ಅಂಕೋಲಾ : ರಾಷ್ಟ್ರೀಯ ಹೆದ್ದಾರಿ 63 ಅಂಕೋಲಾದ ಅಗಸೂರು ಬಳಿ ಚಾಲಕನ ನಿಯಂತ್ರಣ ತಪ್ಪಿದ ಖಾಸಗಿ ಬಸ್ ಕಿರು ಸೇತುವೆ ಮೇಲಿಂದ ಕೆಳಕ್ಕೆ ಬಿದ್ದ ಘಟನೆ ನಡೆದಿದೆ.
ಅಗಸೂರಿನ ಜಗದೀಶ ಹೊಟೇಲ್ ಬಳಿ ಈ ಅಪಘಾತ ಸಂಭವಿಸಿದೆ. ಬೆಳಗಾವಿಯಿಂದ ಯಲ್ಲಾಪುರ ಅಂಕೋಲಾ ಮಾರ್ಗವಾಗಿ ಮಂಗಳೂರು ಕಡೆ ಬಸ್ ತೆರಳುತಿತ್ತು. ಬೆಳಗಿನ ಜಾವ ಮೂರು ಗಂಟೆಯ ಹೊತ್ತಿಗೆ ಈ ಅಪಘಾತ ಸಂಭವಿಸಿದೆ.

ಘಟನೆಯಲ್ಲಿ ಓರ್ವ ಪ್ರಯಾಣಿಕ ಸಾವನ್ನಪ್ಪಿದ್ದು ಸುಮಾರು 18 ಪ್ರಯಾಣಿಕರಿಗೆ ಗಾಯಗಳಾಗಿದೆ. ಗಂಭೀರ ಗಾಯಗೊಂಡವರನ್ನು ಮಂಗಳೂರು ಆಸ್ಪತ್ರೆಗೆ ರವಾನಿಸಿದ್ದು, ಉಳಿದ ಗಾಯಾಳುಗಳಿಗೆ ಅಂಕೋಲಾ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
ಘಟನೆ ನಡೆದ ಸಂದರ್ಭದಲ್ಲಿ ಗಾಯಾಳುಗಳನ್ನು ಸಾಗಿಸಲು ದಿನಪತ್ರಿಕೆ ಸಾಗಾಟ ಮಾಡುವ ಕಾರು ಚಾಲಕ ಸೈಯದ್ ಜಾಕಿರ್ ಇನಾಮ್ದಾರ್ ಎಂಬುವವರು ಸಹಕರಿಸಿದ್ದರು. ಬಸ್ ನಲ್ಲಿ ಚಿಕ್ಕಚಿಕ್ಕ ಮಕ್ಕಳು, ಬ್ಯಾಂಕ್ ಉದ್ಯೋಗಿ, ಮೆಡಿಕಲ್ ಸ್ಟುಡೆಂಟ್ ಓರ್ವರು, ಇನ್ವೆಸ್ಟಮೆಂಟ್ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಸೇರಿದಂತೆ ಮಹಿಳೆಯರು , ವೃದ್ಧರು ಇದ್ದರು.
ಅಂಕೋಲಾ ಪೊಲೀಸರು ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನ ಮೇಲಕ್ಕೆ ಎತ್ತುವಲ್ಲಿ ಮತ್ತು ಆಸ್ಪತ್ರೆಗೆ ರವಾನಿಸುವ ಕೆಲಸ ಮಾಡಿದರು. ಈ ಸಂಬಂಧ ಠಾಣೆಯಲ್ಲಿ ದೂರು ದಾಖಲಾಗಿದೆ.