ಕುಮಟಾ : ರವಿವಾರ ರಥಸಪ್ತಮಿ ಹಬ್ಬದ ಪ್ರಯುಕ್ತ, ಕುಮಟಾ ಡಿಪೋ ಬಳಿ ಕಾರ್ಯನಿರ್ವಹಿಸುತ್ತಿರುವ ಪತಂಜಲಿ ಯೋಗ ಸಮಿತಿಯ ವತಿಯಿಂದ ಕುಮಟಾದ ವನ್ನಳ್ಳಿ ಬೀಚ್ನಲ್ಲಿ ಮುಂಜಾನೆ 5.30ಕ್ಕೆ ವಿಶೇಷ ಯೋಗ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಅಂಗವಾಗಿ ಮೊದಲು ಹವನವನ್ನು ನೆರವೇರಿಸಿ, ನಂತರ ಸಮಿತಿಯ ಎಲ್ಲ ಯೋಗಾಭ್ಯರ್ಥಿಗಳು 108 ಸಾಮೂಹಿಕ ಸೂರ್ಯನಮಸ್ಕಾರಗಳನ್ನು ಮಾಡುವ ಮೂಲಕ ರಥಸಪ್ತಮಿಯನ್ನು ಭಕ್ತಿಭಾವದಿಂದ ಆಚರಿಸಿದರು. ಈ ಸಂದರ್ಭದಲ್ಲಿ ಯೋಗವು ದೈಹಿಕ ಶಕ್ತಿ, ನಮ್ಯತೆ, ಮಾನಸಿಕ ಶಾಂತಿ ಹಾಗೂ ಒಟ್ಟಾರೆ ಆರೋಗ್ಯವನ್ನು ಸುಧಾರಿಸುವ ಸಮಗ್ರ ಜೀವನಶೈಲಿಯಾಗಿದೆ ಎಂಬುದನ್ನು ವಿವರಿಸಲಾಯಿತು.

ಯೋಗಾಭ್ಯಾಸವು ಒತ್ತಡವನ್ನು ಕಡಿಮೆ ಮಾಡುವುದು, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದು ಹಾಗೂ ಏಕಾಗ್ರತೆಯನ್ನು ವೃದ್ಧಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ನಿಯಮಿತ ಯೋಗಾಭ್ಯಾಸದಿಂದ ದೀರ್ಘಕಾಲದ ಕಾಯಿಲೆಗಳನ್ನು ತಡೆದು ದೈಹಿಕ–ಮಾನಸಿಕ ಸಮತೋಲನವನ್ನು ಕಾಪಾಡಿಕೊಳ್ಳಬಹುದು ಎಂದು ತಿಳಿಸಿದರು. ಕುಮಟಾದ ಸರ್ವ ಜನರು ಪ್ರತಿನಿತ್ಯ ಯೋಗಾಭ್ಯಾಸದಲ್ಲಿ ತೊಡಗಿಸಿಕೊಳ್ಳುವಂತೆ ಹಾಗೂ ತಮ್ಮ ಆರೋಗ್ಯದ ಬಗ್ಗೆ ಜಾಗರೂಕರಾಗುವಂತೆ ಪ್ರೇರಣೆ ನೀಡಲಾಯಿತು.
ಈ ಕಾರ್ಯಕ್ರಮವು ಜಿಲ್ಲಾ ಪ್ರಭಾರಿ ನಾಗೇಂದ್ರ ಭಟ್, ತಾಲೂಕಾ ಪ್ರಭಾರಿ ದಿನೇಶ್ ರೇವಣಕರ್ ಹಾಗೂ ವಿನಾಯಕ ಭಟ್ ಅವರ ಉಪಸ್ಥಿತಿಯಲ್ಲಿ ಯಶಸ್ವಿಯಾಗಿ ನಡೆಯಿತು.