Satwadhara News

Day: April 12, 2025

  • ಪೇಟೆಗೆ ಹೋಗಲು ಸಿದ್ಧನಾಗುತ್ತಿದ್ದವ ಒಮ್ಮೆಲೇ ಹೌಹಾರಿದ.

    ಪೇಟೆಗೆ ಹೋಗಲು ಸಿದ್ಧನಾಗುತ್ತಿದ್ದವ ಒಮ್ಮೆಲೇ ಹೌಹಾರಿದ.

    ಶಿರಸಿ : ಪೇಟೆಗೆ ಹೋಗಲೆಂದು ಅಂಗಿ ತೊಟ್ಟು, ಪ್ಯಾಂಟ್ ತೊಡಲೆಂದು ಪ್ಯಾಂಟ್ ಗೆ ಕೈ ಹಾಕಿದ ಸಂದರ್ಭದಲ್ಲಿ ಹಾವೊಂದು ಸಿಕ್ಕಿ ವ್ಯಕ್ತಿ ಹೌಹಾರಿದ ಘಟನೆ ಶಿರಸಿ ನಾರಾಯಣಗುರು ನಗರದಲ್ಲಿ ನಡೆದಿದೆ.

    ಇಲ್ಲಿಯ ಮಾಂತೇಶ ಅವರು ಶುಕ್ರವಾರ ಸಂಜೆ ಪೇಟೆಗೆ ಹೋಗುವವರಿದ್ದರು. ಅಂಗಿ ಧರಿಸಿದ ಅವರು ಪ್ಯಾಂಟಿಗಾಗಿ ಕೈ ಹಾಕಿದರು. ಆಗ, ಅದರೊಳಗಿದ್ದ ನಾಗರ ಬುಸ್ ಎಂದಿದ್ದು, ಮಾಂತೇಶ್ ಅವರು ಬೆಚ್ಚಿ ಬಿದ್ದಿದ್ದಾರೆ.

    ತಕ್ಷಣ ಆ ಪ್ಯಾಂಟನ್ನು ನೆಲದ ಮೇಲೆ ಎಸೆದು ದೂರ ಸರಿದರು. ಕಂಗಾಲಾದ ಮಾಂತೇಶ ಅವರು ಜೋರಾಗಿ ಬೊಬ್ಬೆ ಹೊಡೆದರು. ಅದನ್ನು ಕೇಳಿ ಅಕ್ಕ-ಪಕ್ಕದವರು ಸಹ ಆಗಮಿಸಿದರು. ಬಳಿಕ ಉರಗತಜ್ಞ ಪ್ರಶಾಂತ ಹುಲೆಕಲ್ ಅವರನ್ನು ಜನ ಸ್ಥಳಕ್ಕೆ ಕರೆಯಿಸಿದರು.

    ಪ್ಯಾಂಟಿನ ಒಳಗೆ ಸಿಲುಕಿಕೊಂಡಿದ್ದ ಹಾವನ್ನು ಪ್ರಶಾಂತ ಹುಲೆಕಲ್ ಹೊರತೆಗೆದರು. ನಂತರ ಅದನ್ನು ಕಾಡಿಗೆ ಬಿಟ್ಟರು. ಮಾಂತೇಶ ಕುಟುಂಬದವರು ಸಹ ಇದರಿಂದ ನೆಮ್ಮದಿಯ ನಿಟ್ಟುಸಿರು ಬಿಟ್ಟರು.

  • ಬಾಡದ ಕಾಂಚಿಕಾಂಬೆಗೆ ಉಘೇ ಎಂದ ಭಕ್ತಗಣ

    ಬಾಡದ ಕಾಂಚಿಕಾಂಬೆಗೆ ಉಘೇ ಎಂದ ಭಕ್ತಗಣ

    ಕುಮಟಾ : ಜಿಲ್ಲೆಯ ಪ್ರಸಿದ್ದ ಜಾತ್ರೆಗಳಲ್ಲಿ ಒಂದಾದ ಕುಮಟಾ ತಾಲೂಕಿನ ಶ್ರೀ ಕಾಂಚಿಕಾ ಪರಮೇಶ್ವರಿ ದೇವರ ಜಾತ್ರಾ ಮಹೋತ್ಸವವು ಅತ್ಯಂತ ಅದ್ದೂರಿಯಾಗಿ ನಡೆಯಿತು. ತಾಲೂಕಿನ ಸುತ್ತಮುತ್ತಲಿನಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸಿ ಶ್ರೀ ದೇವರ ದರ್ಶನ ಪಡೆದು, ರಥ ಎಳೆದು ಪುನೀತರಾದರು. ಸರ್ವಾಭರಣ ಭೂಷಿತೆಯಾದ ತಾಯಿ ಕಾಂಚಿಕಾ ಪರಮೇಶ್ವರಿ ಭಕ್ತರಿಂದ ಪೂಜೆ ಸ್ವೀಕರಿಸಿದಳು.

