Home Special News ಗಣಪಂಗೇ ಪತ್ರ ಬರೆದ ಭೂಪ..! ಆತನ ನಿವೇದನೆಯ ರೀತಿ ಸಖತ್ ವೈರಲ್..!

ಗಣಪಂಗೇ ಪತ್ರ ಬರೆದ ಭೂಪ..! ಆತನ ನಿವೇದನೆಯ ರೀತಿ ಸಖತ್ ವೈರಲ್..!

ಭಟ್ಕಳ : ದೇವರ ಹತ್ತಿರ ತಮ್ಮ ಆಸೆಗಳನ್ನು ನಿವೇದಿಸಿಕೊಳ್ಳುವವರು ಅನೇಕ ಜನ ಇದ್ದಾರೆ. ದೇವರ ಆರಾಧನೆ ಮಾಡುವಂತದ್ದು ತಮ್ಮ ಇಷ್ಟಾರ್ಥ ಸಿದ್ಧಿಗಾಗಿಯೇ..! ಆದರೆ ಇಲ್ಲೊಬ್ಬ ವ್ಯಕ್ತಿ ದೇವರಿಗೆ ಬರೆದ ಪತ್ರ ಇದೀಗ ಸಖತ್ ವೈರಲ್ ಆಗಿದೆ. ಅದು ಏನು ಅಂತೀರಾ? ಈ ವರದಿ ಓದಿ

ಹಾಯ್ ಗಣಪ ಹ್ಯಾಪಿ ಬರ್ತಡೇ, ಗಣಪ ನೀನು ನನ್ನ ಆಸೆ ಈಡೇರಿಸ್ತಿಯಾ ಅಲ್ವಾ.? ಏನು ಇಲ್ಲ ಚಿಕ್ಕ ಆಸೆ ನಾನು ಸ್ಟಡಿ ಮಾಡುತ್ತಾ ಇದ್ದೀನಿ. ಆರನೇ ತರಗತಿಯಿಂದ 10 ನೇ ತರಗತಿಯವರೆಗಿನ ಪುಸ್ತಕವನ್ನು ರೆಫರ್ ಮಾಡಿದ್ದೇನೆ. ಈಗಲೂ ಮಾಡ್ತಾ ಇದ್ದೇನೆ. ನನಗೆ ಚಿಕ್ಕ ವಯಸ್ಸಿನಿಂದ ಪೊಲೀಸ್ ಆಗಬೇಕು ಎನ್ನುವ ಆಸೆ ಇದೆ. ಇಷ್ಟಪಟ್ಟು, ಕಷ್ಟಪಟ್ಟು ಓದುತ್ತೇನೆ. ಆದರೆ ನೀನೆ ಪರೀಕ್ಷೆಯಲ್ಲಿ ಪಾಸು ಮಾಡಬೇಕು. ಈ ಭೂಮಿಯ ಮೇಲಿರುವ ಪ್ರತಿಯೊಬ್ಬರಿಗೂ ಒಳ್ಳೆಯದನ್ನು ಮಾಡುವ ಹಾಗೆ ಬುದ್ದಿ ಕೊಡು. ಆದಷ್ಟು ಬೇಗ ಪರೀಕ್ಷೆಯಲ್ಲಿ ಪಾಸ್ ಆಗೋತರ ಮಾಡ್ಬೇಕು. ಮಾಡ್ತಿಯಾ ಅಲ್ವಾ.? ಓಕೆ ಬಾಯ್ ಗಣಪ.’

ಪರೀಕ್ಷೆಯಲ್ಲಿ ಪಾಸು ಮಾಡಿ ನನಗೆ ಪೊಲೀಸ್ ಕೆಲಸ ಸಿಗುವಂತೆ ಮಾಡಬೇಕಂದು ನಗರ ಪೊಲೀಸ್ ಠಾಣೆಯ ಆವರಣದಲ್ಲಿ ಪ್ರತಿಷ್ಠಾಪಿಸಿದ ಗಣಪತಿಯ ಕಾಣಿಕೆ ಹುಂಡಿಗೆ ಭಕ್ತನೋರ್ವ ಚೀಟಿ ಹಾಕಿದ ವಿಚಾರ ಇದುವೇ.

ಭಟ್ಕಳ ನಗರ ಠಾಣೆ ಆವರಣದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಐದು ದಿನಗಳ ಕಾಲ ಗಣೇಶ ಮೂರ್ತಿಯನ್ನು ತಂದು ಪ್ರತಿಷ್ಠಾಪನೆ ಮಾಡುವ ಮೂಲಕ ಗಣೇಶ ಹಬ್ಬವನ್ನು ಆಚರಿಸಿದ್ದರು. ಇದೇ ವೇಳೆ ದೇವರ ದರ್ಶನ ಪಡೆಯಲು ಬಂದ ಭಕ್ತನೊರ್ವ ಗಣೇಶನಿಗೆ ತನ್ನ ಕನಸನ್ನು ಚೀಟಿಯಲ್ಲಿ ಬರೆಯುವ ಮೂಲಕ ವ್ಯಕ್ತಪಡಿಸಿದ್ದಾನೆ. ಪೊಲೀಸರು ಕಾಣಿಕೆಯನ್ನು ಲೆಕ್ಕಮಾಡುವ ವೇಳೆಯಲ್ಲಿ ಕಾಣಿಕೆ ಹುಂಡಿಯಲ್ಲಿ ಈ ಚೀಟಿ ಸಿಕ್ಕಿದೆ. ಇದೀಗ ಈ ವಿಷಯ ಸಖತ್ ವೈರಲ್ ಆಗಿದೆ.