ಕುಮಟಾ : ತಾಲೂಕಿನಲ್ಲಿ ಹಲವೆಡೆ ರಸ್ತೆಗಳು ಹದಗೆಟ್ಟಿದ್ದು, ಸಾರ್ವಜನಿಕರ ಅನುಕೂಲಕ್ಕಾಗಿ ಜಿ.ಎಸ್.ಬಿ ಯುವ ಸೇವಾ ವಾಹಿನಿಯ ತಂಡದವರು ರಸ್ತೆಯ ಹೊಂಡಗಳನ್ನು ಮುಚ್ಚುವ ಮೂಲಕ ಜನೋಪಯೋಗಿ ಕಾರ್ಯದಲ್ಲಿ ತೊಡಗಿಕೊಂಡು ಇತರ ಸಂಘಟನೆಗಳಿಗೆ ಮಾದರಿಯಾಗಿದ್ದಾರೆ.
ಇವರು ಕುಮಟಾ ಪಟ್ಟಣದ ಮಧ್ಯ ಭಾಗದಲ್ಲಿರುವ ಸುಭಾಷ್ ರಸ್ತೆ ಹಾಗೂ ಚಿತ್ರಗಿ ತೆರಳುವ ರಸ್ತೆಗಳಲ್ಲಿ ಇರುವ ದೊಡ್ಡ ಗುಂಡಿಗಳನ್ನು ಕಾಂಕ್ರೀಟ್ ನಿಂದ ಮುಚ್ಚಿ ಒಂದು ಬದಿಯಲ್ಲಿ ಪ್ಯಾಚ್ ವರ್ಕ್ ಕೆಲಸ ಮಾಡಿ ಕಾರ್ತಿಕ ಹುಣ್ಣಿಮೆಯ ದಿನ ರಥ ಬೀದಿಯ ಐದು ದೇವರುಗಳ ನಗರಹೋತ್ಸವ ರಥಯಾತ್ರೆಗೆ ಹಾಗೂ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಕಾರ್ಯಮಾಡಿದ್ದಾರೆ. ಜೊತೆಗೆ ಮೂರುಕಟ್ಟೆ ಹಾಗೂ ಬಸ್ತಿಪೇಟೆ ರಸ್ತೆಯಲ್ಲಿರುವ ಗುಂಡಿಗಳನ್ನೂ ಸಹ ಮುಚ್ಚಿಸಲಾಗಿದೆ.

ವಿಶೇಷವಾಗಿ, ವಾಹನ ಸಂಚಾರರಿಗೆ ತೊಂದರೆಯಾಗದಂತೆ ರಾತ್ರಿಯ ಹೊತ್ತು ಕೆಲಸವನ್ನು ಮಾಡಿ ಎಲ್ಲಾ ದೊಡ್ಡ ಪ್ರಮಾಣದ ಗುಂಡಿಗಳನ್ನು ಮುಚ್ಚಿಸಿದ ಜಿ .ಎಸ್ .ಬಿ ಯುವ ಸೇವಾ ವಾಹಿನಿಯ ತಂಡದ ಸದಸ್ಯರ ಕಳಕಳಿಗೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಈ ಬಗ್ಗೆ ಜಿ.ಎಸ್.ಬಿ ಯುವ ಸೇವಾ ವಾಹಿನಿ ಅಧ್ಯಕ್ಷ ಅನಂತ ಶಾನಭಾಗ್ ಮಾತನಾಡಿ, ನಮ್ಮ ಕೆಲಸಕ್ಕೆ ಸಹಕರಿಸಿದ ದಾನಿಗಳಾದ ನಾರಾಯಣ ರಾಮದಾಸ ಶಾನಭಾಗ ಹೊನ್ಮಾವ್, ತಿವಿಕ್ರಮ್ ಮಾರುತಿ ಶಾನಭಾಗ, ಮಹೇಶ ಕಾಮತ್ ಅಳಿವೆಕೊಡಿ, ರಾಮನಾಥ ಶ್ರೀನಿವಾಸ ಶಾನಭಾಗ, ಶಂಕರ ಶಾನಭಾಗ ಹಾಗೂ ಯುವ ಸೇವಾ ವಾಹಿನಿಯ ಸರ್ವ ಪದಾಧಿಕಾರಿಗಳು ಹಾಗೂ ಸದಸ್ಯರು ಸಮಾಜ ಬಾಂಧವರ ಸಹಕಾರದಿಂದ ನಮಗೆ ಈ ಕೆಲಸ ಮಾಡಲು ಅನುಕೂಲವಾಯಿತು ಎಂದು ವಿವರಿಸಿದರು.