ಕುಮಟಾ : ತಾಲೂಕಿನ ಹೊಲನಗದ್ದೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ರವೀಂದ್ರ ಭಟ್ಟ ಸೂರಿಯವರು “ಶಿಕ್ಷಣ ಸೇವಾ ರತ್ನ” ಪ್ರಶಸ್ತಿಗೆ ಭಾಜನರಾಗಿದ್ದಾರೆ. ಭಾರತೀಯ ಜನತಾ ಪಕ್ಷದ ಶಿಕ್ಷಣ ಪ್ರಕೋಷ್ಠ ವತಿಯಿಂದ ನೀಡಲಾಗುವ ರಾಜ್ಯ ಮಟ್ಟದ ಶಿಕ್ಷಣ ಸೇವಾ ರತ್ನ ಪ್ರಶಸ್ತಿಗೆ ರಾಜ್ಯದ 9 ಶಿಕ್ಷಕರು ಭಾಜನರಾಗಿದ್ದು ಚಿಕ್ಕಮಗಳೂರು, ಶಿವಮೊಗ್ಗ, ಉತ್ತರಕನ್ನಡ ಜಿಲ್ಲೆಗಳನ್ನು ಒಳಗೊಂಡ ವಿಭಾಗದಿಂದ ರವೀಂದ್ರ ಭಟ್ಟ ಸೂರಿ ಆಯ್ಕೆಯಾಗಿದ್ದರು.
ಬೆಂಗಳೂರಿನ ಪ್ರಸಿದ್ಧ ಶಿಕ್ಷಣ ಸಂಸ್ಥೆಗಳಲ್ಲೊಂದಾದ “ವಾಗ್ಧೇವಿ ವಿಲಾಸ” ದ ಸಭಾಂಗಣದಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾರತೀಯ ಜನತಾ ಪಕ್ಷದ ರಾಜ್ಯ ಪ್ರಧಾನಕಾರ್ಯದರ್ಶಿಗಳೂ ಖ್ಯಾತ ವಾಗ್ಮಿಗಳೂ ಆದ ಪಿ.ರಾಜೀವ ಕುಡಚಿಯವರು ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿ ” ಶಿಕ್ಷಕರು ಸ್ವಸ್ಥ ಸಮಾಜದ ನಿರ್ಮಾತೃರು. ಸಂಸ್ಕಾರಯುತ ಶಿಕ್ಷಣ ಇಂದಿನ ಅಗತ್ಯತೆಯಾಗಿದೆ. ಅಂತಹ ಶಿಕ್ಷಣವನ್ನು ನೀಡಿ ಸಂಸ್ಕಾರವಂತ ನಾಗರಿಕರನ್ನು ರೂಪಿಸುವ ಗುರುತರ ಜವಾಬ್ಧಾರಿ ಶಿಕ್ಷಕರ ಮೇಲಿದೆ” ಎಂದರು.

ವಿಧಾನ ಪರಿಷತ್ ವಿಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ, ಪ್ರಕೋಷ್ಠಗಳ ರಾಜ್ಯ ಸಂಯೋಜಕ ಎಸ್. ದತ್ತಾತ್ರಿ ಮತ್ತು ಶಿಕ್ಷಣ ಪ್ರಕೋಷ್ಠದ ರಾಜ್ಯ ಸಂಚಾಲಕ ಡಾ. ಸಿ.ಬಿ.ಶಶಿಧರ್ ಅವರು ರಾಜ್ಯದ ಬೇರೆ ಬೇರೆ ಜಿಲ್ಲೆಗಳ ಹಲವು ಸಾಧಕ ಶಿಕ್ಷಕರಿಗೆ ಶಿಕ್ಷಣ ಸೇವಾರತ್ನ ಪ್ರಶಸ್ತಿ ನೀಡಿ ಗೌರವಿಸಿದರು.
