ಕುಮಟಾ: ಕೇಸರಿ ಸಾಮ್ರಾಟ್ ಎಂಬ ಹೆಸರಿನ ಇನ್ಸ್ಟಾಗ್ರಾಂ ಖಾತೆಯಲ್ಲಿ ವೀಡಿಯೋ ಅಪ್ಲೋಡ್ ಮಾಡಿ ರಾಷ್ಟ್ರ ಧ್ವಜಕ್ಕೆ ಅಪಮಾನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಪ್ರಕರಣವನ್ನು ರದ್ದು ಮಾಡುವಂತೆ ಕೋರಿ ಐವರು ಆರೋಪಿತರು ಸಲ್ಲಿಸಿದ ಅರ್ಜಿಯನ್ನು ಧಾರವಾಡ ಹೈಕೋರ್ಟ್ ವಜಾಗೊಳಿಸಿದೆ.
2023ರ ಸೆಪ್ಟಂಬರ್ ತಿಂಗಳು ನಡೆದ ಈದ್ ಮಿಲಾದ್ ಹಬ್ಬದ ಅಂಗವಾಗಿ ಮಿರ್ಜಾನ ಗ್ರಾಮದಲ್ಲಿ ಮುಸ್ಲಿಂ ಬಾಂದವರು ಮಿರ್ಜಾನಿನ ಜಮಾತ್ ಉಲ್ ಮುಸ್ಲಮಿನ್ ಕಮೀಟಿ ನಡೆಸಿದ ಮೆರವಣಿಗೆಯಲ್ಲಿ ಈ ಘಟನೆ ನಡೆದಿತ್ತು. ಈ ಬಗ್ಗೆ ಕುಮಟಾ ಪೊಲೀಸರು ಸ್ವಯಂ ದೂರು ದಾಖಲಿಸಿಕೊಂಡಿದ್ದರು. ಮೇರವಣೆ ಸಂದರ್ಭ ಕೆಲವರು ಕೇಸರಿ, ಬಿಳಿ, ಹಸಿರು ಬಣ್ಣದ ಬಟ್ಟೆಯಲ್ಲಿ ಭಾರತ ದೇಶದ ತ್ರಿವರ್ಣ ಧ್ವಜದ ರಾಷ್ಟ್ರಧ್ವಜವನ್ನು ಮಾಡಿ ಕೇಸರಿ, ಬಿಳಿ ಹಸಿರು ಬಣ್ಣ ಇರುವ ಜಾಗದಲ್ಲಿ ನಕ್ಷತ್ರ ಮತ್ತು ಅರ್ದ ಚಂದ್ರಾಕೃತಿಯ ಚಿತ್ರವನ್ನು ಬರೆದ ಚಿತ್ರ ಇದ್ದುದ್ದನ್ನು ಎಲ್ಲರಿಗೂ ಕಾಣುವಂತೆ ಹಾರಿಸಿ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ ಬಗ್ಗೆ ಕುಮಟಾ ಪೋಲೀಸ್ ಠಾಣೆ ಗುನ್ನಾ ನಂಬರ್-195/2025 ಕಲಂ: 2 (ಎ), 2 (ಎಫ್) ರಾಷ್ಟ್ರಧ್ವಜಕ್ಕೆ ಅಪಮಾನ ತಡೆಗಟ್ಟುವ ಕಾಯ್ದೆ 1971 ಪ್ರಕರಣ ದಾಖಲಾಗಿತ್ತು. ತನಿಖೆಯಿಂದ ಆರೋಪಿತರಾದ ಮಿರ್ಜಾನ ಗ್ರಾಮದವರಾದ ಮಹಮ್ಮದ ಅನೀಶ್ ಸಾಹೇಬ್ ಹಜರತ್ ಆಗಾ, ರೆಹಾನ್ ಜಫ್ರುಲ್ಲಾ ಖಾನ್, ಅಫ್ರಿದ್ ಮುಸಾ ಶೇಖ ಅಬ್ದುಲ್ ಸಮದ್ ಶೇಖ್, ಶಾಫಿಕ್ ಹೈದರ್ ಅಲಿ ಶೇಖ್, ಮಹಮ್ಮದ್ ತಯ್ಯಬ್ ಶಾ ಸರ್ಗಿರೋ ಅಬ್ದುಲ್ರೇಹಮಾನ್ ಸರ್ಗಿರೋ ಈ ಐವರ ಮೇಲೆ ಆಗಿನ ಕುಮಟಾ ಪಿಎಸ್ಐ ಸುನೀಲ ಬಂಡಿವಡ್ಡರ್ ದೋಷಾರೋಪಣ ಪತ್ರ ತಯಾರಿಸಿ ಕುಮಟಾ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಪ್ರಕರಣ ಕುಮಟಾ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿ ಇರುವಾಗ ಎಲ್ಲ ಆರೋಪಿತರು ತಮ್ಮ ಮೇಲೆ ದಾಖಲಾದ ಪ್ರಕರಣವನ್ನು ರದ್ದು ಮಾಡುವಂತೆ 2024ರ ಡಿ.2 ರಂದು ಹೈಕೋರ್ಟ ಧಾರವಾಡ ಪೀಠದಲ್ಲಿ ಅರ್ಜಿ ಸಲ್ಲಿಸಿದ್ದರು. ಧಾರವಾಡ ಹೈಕೋರ್ಟನಲ್ಲಿ ಕ್ರಿಮಿನಲ್ ಪಿಟಿಷನ್ ನಂ-103688/2024 ರಂತೆ ದಾಖಲಾಗಿ ಸವಿಸ್ತಾರವಾಗಿ ವಿಚಾರಣೆ ನಡೆದು 2025ರ ಆ.21 ರಂದು ನ್ಯಾಯಾಧೀಶರು ಅರ್ಜಿದಾರರು ಸಲ್ಲಿಸಿದ ಅರ್ಜಿಯನ್ನು ವಜಾ ಮಾಡಿ ಆದೇಶಿಸಿದ್ದಾರೆ. ಈ ಪ್ರಕರಣದಲ್ಲಿ ಧಾರವಾಡ ಹೈಕೋರ್ಟ್ ಪೀಠದಲ್ಲಿ ಸರ್ಕಾರಿ ವಕೀಲರಾದ ಗಿರಿಜಾ ಹಿರೇಮಠ ಅವರು ಸಮರ್ಪಕವಾದ ವಾದ ಮಂಡಿಸಿ ಪ್ರಕರಣವನ್ನು ವಜಾ ಮಾಡಲು ಪ್ರಮುಖ ಪಾತ್ರ ವಹಿಸಿದ್ದರು. ಅಲ್ಲದೆ ಈ ಪ್ರಕರಣದಲ್ಲಿ ಕುಮಟಾ ಪೆÇಲೀಸರು ಆರೋಪಿತರ ವಿರುದ್ಧ ಸಲ್ಲಿಸಿರುವ ದೋಷಾರೋಪಣಾ ಪಟ್ಟಿ ಸಮರ್ಪಕವಾಗಿರುವುದಾಗಿ ತೀರ್ಮಾನಿಸಿ ಆರೋಪಿತರು ಹಾಕಿದ್ದ ಅರ್ಜಿಯನ್ನು ವಜಾಗೊಳಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ, ಅವಹೇಳನಕಾರಿ ಬರಹ, ದ್ವೇಷ, ಅಶಾಂತಿ ಹಾಗು ಕೋಮು ಸಂಘರ್ಷ ಉಂಟು ಮಾಡುವಂತಹ ಪೊಲೀಸ್ಟ್ ಹಾಕುವವರಿಗೆ ಇದೊಂದು ತಕ್ಕ ಪಾಠವಾಗಿದೆ.