    ಪುರಾಣ ಪ್ರಸಿದ್ಧ ಬಾಡದ ಶ್ರೀ ಕಾಂಚಿಕಾ ಪರಮೇಶ್ವರಿ ದೇವಾಲಯವು ಅತ್ಯಂತ ಶಕ್ತಿಯುತ, ಭಕ್ತರ ಇಷ್ಟಾರ್ಥ ಸಿದ್ಧಿಕ್ಷೇತ್ರವಾಗಿದ್ದು, ಪ್ರತೀ ವರ್ಷವೂ ಇಲ್ಲಿ ಜಾತ್ರಾ ಮಹೋತ್ಸವ ನಡೆಯುತ್ತದೆ. ಅಂತೆಯೇ ಶನಿವಾರ ನಡೆದ ಶ್ರೀ ದೇವರ ಜಾತ್ರಾ ಮಹೋತ್ಸವವು ಅತ್ಯಂತ ವಿಜ್ರಂಭಣೆಯಿಯಿಂದ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನಡೆಯಿತು. ಸಾವಿರಾರು ಭಕ್ತರ ಒಗ್ಗೂಡುವಿಕೆಯಲ್ಲಿ ತಾಯಿ ಶ್ರೀ ಕಾಂಚಿಕಾoಬ ಪರಮೇಶ್ವರಿ ದೇವರ ಮಹಾ ರಥೋತ್ಸವು ಸಂಪನ್ನಗೊಂಡಿತು.

    ಇನ್ನು ಸಾರ್ವಜನಿಕರು ಇಷ್ಠಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿ ಶ್ರೀ ದೇವರಿಗೆ ಉಡಿ ಸೇವೆ, ಉರುಳು ಸೇವೆ, ತುಲಾಬಾರ ಸೇವೆ ಸೇರಿದಂತೆ ವಿವಿಧ ಸೇವೆಗಳನ್ನು ಸಲ್ಲಿಸುವುದು ಇಲ್ಲಿನ ವಿಶೇಷವಾಗಿದ್ದು, ಅದೇ ರೀತಿ ವಿವಿದೆಡೆಯಿಂದ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ ಭಕ್ತರು ತಾಯಿಗೆ ತಮ್ಮ ಕೈಲಾದ ಸೇವೆ ಸಲ್ಲಿಸಿದರು. ಸಾಯಂಕಾಲದ ವೇಳೆ ನಡೆದ ಮಹಾ ರಥದಲ್ಲಿ ಆಸಿನಳಾದ ಕಾಂಚಿಕಾಂಬೆಯನ್ನು ಕಣ್ತುಂಬಿಕೊಂಡು, ಸಂಪ್ರದಾಯದಂತೆ ರಥಕ್ಕೆ ಬಾಳೆ ಹಣ್ಣು ಎಸೆದು ಭಕ್ತರು ಕೃತಾರ್ಥರಾದರು.

