಿಂದ ಪೂಜಾ ಸೇವೆ ಸ್ವೀಕರಿಸಿ ಆಶೀರ್ವಚನ ನೀಡಿದ ಮಹಾಮಂಡಲೇಶ್ವರ ಶ್ರೀ ಬ್ರಹ್ಮಾನಂದ ಸರಸ್ವತಿ ಮಹಾರಾಜ್ ಅವರು, ಭಗವಂತನ ಕೃಪೆ ನಮಗಿದ್ದಾಗ ನಮ್ಮ ಶಕ್ತಿ ಪ್ರಬಲವಾಗಿರುತ್ತದೆ. ದೇವರ ಕೃಪೆಯಿಲ್ಲದಿದ್ದಾಗ ಶಕ್ತಿ ಕುಂದುತ್ತದೆ. ಹಾಗಾಗಿ ಮಹಾಭಾರತದಲ್ಲಿ ಕೃಷ್ಣನಿಲ್ಲದೇ ಅರ್ಜುನ್ ಶಕ್ತಿಹೀನನಾಗುತ್ತಾನೆ. ಜಗತ್ತಿನಲ್ಲಿ ಯಾರನ್ನು ನಿನ್ನ ಹತ್ತಿರ ಇರಿಸಬೇಕು. ಯಾರನ್ನು ದೂರ ಮಾಡಬೇಕು ಎಂದು ನಿರ್ಧರಿಸುವುದು ಭಗವಂತ. ಈ ಜಗತ್ತಿನಲ್ಲಿ ಎಲ್ಲವೂ ನಶ್ವರ. ಮನುಷ್ಯ ವ್ಯಾಮೋಹದಿಂದ ದೂರವಿರಬೇಕು. ಭಗವಂತನದಲ್ಲಿ ಅಚಲವಾದ ನಂಬಿಕೆಯಿಟ್ಟು ಭಕ್ತಿ ಮಾರ್ಗದಲ್ಲಿ ನಡೆಯಬೇಕು. ಅದಕ್ಕೆ ಈ ಚಾತುರ್ಮಾಸ್ಯ ಕಾರ್ಯಕ್ರಮ ಪ್ರೇರಕವಾಗುತ್ತದೆ ಎಂದು ಶ್ರೀಗಳು ನುಡಿದರು.

ಶ್ರೀಗಳ ಚಾತುರ್ಮಾಸ್ಯ ಕಾರ್ಯಕ್ರಮದ ೯ನೇ ದಿನದ ಕಾರ್ಯಕ್ರಮದಲ್ಲಿ ಕರ್ಕಿ ಗ್ರಾಮ ಪಂಚಾಯತ್ ವ್ಯಾಪ್ತಿಯ ತೊಪ್ಪಾಲಕೇರಿ, ಹೆಗಡೆ ಹಿತ್ತಲ-ನಡುಚಿಟ್ಟೆ, ರಾಮೇಶ್ವರ-ಕಂಬಿ, ಶೇಡಿಕುಳಿ, ಪಾವಿನಕುರ್ವಾ ಹಾಗು ಅಂಬಿಗರ ಸಮಾಜ ಮಾಸೂರ ಗ್ರಾಮದ ಸಮಸ್ತ ಊರ ನಾಗರಿಕರು ಗುರು ಪಾದುಕಾ ಪೂಜೆ ಸಲ್ಲಿಸಿದರು. ಕುಮಟಾ ತಾಲೂಕು ನಾಮಧಾರಿ ಸಂಘದ ಅಧ್ಯಕ್ಷ ಮಂಜುನಾಥ ಆರ್ ನಾಯ್ಕರ ಜನ್ಮ ದಿನದ ನಿಮಿತ್ತ ಗುರುಗಳು ಶುಭಾಶಯ ಕೋರಿ ಆಶೀರ್ವದಿಸಿದರು. ಶ್ರೀ ಲಕ್ಷ್ಮಿನಾರಾಯಣ ದೇವಸ್ಥಾನದ ಮೂಕ್ತೋಸರರಾದ ಮಹಾಬಲೇಶ್ವರ್ ತಿಮ್ಮಪ್ಪ ನಾಯ್ಕ್ , ಮೋಹನ್ ಗೋವಿಂದ ನಾಯ್ಕ್, ಶಂಕರ್ ದಿವಗಿ ಅಂಬಿಗ ಸಮಾಜಸದ ಮುಖ್ಯಸ್ಥರು, -ಅಂಬಿಗ ಸಮಾಜದ ಯಜಮಾನರಾದ ರಾಮ ಅಂಬಿಗ, ಸಂದೀಪ್ ಲಕ್ಷ್ಮಣ ನಾಯ್ಕ್ ಅವರು ಆಗಮಿಸಿ ಶ್ರೀಗಳ ದರ್ಶನ ಪಡೆದು, ಫಲಮಂತ್ರಾಕ್ಷತೆ ಪಡೆದರು. ಜಗದೀಶ್ ಗಣಪತಿ ನಾಯ್ಕ್ ದಂಪತಿ ತೊಪ್ಪಲಕೇರಿ ಅವರು ವಯಕ್ತಿಕವಾಗಿ ಗುರುಪಾದುಕಾ ಪೂಜೆ ಸಲ್ಲಿಸಿದರು. ತೊಪ್ಪಲಕೇರಿ, ಪಾವಿನಕುರ್ವಾ,ರಾಮೇಶ್ವರ-ಕಂಬಿ ಹಾಗೂ ನಡುಚಿಟ್ಟೆ-ಹೆಗಡೆ ಹಿತ್ತಲನ ಸಮಾಜ ಬಾಂದವರು ಗುರು ಸೇವೆಯನ್ನು ಸಲ್ಲಿಸಿದರು. ಮಧ್ಯಾಹ್ನ ಪ್ರಸಾದ ಭೋಜನದಲ್ಲಿ ಸಾವಿರಕ್ಕೂ ಅಧಿಕ ಭಕ್ತರು ಪಾಲ್ಗೊಂಡು ಶ್ರೀಗಳ ಕೃಪಾಶೀರ್ವಾದಕ್ಕೆ ಪಾತ್ರರಾದರು.