ಕುಮಟಾ: ರಾಷ್ಟ್ರಕವಿ ಡಾ.ಜಿ.ಎಸ್.ಎಸ್. ಪ್ರತಿಷ್ಠಾನ (ರಿ.) ಶಿವಮೊಗ್ಗ ವತಿಯಿಂದ ಅವರ ಜನ್ಮ ಶತಮಾನೋತ್ಸವದ ಅಂಗವಾಗಿ ಏರ್ಪಡಿಸಿದ್ದ ರಾಜ್ಯ ಮಟ್ಟದ ಗೀತಗಾಯನ ಸ್ಪರ್ಧೆಯಲ್ಲಿ ಕುಮಟಾದ ಕೂಜಳ್ಳಿಯ ಸಂಧ್ಯಾ ವಿನಾಯಕ ಹೆಗಡೆ ದ್ವಿತೀಯ ಬಹುಮಾನವನ್ನು ಪಡೆದಿದ್ದು, ಬಹುಮಾನ ಮತ್ತು ನಗದು ಪುರಸ್ಕಾರವನ್ನು ಶಿವಮೊಗ್ಗದ ಕರ್ನಾಟಕ ಸಂಘದಲ್ಲಿ ನಡೆದ ಸಮಾರಂಭದಲ್ಲಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡ್ಯೂರಪ್ಪ ಅವರಿಂದ ಸ್ವೀಕರಿಸಿದರು. ಈ ಸ್ಪರ್ಧೆಯಲ್ಲಿ ಕರ್ನಾಟಕದ ವಿವಿಧ ಭಾಗದ 83 ಸ್ಪರ್ಧಾಳುಗಳು ಭಾಗವಹಿಸಿದ್ದರು.
ಸಿ.ಎ. ವಿನಾಯಕ ಹೆಗಡೆ ಅವರ ಧರ್ಮಪತ್ನಿಯಾದ ಇವರು ಪತಿಯ ಕಚೇರಿ ಕೆಲಸಕ್ಕೆ ಸಹಕರಿಸುತ್ತಲೇ ಸಂಗೀತ ಸಾಧನೆಯನ್ನೂ ಮಾಡುತ್ತಿದ್ದಾರೆ. ಇವರು ಅನೇಕ ಸಾಮಾಜಿಕ ಚಟುವಟಿಕೆಗಳಲ್ಲೂ ತೊಡಗಿಸಿಕೊಂಡಿದ್ದು ರಾಜ್ಯಮಟ್ಟದ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದಿರುವುದಕ್ಕೆ ಅವರ ಸಂಗೀತದ ಗುರುಗಳಾದ ಸ್ವರಾತ್ಮ ಗುರುಕುಲದ ಪ್ರಾಚಾರ್ಯ ಡಾ. ಹರೀಶ ಹೆಗಡೆ ಹಾಗೂ ಅವರ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ಯು ಟ್ಯೂಬ್ ನಲ್ಲಿ ಇವರು ಹಾಡಿದ ಅನೇಕ ಭಜನೆ, ಭಕ್ತಿ ಗೀತೆ ಹಾಗೂ ಭಾವಗೀತೆಗಳು ಈಗಾಗಲೇ ಅಪಾರ ಜನಮೆಚ್ಚುಗೆ ಪಡೆದಿರುವುದನ್ನು ಸ್ಮರಿಸಬಹುದು.