  • ಕೃಷಿ ಹಾಗೂ ಗೋಪಾಲನೆ ಆರೋಗ್ಯಕರ ಜೀವನದ ಅಗತ್ಯತೆಗಳು : ಡಾ. ಸೌಮ್ಯಶ್ರೀ ಶರ್ಮಾ

    ಕೃಷಿ ಹಾಗೂ ಗೋಪಾಲನೆ ಆರೋಗ್ಯಕರ ಜೀವನದ ಅಗತ್ಯತೆಗಳು : ಡಾ. ಸೌಮ್ಯಶ್ರೀ ಶರ್ಮಾ

    ಸಿದ್ದಾಪುರ : ಇತ್ತೀಚಿನ ದಿನಗಳಲ್ಲಿ ಪ್ರತಿಯೊಂದು ಕುಟುಂಬವು ಆಧುನಿಕತೆಗೆ ತೆರೆದುಕೊಳ್ಳುವ ಭರದಲ್ಲಿ ಕೃಷಿಯಿಂದ ಹಾಗೂ ಗೋ ಸಾಕಾಣಿಕೆಯಿಂದ ವಿಮುಖವಾಗುತ್ತಿರುವುದು ವಿಷಾದನೀಯ ಸಂಗತಿಯಾಗಿದೆ, ಪ್ರತಿಯೊಬ್ಬರ ಆರೋಗ್ಯ ಪೂರ್ಣ ಜೀವನದಲ್ಲಿ ಇವು ಒಂದು ಭಾಗವಾಗಬೇಕಾಗಿದೆ ಎಂದು ಗೋಕರ್ಣದ ಸಸ್ಯ ಸಂಜೀವಿನಿ ಪಂಚಕರ್ಮ ಕೇಂದ್ರದ ಡಾ. ಸೌಮ್ಯಶ್ರೀ ಶರ್ಮಾ ಅವರು ಅಭಿಪ್ರಾಯ ಪಟ್ಟರು.

    ಸಿದ್ದಾಪುರ ತಾಲೂಕಿನ ಹಳ್ಳಿಬೈಲ್ ಗ್ರಾಮದ ಹುತ್ಗಾರ ಶಾಲೆ ಆವಾರದಲ್ಲಿ ಸ್ಪಂದನ ಟ್ರಸ್ಟ್ (ರಿ.) ಹಳ್ಳಿಬೈಲ್ ಆಯೋಜನೆಯ ಹನ್ನೊಂದನೇ ವರ್ಷದ ಹಳ್ಳಿಹಬ್ಬ – 2025 ರ ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ. ಸೌಮ್ಯಶ್ರೀ ಶರ್ಮಾ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

    “ಗ್ರಾಮದಿಂದ ಅನ್ಯೋನ್ಯ ಕಾರಣಗಳಿಗಾಗಿ ಷಹರ ಸೇರಿರುವ ಊರವರನ್ನು ಒಂದು ದಿನ ತಮ್ಮ ಹುಟ್ಟುರಿಗೆ ಕರೆಸಿ ಎಲ್ಲರೂ ಜೊತೆಯಾಗಿ ಹಳ್ಳಿಹಬ್ಬವನ್ನು ಆಚರಿಸುತ್ತಿರುವುದು ಇಂದಿನ ವಿದ್ಯಮಾನದಲ್ಲಿ ಸ್ಪಂದನ ಟ್ರಸ್ಟ್ ನ ಕಾರ್ಯ ಶ್ಲಾಘನೀಯವಾಗಿದೆ, ಹಾಗೆಯೇ ಹುತ್ಗಾರ ಶಾಲೆಯಲ್ಲಿ ಕಲಿಸಿದ ನಿವೃತ್ತ ಶಿಕ್ಷಕರನ್ನು ಗೌರವಿಸಿ ಅವರಿಂದ ಆಶೀರ್ವಾದ ಪಡೆಯುವ ಗುರುವಂದನೆ, ಹೃದಯಸ್ಪರ್ಶಿ ಕ್ಷಣಗಳು. ಅದರಲ್ಲೂ ಅಂಗನವಾಡಿ ಕೇಂದ್ರದಲ್ಲಿ ಕೆಲಸ ನಿರ್ವಹಿಸಿ ಸೇವಾ ನಿವೃತ್ತಿ ಹೊಂದಿದ ಶಿಕ್ಷಕರು ಹಾಗೂ ಸಹಾಯಕಿ ಇಬ್ಬರನ್ನೂ ಗೌರವಿಸುತ್ತಿರುವುದು ನಿಮ್ಮ ಊರು ಅವರ ಮೇಲಿಟ್ಟ ಪ್ರೀತಿಗೆ ಸಾಕ್ಷಿಯಾಗಿದೆ.

