ಕುಮಟಾ : ತಾಲೂಕಿನ ಹೊಳೆಗದ್ದೆ ಟೋಲ್ ಬಳಿ ಅಕ್ರಮವಾಗಿ ೧೪ ಜಾನುವಾರುಗಳನ್ನು ಕಂಟೇನರ್ ಲಾರಿಯಲ್ಲಿ ಹಿಂಸಾತ್ಮಕವಾಗಿ ತುಂಬಿಕೊಂಡು ಸಾಗಿಸುತ್ತಿದ್ದುದವರನ್ನು ಕುಮಟಾ ಪೊಲೀಸರು ಹೆಡೆಮುರಿ ಕಟ್ಟಿದ ಘಟನೆ ನಡೆದಿದೆ. ಈ ಕೃತ್ಯದಲ್ಲಿ ತೊಡಗಿದ್ದ ಓರ್ವ ಆರೋಪಿಯನ್ನು ಪೊಲೀಸರು ಬಂದಿಸಿದ್ದಾರೆ.
ಟಾಟಾ ಗೂಡ್ಸ ಕಂಟೇನರ್ ಲಾರಿಯಲ್ಲಿ ಎಲ್ಲಿಂದಲೋ ೧೪ ಜಾನುವಾರುಗಳನ್ನು ತುಂಬಿಕೊಂಡು, ಜಾನುವಾರುಗಳಿಗೆ ನಿಲ್ಲಲು, ಮಲಗಲೂ ಆಗದಂತೆ, ಮೇವು, ನೀರಿನ ವ್ಯವಸ್ಥೆಯೂ ಇಲ್ಲದೇ ವಧೆ ಮಾಡುವ ಉದ್ದೇಶದಿಂದ ಅತ್ಯಂತ ಹಿಂಸಾತ್ಮಕವಾಗಿ ರಾ.ಹೆ. ೬೬ ರಲ್ಲಿ ಸಾಗಿಸಲಾಗುತ್ತಿತ್ತು.

ಜಾನುವಾರು ಅಕ್ರಮ ಸಾಗಾಟದ ಶಂಕೆಯಿಂದ ತಾಲೂಕಿನ ಹೊಳೆಗದ್ದೆ ಟೋಲ್ ಬಳಿ ಬುಧವಾರ ತಡರಾತ್ರಿ ಪೊಲೀಸರು ತಪಾಸಣೆ ನಡೆಸಿದಾಗ ಟಾಟಾ ಕಂಟೇನರ್ ಲಾರಿಯಲ್ಲಿ ೧೪ ಜಾನುವಾರುಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದುದು ಪತ್ತೆಯಾಗಿದೆ. ಲಾರಿಯಲ್ಲಿದ್ದ ೧೪ ಜಾನುವಾರುಗಳ ಪೈಕಿ ೫ ಜಾನುವಾರುಗಳು ಹಿಂಸಾತ್ಮಕವಾಗಿ ತುಂಬಿದ್ದರಿಂದ ಲಾರಿಯಲ್ಲೇ ಮೃತಪಟ್ಟಿದ್ದವು. ಉಳಿದ ೯ ಜಾನುವಾರು ವಶಪಡಿಸಿಕೊಳ್ಳಲಾಗಿದೆ.
ಸುಮಾರು ೨.೨೫ ಲಕ್ಷರೂ ಅಂದಾಜು ಮೌಲ್ಯದ ಜಾನುವಾರು ಇದಾಗಿದೆ. ಲಾರಿ ಚಾಲಕ ಮಹಾರಾಷ್ಟ್ರದ ಠಾಣಾ ಜಿಲ್ಲೆಯ ನಿಜಾಂಪುರದ ಭಿವಂಡಿ ಅಮಿನಾಭಾಗ ನಿವಾಸಿ ಅನ್ಸಾರಿ ಮಹಮದ್ ಸಲ್ಮಾನ ಮಕ್ಸೂದ ಆಲಮ್(೨೨)ನನ್ನು ಬಂಧಿಸಲಾಗಿದೆ.
ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಇತರ ೬ ಮಂದಿ ಆರೋಪಿಗಳಾದ ಮಹಾರಾಷ್ಟ್ರದ ಸಮೀರ ಶೇಖ, ಜಾವೇದ ಮುಲ್ಲಾ, ಭಟ್ಕಳದ ಹನೀಫಾಬಾದ್ ನಿವಾಸಿ ಆಶೀಫ್ ಲತೀಫ ಕೋಲಾ, ಭಟ್ಕಳ ಆಝಾದನಗರದ ಅಫ್ಜಲ್ ತಲ್ಹಾ ಖಾಸಿಂಜಿ, ಭಟ್ಕಳ ಕಾರಗದ್ದೆಯ ಮದಸೀರ್ ಮಹಮದ್ ಅಲಿ ಕೋಲಾ ಹಾಗೂ ಕಂಟೇನರ್ ಮಾಲೀಕನ ಪತ್ತೆಗೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.