ಕುಮಟಾ : ಸತ್ವಾಧಾರ ಫೌಂಡೇಶನ್ (ರಿ.), ಸಂಕೊಳ್ಳಿ, ಹಳದೀಪುರ ಇದರ ವತಿಯಿಂದ “ಅಕ್ಷರದಿಂದ ಆತ್ಮಜಾಗೃತಿ” ಎಂಬ ವಿನೂತನ ಸಾಮಾಜಿಕ ಚಿಂತನ ಕಾರ್ಯಕ್ರಮವು ಜೂನ್ 28 ಭಾನುವಾರ ಸಂಜೆ 5.00 ಗಂಟೆಗೆ ಕುಮಟಾ ತಾಲೂಕಿನ ಹೆಗಡೆಯಲ್ಲಿರುವ ಆಯಿ ಪುಸ್ತಕ ಮನೆ ಆವರಣದಲ್ಲಿ (ಶ್ರೀ ರವೀಂದ್ರ ಭಟ್ಟ ಸೂರಿಯವರ ನಿವಾಸ) ನಡೆಯಲಿದೆ.
ಕಾರ್ಯಕ್ರಮದಲ್ಲಿ ಸಂಸ್ಕೃತ ಪ್ರಾಧ್ಯಾಪಕರು ಹಾಗೂ ಖ್ಯಾತ ವಾಗ್ಮಿಗಳಾದ ಡಾ. ಕೇಶವ ಕಿರಣ ಅವರು “ಅಕ್ಷರ ಆರಾಧನೆಯ ಮಹತ್ವ ಮತ್ತು ಆತ್ಮಜಾಗೃತಿ” ಕುರಿತು ದಿಕ್ಸೂಚಿ ಮಾತುಗಳನ್ನಾಡಲಿದ್ದಾರೆ.

ಖ್ಯಾತ ನಿರೂಪಕರು ಹಾಗೂ ಪ್ರಶಸ್ತಿ ವಿಜೇತ ಶಿಕ್ಷಕ ರವೀಂದ್ರ ಭಟ್ಟ ಸೂರಿ ಅವರ ಲೇಖನಿಯಿಂದ ಮೂಡಿಬಂದ “ಹನಿ ಹನಿ ಇಬ್ಬನಿ ಹನಿಗವನಗಳ ಕೃತಿಯನ್ನು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಖ್ಯಾತ ಯಕ್ಷಗಾನ ಕಲಾವಿದ ಕೃಷ್ಣ ಯಾಜಿ ಬಳ್ಕೂರು ಅವರು ಲೋಕಾರ್ಪಣೆ ಮಾಡಲಿದ್ದಾರೆ.
ಇದೇ ಸಂದರ್ಭದಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಪಿ. ಆರ್. ನಾಯ್ಕ ಹೊಳೆಗದ್ದೆ ಅವರಿಗೆ “ಸಾಧಕ ಗೌರವ” ನೀಡಿ ಸನ್ಮಾನಿಸಲಾಗುವುದು. ಜೊತೆಗೆ ಆಯಿ ಪುಸ್ತಕ ಮನೆಗೆ ಪುಸ್ತಕಗಳ ಕೊಡುಗೆ ನೀಡುವ ಕಾರ್ಯಕ್ರಮವೂ ನಡೆಯಲಿದೆ.
ಕಾರ್ಯಕ್ರಮದ ಅಂಗವಾಗಿ ಅಕ್ಷರ ಆರಾಧನೆಯ ಮಹತ್ವ ಸಾರುವ ವಿಶೇಷ ಉಪನ್ಯಾಸ, ಯಕ್ಷಗಾನ ಗೀತೆಗಳು ಹಾಗೂ ವಾಕ್ಚಾತುರ್ಯದ ಚಮತ್ಕಾರಿಕ ಕಾರ್ಯಕ್ರಮಗಳು ನಡೆಯಲಿದ್ದು, ಸಾಹಿತ್ಯ, ಶಿಕ್ಷಣ ಮತ್ತು ಸಂಸ್ಕೃತಿ ಕ್ಷೇತ್ರದ ಆಸಕ್ತರಿಗೆ ಇದು ವಿಶಿಷ್ಟ ಅನುಭವವಾಗಲಿದೆ.
ಸಾಹಿತ್ಯಾಸಕ್ತರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಆಯಿ ಪುಸ್ತಕ ಮನೆಯ ಸಂಸ್ಥಾಪಕ ರವೀಂದ್ರ ಭಟ್ಟ ಸೂರಿ ಮತ್ತು ಸತ್ವಾಧಾರ ಫೌಂಡೇಶನ್ (ರಿ.) ಸಂಸ್ಥಾಪಕ ಗಣೇಶ ಜೋಶಿ ಸಂಕೊಳ್ಳಿ ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.