ಕುಮಟಾ : ಜಸ್ಟೀಸ್ ಕೆ. ಎಸ್. ಹೆಗ್ಡೆ ಚಾರಿಟೇಬಲ್ ಆಸ್ಪತ್ರೆ ದೇರಳಕಟ್ಟೆ, ಮಂಗಳೂರು, ಶ್ರೀರಾಮಚಂದ್ರಾಪುರ ಮಠ ಹೊಸನಗರ ಸೇವಾಖಂಡದ ಯೋಗ ಕ್ಷೇಮ ವಿಭಾಗ, ಕುಮಟಾ ಹವ್ಯಕ ಮಂಡಲ ಹಾಗೂ ಸಹಾಯ ವಿಭಾಗ ಹವ್ಯಕ ವಲಯ ಮೂರೂರು ಕಲ್ಲಬ್ಬೆ, ವಿದ್ಯಾನಿಕೇತನ ಮತ್ತು ಹಳೆಯ ವಿದ್ಯಾರ್ಥಿಗಳ ಸಂಘ ಮೂರೂರು ಕಲ್ಲಬ್ಬೆ, ಜನಪರ ಹೋರಾಟ ವೇದಿಕೆ ಉ.ಕ ಮತ್ತು ಸೀನಿಯರ್ ಛೇಂಬರ್ ಇಂಟರ್ ನ್ಯಾಷನಲ್ ಕುಮಟಾ ಲೀಜನ ಇವರ ಜಂಟಿ ಆಶ್ರಯದಲ್ಲಿ ಅ. 5 ರ ಭಾನುವಾರದಂದು ತಾಲೂಕಿನ ಪ್ರಗತಿ ವಿದ್ಯಾಲಯ ಮೂರೂರು ಕಲ್ಲಬ್ಬೆ ಆವಾರದಲ್ಲಿ ಬೆಳಿಗ್ಗೆ 9.00 ರಿಂದ 1.00 ರವರೆಗೆ “ಉಚಿತ ಆರೋಗ್ಯ ತಪಾಸಣಾ ಶಿಬಿರ” ಹಮ್ಮಿಕೊಳ್ಳಲಾಗಿದೆ. ಈ ಶಿಬಿರದಲ್ಲಿ ನುರಿತ ವೈದ್ಯರುಗಳು ಇರಲಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಇದರ ಸದುಪಯೋಗ ಪಡೆಯುವಂತೆ ಜನಪರ ಹೋರಾಟ ವೇದಿಕೆಯ ಸಂಸ್ಥಾಪಕ ಎಂ.ಜಿ ಭಟ್ಟ ವಿನಂತಿಸಿದರು. ಕುಮಟಾದ ಖಾಸಗಿ ಹೊಟೆಲ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.
ಕುಮಟಾ ಹೊನ್ನಾವರದಲ್ಲಿ ಸಾಮಾನ್ಯ ವೈದ್ಯರನ್ನು ಭೇಟಿಮಾಡಿದವರಿಗೆ ಉನ್ನತ ಶಸ್ತ್ರಚಿಕ್ಸೆಗೆ ಮಂಗಳೂರಿನಂತಹ ಆಸ್ಪತ್ರೆಗೆ ತೆರಳಲು ಹೇಳುತ್ತಾರೆ. ಆದರೆ ಹಲವರಿಗೆ ಇದು ಸಾಧ್ಯವಾಗುವುದಿಲ್ಲ. ಹೀಗಾಗಿ ಆರೋಗ್ಯವಂತ ಸಮಾಜ ನಿರ್ಮಾಣದಲ್ಲಿ ಜೊತೆಯಾಗಬೇಕು ಎಂಬ ನಿಟ್ಟಿನಲ್ಲಿ, ಜಸ್ಟೀಸ್ ಕೆ. ಎಸ್. ಹೆಗ್ಡೆ ಚಾರಿಟೇಬಲ್ ಆಸ್ಪತ್ರೆಯ ಸಹಕಾರದೊಂದಿಗೆ ಕುಮಟಾದಲ್ಲಿ ಆರೋಗ್ಯ ಶಿಬಿರ ಹಮ್ಮಿಕೊಂಡಿದ್ದೇವೆ. ಇದಕ್ಕೆ ಜನತೆಯ ಸಹಕಾರ ಅಗತ್ಯವಾಗಿದೆ ಎಂದರು.

