Home Information ವಟಸಾವಿತ್ರಿ ವೃತ 

ವಟಸಾವಿತ್ರಿ ವೃತ 

ಜೇಷ್ಟ ಶುಕ್ಲ ಹುಣ್ಣಿಮೆ ವಟಸಾವಿತ್ರಿ ವೃತ.

ಸಾವಿತ್ರಿಯು ತನ್ನ ಪತಿ ಸತ್ಯವಾನನು ಅಲ್ಪಾಯುಷಿಯೆಂದು ತಿಳಿದೂ ಸಾವಿತ್ರಿಯು ಅವನನ್ನು ವರಿಸುತ್ತಾಳೆ. ಆದರ್ಶ ಪತಿವೃತೆಯಾಗಿ ಗಂಡನ ಹಾಗೂ ಅತ್ತೆ ಮಾವ ಸೇವೆಯನ್ನು ಅತ್ಯಂತ ಭಕ್ತಿ ಶ್ರದ್ಧೆ ಯಿಂದ ಮಾಡುತ್ತಾ ತನ್ನ ಪತಿ ದೀರ್ಘಾಯುಷ್ಯವುಳ್ಳವನಾಗಬೇಕೆಂದು ಹಗಲಿರುಳು ಪರಮಾತ್ಮನ ಧ್ಯಾನದಲ್ಲಿಯೇ ಸಮಯವನ್ನು ಕಳೆಯುತ್ತಾಳೆ. ಆದರೆ ಬ್ರಹ್ಮ ಲಿಪಿಯಂತೆ ಪತಿಯು ಅಕಾಲಿಕ ಮರಣಕ್ಕೆ ತುತ್ತಾಗುತ್ತಾನೆ. ತನ್ನ ಗಂಡನ ಪ್ರಾಣವನ್ನು ಒಯ್ಯಲು ಬಂದ ಯಮನ ಭಟರನ್ನು ಅವಳು ತಡೆಯುತ್ತಾಳೆ. ಹೀಗಾಗಿ ಸ್ವತಃ ಯಮದೇವರು ಬಂದು ಪ್ರಾಣ ಹರಣ ಮಾಡಲು ಉದ್ಯುಕ್ತನಾದಾಗ ಸಾವಿತ್ರಿಯು ಯಮದೇವರನ್ನು ಅನನ್ಯ ಭಾವದಿಂದ ಬೇಡಿಕೊಳ್ಳುತ್ತಾಳೆ. ಯಮನು ಆಕೆಯ ಅಪ್ರತಿಮ ಪಾತಿವೃತ್ಯವನ್ನು ಮೆಚ್ಚಿಕೊಂಡು ಸಾವಿತ್ರಿಗೆ ಪತಿ ಭಿಕ್ಷೆಯನ್ನು ದಯಪಾಲಿಸುವದಲ್ಲದೆ ಪತಿಗೆ ದೀರ್ಘಾಯುಷ್ಯವನ್ನೂ, ಕಳೆದು ಹೋದ ಸಂಪತ್ತನ್ನೂ , ಅತ್ತೆ- ಮಾವಂದಿರಿಗೆ ಕಳೆದು ಹೋದ ಕಣ್ಣು ದೃಷ್ಟಿಯನ್ನೂ ದಯಪಾಲಿಸಿ ಅದೃಶ್ಯನಾಗುತ್ತಾನೆ. ಅಲ್ಲದೆ ಅವಳ ತಂದೆಗೆ ಗಂಡು ಸಂತಾನ ಕೊಡುತ್ತಾನೆ. ಜೊತೆಗೆ ಸಾವಿತ್ರಿಯ ಹೆಸರು ಪುರಾಣದಲ್ಲಿ ಸತಿಸಾವಿತ್ರಿಯೆಂದು ಪ್ರಸಿದ್ಧವಾಗುವಂತೆ ವರವನ್ನು ಕೊಡುತ್ತಾನೆ.

 

ಈ ವಟಸಾವಿತ್ರಿ ವೃತವನ್ನು ಆಲದ ಮರದ ಆಶ್ರಯದಲ್ಲಿ ಮಾಡುವ ಸಂಪ್ರದಾಯವಿದೆ. ಇದಕ್ಕೆ ಕಾರಣ ಸಾವಿತ್ರಿಯ ಗಂಡನ ಪ್ರಾಣ ಹೋದದ್ದು, ಸಾವಿತ್ರಿಯು ಅಲ್ಲಿಯೇ ಯಮದೇವರನ್ನು ಪ್ರತ್ಯಕ್ಷೀಕರಿಸಿಕೊಂಡದ್ದು, ಪತಿಯ ಪ್ರಾಣವನ್ನು ಪುನಃ ಸಂಪಾದಿಸಿದ್ದು ಯಮದೇವರಿಂದ ವರವನ್ನು ಪಡೆದದ್ದು ಮುಖ್ಯ ವಿಷಯವಾಗಿದೆ. ಸಾಧ್ಯವಾಗದೆ ಇದ್ದಲ್ಲಿ ಈ ದೃಶ್ಯ ಅಂದರೆ ಆಲದಮರ ಅದರ ಕೆಳಗೆ ಸಾವಿತ್ರಿ ತನ್ನ ಪತಿಯನ್ನು ತೊಡೆಯ ಮೇಲೆ ಮಲಗಿಸಿಕೊಂಡದ್ದು, ಯಮದೇವರು ಪ್ರತ್ಯಕ್ಷವಾದದ್ದು, ಪೂಜಾ ಸಲಕರಣೆಗಳು ಮುಂತಾದವುಗಳಿಂದ ಕೂಡಿದ ಚಿತ್ರಪಟವನ್ನು ಮನೆಯಲ್ಲಿಯೇ ಇಟ್ಟುಕೊಂಡು ಈ ಪಟಕ್ಕೇನೆ ಪೂಜೆ ಸಲ್ಲಿಸಿ, ಮಾಂಗಲ್ಯ ಸೌಭಾಗ್ಯವನ್ನು ಕೊಡುವಂತೆ ಸಾಧ್ವೀಮಣಿಗಳು ದೇವರನ್ನು ಪ್ರಾರ್ಥಿಸಿಕೊಳ್ಳಬೇಕು. ಈ ವಟಸಾವಿತ್ರಿ ವೃತ ಮುತ್ತೈದೆಯರಿಗೆ ಬಹಳ ಮುಖ್ಯವಾದದ್ದಾಗಿದೆ.
ಸರ್ವ ಮಂಗಳ ಮಾಂಗಲ್ಯೇ ಶಿವೇ ಸರ್ವಾರ್ಥ ಸಾಧಿಕೇ ಶರಣ್ಯೇ ತ್ರಯಂಬಿಕೇ ಗೌರಿ ನಾರಾಯಣೀ ನಮೋಸ್ತುತೇ