    ಒಂದು ಗ್ರಾಮದ ಅಥವಾ ಸಂಸ್ಥೆಯ ಒಗ್ಗಟ್ಟು ಕಷ್ಟದ ಸಮಯದಲ್ಲಿ ತಿಳಿಯುತ್ತದೆ, ಇಂದು ಮಳೆಯಿಂದ ಅನೇಕ ಸಮಸ್ಯೆಗಳು ಉದ್ಭವವಾಗಿ ಕಾರ್ಯಕ್ರಮ ತಡವಾಗಿ ಪ್ರಾರಂಭವಾದರು ಊರಿನ ಪ್ರತಿಯೊಬ್ಬರು ಒಬ್ಬರಿಗೊಬ್ಬರಿಗೆ ಸಹಕರಿಸುತ್ತಾ ಬಂದದ್ದು ನೋಡಿದರೆ ನಿಮ್ಮ ಊರಿನ ಸಹಬಾಳ್ವೆ ಉಳಿದವರಿಗೆ ಮಾದರಿಯಾಗಿದೆ ಎನ್ನುತ್ತಾ ತಮ್ಮ ಬಾಲ್ಯ ಜೀವನವನ್ನು ಮೆಲುಕು ಹಾಕಿ ಸಂತಸದ ನುಡಿಗಳನ್ನು ಹಂಚಿಕೊಂಡರು. ಡಾಕ್ಟರ್ ಆಗಿದ್ದರು ಸಹ, ಊರವರ ಜೊತೆಗೆ ಊರಿನವರಾಗೆ ಕಾಣಿಸಿಕೊಂಡದ್ದು ವಿಶೇಷವಾಗಿತ್ತು.

    ಈ ಸಂದರ್ಭದಲ್ಲಿ ಹುತ್ಗಾರ ಅಂಗನವಾಡಿ ಕೇಂದ್ರದ ನಿವೃತ್ತ ಶಿಕ್ಷಕಿ ಹೇಮಾವತಿ ಹೆಗಡೆ ಹಾಗೂ ಸಹಾಯಕಿ ಕಮಲಾ ಗೌಡ ಇವರನ್ನು ಟ್ರಸ್ಟ್ ನ ವತಿಯಿಂದ ಗೌರವಿಸಲಾಯಿತು. ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂಪೂರ್ಣ ಏಳು ವರ್ಷಗಳ ಕಾಲ ಅಧ್ಯಯನ ಮಾಡಿ ಕಳೆದ ಸಾಲಿನಲ್ಲಿ ಎಸ್.ಎಸ್. ಎಲ್. ಸಿ. ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ಕು‌. ಮಧುರಾ ಭಟ್ಟ ಹಾಗೂ ಕು. ವಿಜೇತಾ ಹೆಗಡೆ ಇವರಿಗೆ ಟ್ರಸ್ಟ್ ನ ವತಿಯಿಂದ ಪ್ರತಿಭಾ ಪುರಸ್ಕಾರವನ್ನು ನೀಡಲಾಯಿತು.

    ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹುತ್ಗಾರನ ಎಸ್.ಡಿ.ಎಮ್.ಸಿ ಅಧ್ಯಕ್ಷರು ಹಾಗೂ ಸ್ಪಂದನ ಟ್ರಸ್ಟ್ ನ ಕಾರ್ಯದರ್ಶಿಗಳಾದ ಗಣೇಶ ಹೆಗಡೆ ಬಿಳೇಕಲ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ನಿಲ್ಕುಂದ ಗ್ರಾಮ ಪಂಚಾಯತಿಯ ಅಧ್ಯಕ್ಷರು ಹಾಗೂ ಟ್ರಸ್ಟಿನ ಸದಸ್ಯರಾದ ರಾಜಾರಾಮ ಹೆಗಡೆ ಬಿಳೇಕಲ್ ತಮ್ಮ ಅನುಭವದ ಮಾತುಗಳನ್ನು ಹಂಚಿಕೊಂಡರು. ಟ್ರಸ್ಟಿನ ಅಧ್ಯಕ್ಷರಾದ ಪ್ರಸನ್ನ ಹೆಗಡೆ ಸೂರನಜಡ್ಡಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಅಧ್ಯಕ್ಷೀಯ ನುಡಿಗಳನ್ನಾಡಿದರು.
    ಭೂಮಿಕಾ ಭಟ್ಟ ಹಾಗೂ ಲತಾ ಹೆಗಡೆ ಅನಿಸಿಕೆಗಳನ್ನು ಹಂಚಿಕೊಂಡರು. ನಿತೀಶ್ ಹೆಗಡೆ ಹಾಗೂ ಸುಬ್ರಹ್ಮಣ್ಯ ಹೆಗಡೆ ಅತಿಥಿಗಳ ಹಾಗೂ ಗುರುಗಳ ಪರಿಚಯ ಮಾಡಿಕೊಟ್ಟರು.

