Home State News ದಸರಾ ರಜೆ ಸಂಬಂಧ ಮಹತ್ವದ ಆದೇಶ ಹೊರಡಿಸಿದ ಶಿಕ್ಷಣ ಸಚಿವರು

ದಸರಾ ರಜೆ ಸಂಬಂಧ ಮಹತ್ವದ ಆದೇಶ ಹೊರಡಿಸಿದ ಶಿಕ್ಷಣ ಸಚಿವರು

ಬೆಂಗಳೂರು : ದಸರಾ ರಜೆ ವಿಚಾರಕ್ಕೆ ಸಂಬಂಧಿಸಿದಂತೆ ಎದ್ದಿದ್ದ ಎಲ್ಲಾ ಗೊಂದಲಗಳಿಗೆ ಶಿಕ್ಷಣ ಸಚಿವರು ತೆರೆ ಎಳೆದಿದ್ದಾರೆ. ರಾಜ್ಯ ಸರಕಾರ ಈ ಹಿಂದೆ ಹೊರಡಿಸಿದ್ದ ಆದೇಶದಂತೆ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ದಸರಾ ಸಂಭ್ರಮದಿಂದ ವಂಚಿರಾಗುತ್ತಿದ್ದರು. ಇದನ್ನು ಮನಗಂಡಿರುವ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಅವರು ಸೆಪ್ಟೆಂಬರ್‌ 26 ರಿಂದ ಮಂಗಳೂರು ಜಿಲ್ಲೆ ( ದಕ್ಷಿಣ ಕನ್ನಡ ಜಿಲ್ಲೆ) ದಸರಾ ರಜೆ ಘೋಷಣೆ ಮಾಡಿ ಆದೇಶ ಹೊರಡಿಸಿದ್ದಾರೆ.

ಮೈಸೂರಿನಂತೆ ಮಂಗಳೂರಿನಲ್ಲಿಯೂ ಅದ್ದೂರಿಯಾಗಿ ದಸರಾ ಆಚರಿಸಲಾಗುತ್ತದೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಹಿಂದೆ ಅಕ್ಟೋಬರ್‌ 3 ರಿಂದ ಶಾಲೆಗಳಿಗೆ ದಸರಾ ರಜೆ ನೀಡುವುದಾಗಿ ಘೋಷಣೆ ಮಾಡಲಾಗಿತ್ತು. ಇದರಿಂದಾಗಿ ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರು ವಿರೋಧವನ್ನು ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲೀಗ ಶಿಕ್ಷಣ ಸಚಿವರು ಆದೇಶದಲ್ಲಿ ಬದಲಾವಣೆಯನ್ನು ಮಾಡಿದ್ದಾರೆ.

ಜಿಲ್ಲಾಧಿಕಾರಿಗಳು ಅಥವಾ ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಶಾಲಾ ದಸರಾ ರಜೆಯನ್ನು ಬದಲಾವಣೆ ಮಾಡುವಂತೆ ಸೂಚಿಸಿದ್ದಾರೆ. ಮಂಗಳೂರಿನಲ್ಲಿ ದಸರಾ ರಜೆಯನ್ನು ನವರಾತ್ರಿ ಹಬ್ಬಕ್ಕೆ ಪೂರಕವಾಗುವಂತೆ ಸಪ್ಟೆಂಬರ್‌ 26 ರಿಂದ ಅಕ್ಟೋಬರ್‌ 10ರ ವರೆಗೆ ನೀಡುವಂತೆ ಸೂಚಿಸಲಾಗಿದ್ದು, ಅಕ್ಟೋಬರ್‌ 2ರಂದು ಗಾಂಧಿ ಜಯಂತಿಯನ್ನು ಆಚರಿಸುವ ಷರತ್ತಿನ ಮೇಲೆ ರಜೆ ಮಂಜೂರು ಮಾಡುವಂತೆ ತಿಳಿಸಿದ್ದಾರೆ.

ರಾಜ್ಯದಲ್ಲಿ ಪ್ರತೀ ವರ್ಷದಂತೆ ಈ ಬಾರಿಯೂ ಶಾಲೆಗಳಲ್ಲಿನ ಶೈಕ್ಷಣಿಕ ಚಟುವಟಿಕೆಗಳನ್ನು ನಿಗದಿ ಪಡಿಸಿ ಈ ಹಿಂದೆಯೇ ಮಾರ್ಗಸೂಚಿಯನ್ನು ಹೊರಡಿಸಲಾಗಿತ್ತು. ಶಾಲಾರಂಭ, ಶಾಲಾ ಮುಕ್ತಾಯದ ದಿನ, ದಸರಾ ರಜೆ, ಬೇಸಿಗೆ ರಜೆ ಹಾಗೂ ಪರೀಕ್ಷೆ ಯಾವಾಗ ನಡೆಸಬೇಕೆಂಬ ನಿರ್ದೇಶನವನ್ನು ನೀಡಲಾಗಿದೆ. ಆದ್ರೀಗ ಮಾರ್ಗಸೂಚಿಯಲ್ಲಿ ಬದಲಾವಣೆಯನ್ನು ಮಾಡಲಾಗಿದೆ.

Source : News Next