Home Uttara Kannada ವೇದಿಕೆಯಲ್ಲಿನ ಆಶು ವೈಭವ ಯಕ್ಷಗಾನ ಕಲೆಯಲ್ಲಿ ಮಾತ್ರ ಕಾಣಸಿಗುತ್ತದೆ : ಡಾ ಜಿ.ಎಲ್ ಹೆಗಡೆ

ವೇದಿಕೆಯಲ್ಲಿನ ಆಶು ವೈಭವ ಯಕ್ಷಗಾನ ಕಲೆಯಲ್ಲಿ ಮಾತ್ರ ಕಾಣಸಿಗುತ್ತದೆ : ಡಾ ಜಿ.ಎಲ್ ಹೆಗಡೆ

ಕುಮಟಾ: ಯಕ್ಷಗಾನ ಒಂದು ಆರಾಧ್ಯ ಕಲೆ. ವೇದಿಕೆಯಲ್ಲಿನ ಆಶು ವೈಭವ ಈ ಕಲೆಯಲ್ಲಿ ಮಾತ್ರ ಕಾಣಸಿಗುತ್ತದೆ. ಯಕ್ಷಗಾನದ ಮಾತುಗಳು ಸಾಂದರ್ಭಿಕ ಘಟನೆಗಳಿಗೆ ಸಂದೇಶ ನೀಡುತ್ತವೆ. ಯಕ್ಷಗಾನದ ಕುರಿತು ದಕ್ಷಿಣ ಕನ್ನಡದವರ ಧಾರಾಳತನ ನಮ್ಮಲ್ಲಿಯೂ ಬರಬೇಕು ಎಂದು ಕುಮಟಾ ಯಕ್ಷಗಾನ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ ಜಿ.ಎಲ್ ಹೆಗಡೆ ಅಭಿಪ್ರಾಯಪಟ್ಟರು.ಹವ್ಯಕ ಸಭಾಭವನದಲ್ಲಿ ತಾಲೂಕಿನ ವಾಲಗಳ್ಳಿಯ ಯಾಜಿ ಯಕ್ಷ ಮಿತ್ರ ಮಂಡಳಿಯ 13ನೇ ವರ್ಷದ ಯಾಜಿ ಯಕ್ಷಮಿತ್ರ ಪ್ರಶಸ್ತಿ ಪ್ರದಾನ ಹಾಗೂ ನಿಧಿ ಸಮರ್ಪಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮಣಿಪಾಲ ಅಕಾಡೆಮಿಯ ಉನ್ನತ ಶಿಕ್ಷಣದ ಚಾನ್ಸಲರ್ ಡಾ. ಎಚ್.ಎಸ್ ಬಲ್ಲಾಳ ಕಾರ್ಯಕ್ರಮ ಉದ್ಘಾಟಿಸಿ ಯಕ್ಷಗಾನ ನಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ಸಾರಿ ಹೇಳುವ ಕಲೆ. ಆದರೆ ಇಂದಿನ ಯುವಕರಲ್ಲಿ ಯಕ್ಷ ಕಲಾಸಕ್ತಿ ಕ್ಷೀಣಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರಾಸ್ತಾವಿಕ ಮಾತನಾಡಿದ ಯಾಜಿ ಯಕ್ಷ ಮಿತ್ರ ಮಂಡಳಿ ಅಧ್ಯಕ್ಷ ಕೃಷ್ಟ ಯಾಜಿ ಬಳಕೂರ್, ಸತತ 13 ವರ್ಷಗಳ ಕಾಲ ಯಕ್ಷಗಾನದಲ್ಲಿ ಜೀವ ಸವೆದು ಕಾಯಿಲೆಗೆ ತುತ್ತಾಗುವವರಿಗೆ ಕೈಲಾದ ಹಣದ ಸಹಾಯ ಹಾಗೂ ಪ್ರಶಸ್ತಿ ಪ್ರದಾನ ಮಾಡುತ್ತ ಬಂದಿದ್ದೇನೆ. ಇಂತಹ ಘನ ಕಾರ್ಯ ನನ್ನ ನಂತರವೂ ನಡೆಯಬೇಕೆಂಬ ಅಭಿಲಾಶೆ ನನ್ನದಾಗಿದೆ ಎಂದರು.

ಮಣಿಪಾಲ ಅಕಾಡೆಮಿಯ ಉನ್ನತ ಶಿಕ್ಷಣದ ರೆಜಿಸ್ಟ್ರಾರ್ ಡಾ. ನಾರಾಯಣ ಸಬಾಹಿತ್ , ಶಾಂತಾರಾಮ ಪ್ರಭು ಕಾರವಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ರಾಜೇಂದ್ರ ಬೇಕಲ್ ಮುಂತಾದವರು ಇದ್ದರು.

ಈಸಂದರ್ಭದಲ್ಲಿ ಅನಾರೋಗ್ಯದಿಂದ ಬಳಲುತ್ತಿರುವ ಯಕ್ಷಗಾನ ಕಲಾವಿದ ನಾಗೇಶ ಭಂಡಾರಿ ಇಡಗುಂಜಿ ದಂಪತಿಗಳಿಗೆ ಸನ್ಮಾನಿಸಿ ನಿಧಿ ಸಮರ್ಪಣೆ ಮಾಡಲಾಯಿತು. ರಾಮಚಂದ್ರ ಯಾಜಿ ಸ್ವಾಗತಿಸಿದರು. ನಾರಾಯಣ ವಂದಿಸಿದರು.  ನಂತರ ಭೀಷ್ಮ ವಿಜಯ ಮತ್ತು ಭಕ್ತ ಜಾಂಬವ ಯಕ್ಷಗಾನ ಪ್ರದರ್ಶನಗೊಂಡು ಮೆಚ್ಚುಗೆಗಳಿಸಿತು.