Home Health ಮಜ್ಜಿಗೆ ಎಂಬುದು ಮನೆಯಲ್ಲಿರುವ ವೈದ್ಯ !

ಮಜ್ಜಿಗೆ ಎಂಬುದು ಮನೆಯಲ್ಲಿರುವ ವೈದ್ಯ !

ಮಲಗುವ ಮುನ್ನ ಹಾಲು ಕುಡಿದರೆ, ಬೆಳಿಗ್ಗೆ ಎದ್ದ ಮೇಲೆ ಮುಖ ತೊಳೆದುಕೊಂಡು ನೀರು ಕುಡಿದರೆ, ಊಟದ ಕೊನೆಯಲ್ಲಿ ಮಜ್ಜಿಗೆ ಕುಡಿದರೆ ವೈದ್ಯನಿಗೇನು ಕೆಲಸ?

ಹಾಲು, ನೀರಿನ ಹಾಗೆಯೇ ಮಜ್ಜಿಗೆ ಕೂಡ ನಮ್ಮ ಆರೋಗ್ಯವನ್ನು ಕಾಪಿಡಲು ನೆರವಾಗುತ್ತದೆ. ಹಾಲಿಗೆ ಹೋಲಿಸಿದರೆ, ಮಜ್ಜಿಗೆಯಲ್ಲಿ ಅರ್ಧದಷ್ಟು ಕಡಿಮೆ ಕ್ಯಾಲರಿ ಹಾಗೂ ಮುಕ್ಕಾಲು ಅಂಶ ಕಡಿಮೆ ಕೊಬ್ಬಿನಂಶವಿದೆ. ಮೊಸರಿನಲ್ಲಿ ಅಧಿಕ ಪ್ರಮಾಣದಲ್ಲಿ ಕೊಬ್ಬಿನ ಅಂಶ ಇರುತ್ತದೆ. ಆದರೆ ಮೊಸರಿನಿಂದ ಬೆಣ್ಣೆ ತೆಗೆದು ಮಜ್ಜಿಗೆ ಮಾಡುವುದರಿಂದ ಕ್ಯಾಲರಿ, ಕೊಬ್ಬಿನ ಅಂಶ ತೀರಾ ಕಡಿಮೆ.

ಮಜ್ಜಿಗೆಯು ಕಷಾಯ ಹಾಗೂ ಅಮ್ಲರಸ ಹೊಂದಿದ್ದು, ಲಘು ಗುಣದಿಂದಾಗಿ ಸುಲಭವಾಗಿ ಜೀರ್ಣ ಹೊಂದುತ್ತದೆ. ಬೇಸಿಗೆಯಲ್ಲಂತೂ ಮಜ್ಜಿಗೆಯನ್ನು ನೆನೆಸಿಕೊಂಡರೆನೇ ‘ಆಹಾ!’ ಎನ್ನುತ್ತೇವೆ. ಮಜ್ಜಿಗೆ ಕೇವಲ ದಾಹವನ್ನು ತಣಿಸುವುದಷ್ಟೇ ಅಲ್ಲ, ಇದರಿಂದ ಹಲವು ಪ್ರಯೋಜನಗಳೂ ಇವೆ.

*ಮಜ್ಜಿಗೆ ಸೇವನೆಯಿಂದ ತೆರೆದ ಗಾಯ, ಬಾಯಿಹುಣ್ಣು, ರಕ್ತಸ್ರಾವದಂಥ ರೋಗಗಳು ಬಹುಬೇಗ ಗುಣವಾಗುತ್ತವೆ. ಆದ್ದರಿಂದಲೇ ಆಯುರ್ವೇದ ಚಿಕಿತ್ಸೆಗಳಲ್ಲಿ, ಚರ್ಮರೋಗದಿಂದ ಬಳಲುತ್ತಿರುವವರಿಗೆ ತಕ್ರಧಾರ ಎಂಬ ಪಂಚಕರ್ಮ ಚಿಕಿತ್ಸೆಗೆ ಮಜ್ಜಿಗೆ ಬಳಸಲಾಗುವುದು.

*ಮಜ್ಜಿಗೆಯಲ್ಲಿ ಆರೋಗ್ಯಕ್ಕೆ ಅಗತ್ಯವಿರುವ ಖನಿಜಾಂಶಗಳು ಅಧಿಕವಾಗಿವೆ. ಅನಿಮಿಯಾ, ಮಾನಸಿಕ ಒತ್ತಡ ಹಾಗೂ ಧಾತುಗಳ ಬೆ
ಳವಣಿಗೆಗೆ ಅಗತ್ಯವಿರುವ ವಿಟಮಿನ್ ಬಿ 12 ಇದರಲ್ಲಿ ಹೇರಳವಾಗಿದೆ.

*ಅಜೀರ್ಣ, ಹೊಟ್ಟೆನೋವು ಕಂಡುಬಂದರೆ ಅರ್ಧ ಲೋಟ ಹುಳಿ ಮಜ್ಜಿಗೆಗೆ ಇಂಗು, ಉಪ್ಪು ಬೆರೆಸಿ ಕುಡಿದರೆ ಕೆಲವೇ ಹೊತ್ತಿನಲ್ಲಿ ಹೊಟ್ಟೆನೋವು ಉಪಶಮನವಾಗುತ್ತದೆ.

