Home Special News ಕಾಟ ಕೊಡ್ತಿದೆ ಜೇನು : ಐವರ ಮೇಲೆ ದಾಳಿ.

ಕಾಟ ಕೊಡ್ತಿದೆ ಜೇನು : ಐವರ ಮೇಲೆ ದಾಳಿ.

ಅಂಕೋಲಾ: ತಾಲೂಕಿನ ವಿವಿಧೆಡೆ ಐವರ ಮೇಲೆ ಜೇನು ದಾಳಿ ನಡೆಸಿದ್ದು, ಕಡಿತಕ್ಕೊಳಗಾದವರು ತಾಲೂಕಾಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಲ್ಲಿನ ಜಮಗೋಡ ರೈಲ್ವೆ ನಿಲ್ದಾಣದ ಬಳಿ ನಾಲ್ವರ ಮೇಲೆ, ಅಜ್ಜಿಕಟ್ಟಾದಲ್ಲಿ ಓರ್ವನ ಮೇಲೆ ಜೇನು ದಾಳಿ ನಡೆಸಿದೆ. ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಲಾರೆನ್ಸ್ ಫರ್ನಾಂಡಿಸ್, ಡಿಪ್ಲೊಮಾ ವಿದ್ಯಾರ್ಥಿ ಡಿ.ಜೆ.ಎಲೀಶ, ಚಂದುಮಠದ ನಿವಾಸಿಗಳಾದ ಗೋಪಾಲ ಗೌಡ, ಶಶಿಕಲಾ ಗೌಡ ಮತ್ತು ಪುರ್ಲಕ್ಕಿಬೇಣದ ಬೊಮ್ಮಯ್ಯ ಆಗೇರ ಜೇನು ಕಡಿತಕ್ಕೊಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.


ಅಂಕೋಲಾ ವ್ಯಾಪ್ತಿಯಲ್ಲಿ ಇತ್ತೀಚೆಗೆ ಜೇನು ಕಡಿತದ ಪ್ರಕರಣಗಳು ಹೆಚ್ಚಾಗತೊಡಗಿವೆ. ಪದೇ ಪದೇ ಜೇನು ದಾಳಿಯಿಂದಾಗಿ ಇಲ್ಲಿನ ಸಾರ್ವಜನಿಕರು ಭಯಭೀತರಾಗಿದ್ದಾರೆ. ಕೆಲವು ದಿನಗಳ ಹಿಂದೆ ಚಲನಚಿತ್ರ ಚಿತ್ರೀಕರಣ ತಂಡದವರ ಮೇಲೆ ಜೇನು ದಾಳಿ ನಡೆಸಿ ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲದೆ ಅಲ್ಲಲ್ಲಿ ಒಂದೆರಡು ಜನ ಜೇನು ಕಡಿತಕ್ಕೊಳಗಾಗುತ್ತಲೇ ಇದ್ದಾರೆ.


ಕಳೆದ ವರ್ಷ ಪೊಲೀಸ್ ಹವಾಲ್ದಾರ ಓರ್ವರು ಜೇನು ಕಡಿತದಿಂದ ಪ್ರಾಣವನ್ನೇ ಕಳೆದುಕೊಂಡ ಘಟನೆ ಜನಮಾನಸದಿಂದ ಮರೆಯಾಗುವ ಮುನ್ನವೇ ಈಗ ಮತ್ತೆ ಮತ್ತೆ ಜೇನು ಕಡಿತದ ಪ್ರಕರಣಗಳು ಕೇಳಿ ಬರುತ್ತಿರುವುದು ಜನರಲ್ಲಿ ಆತಂಕವುಂಟು ಮಾಡಿದೆ. ಅರಣ್ಯ ಇಲಾಖೆಯವರು ತಾತ್ಕಾಲಿಕವಾಗಿ ಜೇನನ್ನು ಅಲ್ಲಿಂದ ಓಡಿಸಿದರೂ ಅವು ಮತ್ತೆ ಎಲ್ಲಿಯಾದರೂ ಗೂಡು ಕಟ್ಟಿಕೊಂಡು ಮತ್ತೊಂದು ದಾಳಿಗೆ ಸಜ್ಜಾಗುತ್ತದೆ. ಪಟ್ಟಣದ ವ್ಯಾಪ್ತಿಯಲ್ಲಿ ಕಂಡುಬರುವ ಜೇನುಗೂಡುಗಳನ್ನು ಶಾಶ್ವತವಾಗಿ ತೆರವುಗೊಳಿಸಿದರೆ ಉತ್ತಮ ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.