ಪ್ರಗತಿ ವಿದ್ಯಾಲಯ ಮೂರೂರು ಕಲ್ಲಬ್ಬೆಯ ಕಾರ್ಯಾಧ್ಯಕ್ಷ ಆರ್. ಜಿ ಭಟ್ಟ ಮಾತನಾಡಿ, ನಮ್ಮ ಸಂಸ್ಥೆಯ ಸಹಯೋಗದಲ್ಲಿ ನಡೆಯುವ ಈ ಶಿಬಿರವನ್ನು ಜನರಿಗೆ ಆರೋಗ್ಯದ ಅರಿವೂ ಮೂಡಬೇಕು, ಚಿಕಿತ್ಸೆಯೂ ಸಿಗಬೇಕೆಂಬ ನಿಟ್ಟಿನಲ್ಲಿ ಸಂಯೋಜಿಸಲಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಡಾ. ಎಸ್.ವಿ ಭಟ್ಟ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ರೋಗಿಗಳು ಗೂಗಲ್ ಹಾಗೂ ಯೂಟ್ಯೂಬ್ ಗಳನ್ನು ನೋಡಿ ಅವರೇ ಚಿಕಿತ್ಸೆ ಪಡೆಯುತ್ತಿದ್ದಾರೆ. ವೈದ್ಯರುಗಳ ಸಹಾಯದಿಂದ ಚಿಕಿತ್ಸೆ ಪಡೆದರೆ ಬದುಕು ಸರಿಯಾಗಿರುತ್ತದೆ. ಹೀಗಾಗಿ ಬಡವರಿಗೆ ಅನುಕೂಲವಾಗಲಿ ಎನ್ನುವ ದೃಷ್ಟಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ. ಅನೇಕ ಬಡವರಿಗೆ ನೆರವಾಗಿರುವ ಜಸ್ಟೀಸ್ ಕೆ. ಎಸ್. ಹೆಗ್ಡೆ ಚಾರಿಟೇಬಲ್ ಆಸ್ಪತ್ರೆಯ ವೈದ್ಯರುಗಳು ಬರಲಿದ್ದು, ಶಿಬಿರದಲ್ಲಿ ಜನರಲ್ ಮೆಡಿಸಿನ್, ಶ್ವಾಸಕೋಶ ಸಂಬಂಧಿ ಖಾಯಿಲೆಗಳು, ಶಸ್ತ್ರಚಿಕಿತ್ಸೆ ವಿಭಾಗ, ಕಿವಿ ಮೂಗು ಗಂಟಲು ಚಿಕಿತ್ಸೆ, ಹೃದಯರೋಗ, ಚರ್ಮರೋಗ ಚಿಕಿತ್ಸೆ, ಎಲುಬು ಮತ್ತು ಕೀಲು ಚಿಕಿತ್ಸೆ, ಬೆನ್ನುಮೂಳೆ ಚಿಕಿತ್ಸೆ, ಮೊಣಕಾಲಿನ ಚಿಕಿತ್ಸೆ, ಕ್ಯಾನ್ಸರ್ ಚಿಕಿತ್ಸೆ, ಅಪೆಂಡಿಕ್ಸ್, ಅಲ್ಸರ್, ಥೈರಾಯಿಡ್, ಹರ್ನಿಯಾ ಚಿಕಿತ್ಸೆ, ಗರ್ಭಕೋಶದ ಗಡ್ಡೆ, ಮೂಲವ್ಯಾಧಿ, ಸಂಧಿವಾತ, ಉದರ ಸಂಬಂಧಿ ಖಾಯಿಲೆ, ವರಿಕೋಸ್ ವೇನ್, ನರ ಸಂಬಂಧಿ ಚಿಕಿತ್ಸೆಗಳ ತಪಾಸಣೆ ನಡೆಸಲಾಗುವುದು. ಡಾ. ಟೊನಿಟ ಮಾರಿಯೊಲ್ಲ ನೊರೊನ್ಹಾ (ಚರ್ಮರೋಗ ತಜ್ಞರು), ಡಾ. ನೀಮ ಕೆ. (ಕಿವಿ, ಮೂಗು ಗಂಟಲು ತಜ್ಞರು), ಡಾ. ಚೇತನ ಸುಬ್ರಮಣ್ಯ (ವೈದ್ಯಕೀಯ ತಜ್ಞರು) ಡಾ. ಕಿರಣ್ ಹರಿ(ಎಲುಬು ಮತ್ತು ಕೀಲು ತಜ್ಞರು), ಡಾ. ಅನೀಷ್ ಎ. ಶೆಟ್ಟಿ (ಶಸ್ತ್ರಚಿಕಿತ್ಸಾ ತಜ್ಞರು) ಈ ಶಿಬಿರದಲ್ಲಿ ಇರುವರು ಎಂದರು.
ರಾಮಚಂದ್ರಾಪುರ ಮಠದ ಕುಮಟಾ ಹವ್ಯಕ ಮಂಡಲದ ಅಧ್ಯಕ್ಷ ಎಸ್. ವಿ ಹೆಗಡೆ ಎಲ್ಲಾ ಸಮಾಜದವರೂ ಬಂದು ಈ ಶಿಬಿರದ ಪ್ರಯೋಜನ ಪಡೆಯಲು ವಿನಂತಿಸಿದರು. ಯೋಗಕ್ಷೇಮ ವಿಭಾಗದ ಸತೀಶ ಭಟ್ಟ, ಪ್ರದೀಪ ಹೆಗಡೆ, ಜನಪರ ಹೋರಾಟ ವೇದಿಕೆಯ ಜಿಲ್ಲಾಧ್ಯಕ್ಷ ಹೇಮಂತ ಕುಮಾರ್, ಬಿಜೆಪಿ ಯುವಮೋರ್ಚಾದ ಜಯಾ ಶೇಟ್, ಸಹಾಯ ವಿಭಾಗದ ಸುರೇಶ ಭಟ್ಟ ಇತರರು ಇದ್ದರು.