    ಪನ್ನಗ ಹೆಗಡೆ ಸ್ವಾಗತಿಸಿದರು ಮತ್ತು ನರೇಂದ್ರ ಹೆಗಡೆ ವಂದಿಸಿದರು. ಕಿರಣ ಭಟ್ಟ ಹುತ್ಗಾರ ಕಾರ್ಯಕ್ರಮ ನಿರೂಪಿಸಿದರು. ಟ್ರಸ್ಟಿಗಳಾದ ಬಾಲಚಂದ್ರ ಹೆಗಡೆ, ದಿನೇಶ ಹೆಗಡೆ, ಪ್ರಸನ್ನ ಹೆಗಡೆ ಹಳ್ಳಿಬೈಲ್ ಸಹಕರಿಸಿದರು.

    ಸಭಾಕಾರ್ಯಕ್ರಮದ ನಂತರ ಅಂಗನವಾಡಿ ಹಾಗೂ ಹಿರಿಯ ಪ್ರಾರ್ಥಮಿಕ ಶಾಲಾ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು ಮತ್ತು ಊರಿನ ಹಿರಿ-ಕಿರಿಯ ಉದಯೋನ್ಮುಖ ಕಲಾವಿದರಗಳು ಜಾನಪದ ಸಂಗೀತ, ನೃತ್ಯ, ನಾಟಕ, ಬಿಂಗಿ ಕುಣಿತ, ಕೋಲಾಟ ಹೀಗೆ ಹಲವಾರು ಮನೋರಂಜನಾ ಕಾರ್ಯಕ್ರಮವನ್ನು ನೀಡಿದರು.

    ಗಜಾನನ ಹೆಗಡೆ ಸೂರನಜಡ್ಡಿ ಹಾಗೂ ಸಂಗಡಿಗರು ರುಚಿ-ಶುಚಿಯಾದ ಊಟವನ್ನು ನೆರೆದ 300ಕೂ ಹೆಚ್ಚು ಜನರಿಗೆ ಉಣಬಡಿಸಿದರು. ಉಮೇಶ ಹೆಗಡೆ ಕಲ್ಲಾರೆಮನೆ ಹಾಗೂ ಸಂಗಡಿಗರು ಲೈಟಿಂಗ್ ವ್ಯವಸ್ಥೆಯಲ್ಲಿ ಹಾಗೂ ಶ್ರೀ ಸೌಂಡ್ಸ್ ಹೆಗ್ಗರಣಿ ಇವರು ಧ್ವನಿವರ್ಧಕ ವ್ಯವಸ್ಥೆಯಲ್ಲಿ ಸಹಕರಿಸಿದರು.