ಶಿಕ್ಷಣ ಪ್ರಕೋಷ್ಠದ ಸಹ ಸಂಚಾಲಕ ಎಂ.ಜಿ.ಭಟ್ ಮಾತನಾಡಿ ” ಶಿಕ್ಷಣ ಪ್ರಕೋಷ್ಠಾದ ಮೂಲಕ ಹಲವಾರು ರಚನಾತ್ಮಕ ಕಾರ್ಯಗಳನ್ನು ಮಾಡಲಾಗಿದ್ದು ರಾಜ್ಯದ 9 ವಿಭಾಗಗಳಿಂದ 9 ಶಿಕ್ಷಕರನ್ನು ಆಯ್ಕೆ ಮಾಡಿ ಇಂದು ಗೌರವಿಸಲಾಗುತ್ತಿದೆ. ಇದರಲ್ಲಿ ಶಿಕ್ಷಣ ಇಲಾಖೆಯಿಂದ ಜಿಲ್ಲಾ ಹಾಗೂ ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ನಮ್ಮ ಜಿಲ್ಲೆಯ ರವೀಂದ್ರ ಭಟ್ಟ ಸೂರಿಯವರಿರುವುದು ಹೆಮ್ಮೆಯ ವಿಷಯ. ತಮ್ಮ ಶಾಲೆಯನ್ನು ಆಕರ್ಷಣೀಯ ಕಲಿಕಾ ಕೇಂದ್ರವನ್ನಾಗಿಸಿ ಸತತ ಎರಡು ಬಾರಿ “ಉತ್ತರ ಕನ್ನಡ ಜಿಲ್ಲಾ ಮಟ್ಟದ ಉತ್ತಮ ಪ್ರಾಯೋಗಿಕ ಶಾಲೆ” ಪ್ರಶಸ್ತಿಗೆ ಭಾಜನವನ್ನಾಗಿಸಿದ ಕೀರ್ತಿ ಇವರಿಗಿದೆ. ಇವರ ಸಾರ್ಥಕ ಸೇವೆಗೆ ರಾಷ್ಟ್ರ ಪ್ರಶಸ್ತಿಯ ಗೌರವ ಒಲಿದು ಬರಲಿ ಎಂದರು. ಕಾರ್ಯಕ್ರಮದ ಸಂಚಾಲಕ ಕೆ.ಹರೀಶ್, ಶಿಕ್ಷಣ ತಜ್ಞರಾದ ಜಿ. ಮುನಿರಾಜ್ ಮತ್ತು ಜಯಣ್ಣ, ರಾಜ್ಯ ಮಾಧ್ಯಮ ಪ್ರಕೋಷ್ಠದ ಸಂಚಾಲಕ ಕರುಣಾಕರ್ ಖಾಸಲೆ, ವೈದ್ಯ ಪ್ರಕೋಷ್ಠದ ರಾಜ್ಯ ಸಮಿತಿ ಸದಸ್ಯ ಡಾ. ಲಕ್ಷ್ಮಣ್, ಲೋಕಸಭಾ ಚುನಾವಣೆಯಲ್ಲಿ ಉತ್ತರಕನ್ನಡ ಜಿಲ್ಲಾ ವಿಸ್ತಾರಕರಾಗಿ ಕಾರ್ಯ ನಿರ್ವಹಿಸಿದ್ದ ಪುರಂದರ ತೆಕ್ಕಟ್ಟೆ ಹಾಗೂ ಶಿಕ್ಷಣ ಪ್ರಕೋಷ್ಠದ ರಾಜ್ಯ ಸಮಿತಿಯ ಸದಸ್ಯರು, ರಾಜ್ಯದ ವಿವಿಧ ಭಾಗದ ಶಿಕ್ಷಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ನಮ್ಮ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕುಮಟಾ ತಾಲೂಕಾ ಅಧ್ಯಕ್ಷರಾದ ರವೀಂದ್ರ ಭಟ್ಟ ಸೂರಿಯವರು ರಾಜ್ಯ ಮಟ್ಟದ “ಶಿಕ್ಷಣ ಸೇವಾ ರತ್ನ” ಪ್ರಶಸ್ತಿ ಪುರಸ್ಕೃತರಾಗಿರುವುದು ಹೆಮ್ಮೆಯ ಸಂಗತಿ. ರಾಜ್ಯ ಮಟ್ಟದಲ್ಲಿ ಗಮನ ಸೆಳೆಯುವಂತೆ ಶಾಲೆಯನ್ನು ರೂಪಿಸಿರುವ ಅವರ ಕ್ರಿಯಾಶೀಲತೆಗೆ ಸಂದ ಗೌರವವಿದು. ಅವರಿಗೆ ಹೆಚ್ಚಿನ ಯಶಸ್ಸನ್ನು ಹಾರೈಸುತ್ತಾ ಅಭಿನಂದಿಸುತ್ತೇನೆ – ಆನಂದು ಗಾಂವಕರ್, ಜಿಲ್ಲಾಧ್ಯಕ್ಷರು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ (ಉ.ಕ)