ಕುಮಟಾ : ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ತಿರಸ್ಕರಿಸಿದ ಅರ್ಜಿಗೆ ಕುಮಟಾದಿಂದ ಸಹಸ್ರಾರು ಅರಣ್ಯವಾಸಿಗಳು ಮೇಲ್ಮನವಿ ಸಲ್ಲಿಸಲು ಅ.೪ ರಂದು ಶಿರಸಿ ಚಲೋ ಸಂಘಟಿಸುವ ಮೂಲಕ ಮೇಲ್ಮನವಿ ಅಭಿಯಾನದಲ್ಲಿ ಮೇಲ್ಮನವಿ ಸಲ್ಲಿಸಲು ತೀರ್ಮಾನಿಸಲಾಗಿದೆ ಎಂದು ಕುಮಟಾ ತಾಲೂಕಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ಮಂಜುನಾಥ ಮರಾಠಿ ನಾಗೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕುಮಟಾ ತಾಲೂಕಿನ ಮಾಸ್ತಿಕಟ್ಟ ಸಭಾಂಗಣದಲ್ಲಿ ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಸಂಚಾಲಕ ಮಹೇಶ ನಾಯ್ಕ ಕಾನಕ್ಕಿ ಇವರ ಅದ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ಮೇಲಿನಂತೆ ತೀರ್ಮಾನಿಸಲಾಗಿದೆ ಎಂದು ಅವರು ತಿಳಿಸಿದರು.

ಅರಣ್ಯ ಹಕ್ಕು ಸಮಿತಿಗೆ ಸಂಭಂಧಪಟ್ಟಂತೆ ಅಸ್ಥಿತ್ವವಿಲ್ಲದ ಸಮಿತಿ, ವಿಚಾರಣೆ, ನೋಟಿಸ್ ಪುನರ್ ಪರಿಶೀಲಿಸದೇ, ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಜಿಲ್ಲೆಯಲ್ಲಿ ೭೩,೨೦೬ ಅರ್ಜಿ ತಿರಸ್ಕರಿಸಿದ್ದು ಖೇದಕರ. ಭೂಮಿ ಹಕ್ಕಿನ ಅಸ್ಥಿತ್ವಕ್ಕಾಗಿ ಮೇಲ್ಮನವಿ ಸಲ್ಲಿಸುವುದು ಅನಿವಾರ್ಯವೆಂದು ಹೋರಾಟಗಾರರ ವೇದಿಕೆಯ ಜಿಲ್ಲಾ ಸಂಚಾಲಕ ಕಾನಕ್ಕಿ ಅವರು ಹೇಳಿದರು.
ಈ ಸಂದರ್ಭದಲ್ಲಿ ಸಂಚಾಲಕ ಮಹೇಂದ್ರ ನಾಯ್ಕ ಕತಗಾಲ, ಗಜಾನನ ನಾಯ್ಕ ಸಾಲ್ಕೋಡ, ಅಮೋಜ್ ಮಲ್ಲಾಪುರ, ಸೀತಾರಮ ಬುಗರಿಬೈಲ್ ಗಣಪತಿ ಮಾರಾಠಿ. ಶ್ರೀಮತಿ ಸುನಿಲಾ ಹರಿಕಾಂತ್ರ, ಸಭೆಯಲ್ಲಿ ಮಾತನಾಡಿದರು. ಸಭೆಯಲ್ಲಿ ಸುರೇಶ್ ಭಟ್ ನಾಗೂರು, ಶಾಂತಿ ಮುಕ್ರಿ ನಿಲ್ಕೋಡ, ಶಂಕರ ಗೌಡ ಕಂದವಳ್ಳಿ, ಯೋಗೇಶ ಗೌಡ ಬೆಟ್ಕುಳಿ, ಯಾಕುಬ್ ಸಾಬ ಬೆಟ್ಕುಳಿ, ಜಗದೀಶ ನಾಯ್ಕ ಕತಗಾಲ, ಕೆ.ಜೆ ಜೋರ್ಜ ಮುಂತಾದವರು ಚರ್ಚೆಯಲ್ಲಿ ಭಾಗವಹಿಸಿದರು.
ಕುಮಟಾ – ೬೧೬೦ ತಿರಸ್ಕಾರ
ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ ತಿರಸ್ಕರಿಸಿದ ಪಟ್ಟಿಯಲ್ಲಿ ಕುಮಟಾ ತಾಲೂಕಿನಲ್ಲಿ ೬೬೩೦ ಅರ್ಜಿ ಸಲ್ಲಿಸಿದ್ದು, ಅವುಗಳಲ್ಲಿ ೬೧೬೦ ಅರ್ಜಿಗಳು ತಿರಸ್ಕಾರವಾಗಿದೆ. ಕೇವಲ ೧೩೭ ಅರ್ಜಿಗಳಿಗೆ ಮಾತ್ರ ಮಾನ್ಯತೆ ದೊರಕಿದೆ ಎಂದು ಕುಮಟಾ ಅಧ್ಯಕ್ಷ ಮಂಜುನಾಥ ಮರಾಠಿ ಹೇಳಿದರು.