  • AITM ಕೋಡ್‌ಫೆಸ್ಟ್ – ರಾಷ್ಟ್ರೀಯ ಮಟ್ಟದ ಹ್ಯಾಕಥಾನ್ AITM ಭಟ್ಕಳದಲ್ಲಿ ಉದ್ಘಾಟನೆ

    AITM ಕೋಡ್‌ಫೆಸ್ಟ್ – ರಾಷ್ಟ್ರೀಯ ಮಟ್ಟದ ಹ್ಯಾಕಥಾನ್ AITM ಭಟ್ಕಳದಲ್ಲಿ ಉದ್ಘಾಟನೆ

    AITM ಕೋಡ್‌ಫೆಸ್ಟ್ – ರಾಷ್ಟ್ರೀಯ ಮಟ್ಟದ ಹ್ಯಾಕಥಾನ್ ಇಂದು ಭಟ್ಕಳದ ಅಂಜುಮನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್‌ಮೆಂಟ್ (AITM) ನಲ್ಲಿ ಉದ್ಘಾಟನೆಗೊಂಡಿತು. ಮುಖ್ಯ ಅತಿಥಿಯಾಗಿ, AITM ನ ಹಳೆಯ ವಿದ್ಯಾರ್ಥಿ ಮತ್ತು ವಿನ್‌ಟೀಮ್ ಗ್ಲೋಬಲ್‌ನ ಸಂಸ್ಥಾಪಕ ಮತ್ತು ನಿರ್ದೇಶಕರಾದ ವಸೀಮ್ ಅಹ್ಮದ್, ಕ್ಯಾಂಪಸ್‌ನಿಂದ ಉದ್ಯಮಶೀಲತೆಯತ್ತ ತಮ್ಮ ಪ್ರಯಾಣದಿಂದ ಭಾಗವಹಿಸುವವರಿಗೆ ಸ್ಫೂರ್ತಿ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು AITM ನ ಕಾರ್ಯದರ್ಶಿ ಮೊಹಿದ್ದೀನ್ ರುಕ್ನುದ್ದೀನ್ ಅವರು ವಹಿಸಿದ್ದರು. ಪ್ರಾಂಶುಪಾಲ ಡಾ. ಕೆ. ಫಜ್ಲುರ್ ರೆಹಮಾನ್, ರಿಜಿಸ್ಟ್ರಾರ್ ಪ್ರೊ. ಜಾಹಿದ್ ಖರುರಿ, CSE ಮುಖ್ಯಸ್ಥ ಡಾ. ಅನ್ವರ್ ಶತಿಕ್ ಮತ್ತು ಸಂಯೋಜಕರಾದ ಪ್ರೊ. ಸಯೀದ್ ನೂರೈನ್ ಮತ್ತು ಪ್ರೊ. ಶ್ರೀಶೈಲ್ ಭಟ್ ಸಹ ಉಪಸ್ಥಿತರಿದ್ದರು, ನಾವೀನ್ಯತೆ ಮತ್ತು ಸಹಯೋಗದ ಮನೋಭಾವವನ್ನು ಪ್ರೋತ್ಸಾಹಿಸಿದರು.

    ದೇಶಾದ್ಯಂತ ಒಟ್ಟು 30 ತಂಡಗಳು ಈ 24 ಗಂಟೆಗಳ ಕೋಡಿಂಗ್ ಮ್ಯಾರಥಾನ್‌ನಲ್ಲಿ ಭಾಗವಹಿಸುತ್ತಿದ್ದು, ಅಲ್ಲಿ ಯುವ ಮನಸ್ಸುಗಳು ತಂತ್ರಜ್ಞಾನ-ಚಾಲಿತ ಪರಿಹಾರಗಳೊಂದಿಗೆ ನೈಜ-ಪ್ರಪಂಚದ ಸವಾಲುಗಳನ್ನು ಎದುರಿಸುತ್ತವೆ.

    ಈ ಕಾರ್ಯಕ್ರಮದ ಶೀರ್ಷಿಕೆ ಪಾಲುದಾರರಾಗಿ ನೀವಿಯಸ್ ಸೊಲ್ಯೂಷನ್ಸ್ ವಹಿಸಿತ್ತು. ಸಂಘಟನಾ ಪಾಲುದಾರರಾಗಿ ಡಿಜಿಸ್ಕ್ರಿಪ್ಟ್ ಟೆಕ್ನಾಲಜೀಸ್, ಸಹ ಪಾಲುದಾರರಾಗಿ ಮೊಹ್ತಿಶಮ್ ಬಿಲ್ಡರ್ಸ್, ಸ್ಪ್ರೌಟ್‌ಎಕ್ಸ್‌ಪಿ, ಐಟೆಕ್ಸ್ ಸೊಲ್ಯೂಷನ್ಸ್, ಎಮರ್ಟೆಕ್ಸ್ ಟೆಕ್ನಾಲಜೀಸ್, ತಹೂರ ಮತ್ತು ವಿಂಟೀಮ್ ಗ್ಲೋಬಲ್ ಇವರು ಸಹಕರಿಸಿದರು.

    ಒಟ್ಟು ಬಹುಮಾನ ಮೊತ್ತ ₹2 ಲಕ್ಷ ಆಗಿದ್ದು, ಮೊದಲ ಬಹುಮಾನ ₹60,000, ಎರಡನೇ ಬಹುಮಾನ ₹30,000 ಮತ್ತು ಮೂರನೇ ಬಹುಮಾನ ₹15,000. ನಾಳೆ ಸಂಜೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ವಿಜೇತರನ್ನು ಘೋಷಿಸಲಾಗುತ್ತದೆ ಮತ್ತು ಬಹುಮಾನ ನೀಡಲಾಗುತ್ತದೆ.