*ಮಜ್ಜಿಗೆಯಲ್ಲಿರುವ ಪೊಟಾಶಿಯಂ ಅಂಶವು ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ.

* ಇದರಲ್ಲಿ ಕ್ಯಾಲ್ಶಿಯಂ ಹಾಗೂ ಫಾಸ್ಪರಸ್ ಅಂಶ ಹೆಚ್ಚಾಗಿದ್ದು, ಮೂಳೆಗಳಿಗೆ ಅಗತ್ಯ ಶಕ್ತಿ ನೀಡುತ್ತದೆ.

*ಮಜ್ಜಿಗೆಯು ರಕ್ತನಾಳಗಳಲ್ಲಿ ಲೇಪಿತವಾಗಿರುವ ಕೊಬ್ಬಿನಂಶ ತೆಗೆದುಹಾಕುತ್ತದೆ.

*ಮಜ್ಜಿಗೆಯು ಜಠರದ ಒಳಪದರವನ್ನು ಲೇಪಿಸಿ, ಜಠರದ ತೀಕ್ಷ್ಣ ಸ್ರಾವವನ್ನು ನಿಯಂತ್ರಿಸುತ್ತದೆ. ಹುಳಿತೇಗು, ಹೊಟ್ಟೆಹುರಿ, ಎದೆಯುರಿ ನಿವಾರಿಸುತ್ತದೆ.

*ಜಠರ ವಿಕಾರಗಳಿಗೆ ಮಜ್ಜಿಗೆ ದಿವ್ಯೌಷಧಿ. ಬೇಧಿ, ರಕ್ತಬೇಧಿ ಹಾಗೂ ಕರುಳಿನ ವಿಕಾರಗಳಲ್ಲಿ, ಕರುಳಿನಲ್ಲಾಗುವ ವಿಪರೀತ ಒತ್ತಡವನ್ನು ಕಡಿಮೆಯಾಗಿಸಿ ಅಗತ್ಯ ನೀರಿನಾಂಶ ಹಾಗೂ ಖನಿಜಾಂಶವನ್ನು ನೀಡುತ್ತದೆ.

*ಕ್ಷಾರ ಹಾಗೂ ಕಷಾಯ ಗುಣಗಳಿಂದಾಗಿ ಮೂಲವ್ಯಾಧಿಯಲ್ಲಿನ ಗುದಾಂಕುರವನ್ನು ನಿವಾರಿಸುತ್ತದೆ.

*ಲಿವರ್‌ನಲ್ಲಿನ ವಿಷಗುಣಗಳನ್ನು ತೆಗೆದುಹಾಕುವ ಶಕ್ತಿ ಮಜ್ಜಿಗೆಗೆ ಇದೆ.

*ಬಾರ್ಲಿ ಗಂಜಿಯನ್ನು ಮಜ್ಜಿಗೆ ಮತ್ತು ನಿಂಬೆರಸದೊಂದಿಗೆ ಸೇವಿಸಿದರೆ ರಕ್ತದೊತ್ತಡ ಮತ್ತು ತಲೆನೋವು ಗುಣವಾಗುತ್ತದೆ.

*ಮಜ್ಜಿಗೆಗೆ ಸೈಂಧವ ಉಪ್ಪು ಮತ್ತು ಹಸಿಶುಂಠಿ ರಸವನ್ನು ಬೆರೆಸಿ ಸೇವಿಸುವುದರಿಂದ ವಾಂತಿ ಕಡಿಮೆಯಾಗುತ್ತದೆ.

*ಮಜ್ಜಿಗೆ ಉತ್ತಮ ಜೀರ್ಣಕಾರಿ ದ್ರವ ಪದಾರ್ಥ. ಸಭೆ ಸಮಾರಂಭಗಳಲ್ಲಿ ಅಧಿಕ ಊಟ ಮಾಡಿ ಹೊಟ್ಟೆ ಭಾರವೆನಿಸುತ್ತಿದ್ದರೆ ಮಜ್ಜಿಗೆಗೆ ಉಪ್ಪು, ಕೊತ್ತಂಬರಿ ಸೊಪ್ಪು ಸೇರಿಸಿ ಕುಡಿದರೆ ತಿಂದ ಆಹಾರ ಜೀರ್ಣವಾಗುತ್ತದೆ.

*ಅರ್ಧ ಚಮಚ ಶುಂಠಿರಸ ಹಾಗೂ ಜೀರಿಗೆಪುಡಿಯನ್ನು ಮಜ್ಜಿಗೆಯೊಂದಿಗೆ ಸೇವಿಸಿದರೆ ಆ್ಯಸಿಡಿಟಿ, ಮಲಬದ್ಧತೆ ಹಾಗೂ ಮೂಲವ್ಯಾಧಿ ನಿವಾರಣೆಯಾಗುತ್ತದೆ. ಚಿಟಿಕೆ ಉಪ್ಪು, ಒಂದು ಚಮಚ ಸಕ್ಕರೆಯೊಂದಿಗೆ ಒಂದು ಗ್ಲಾಸ್ ಮಜ್ಜಿಗೆ ಸೇವನೆ ಬಹಳ ಉತ್ತಮ. ಇದು ಅಗತ್ಯ ನೀರಿನಾಂಶವನ್ನು ನೀಡುತ್ತದೆ ಹಾಗೂ ಅತಿಸಾರವನ್ನು ನಿಯಂತ್ರಿಸುತ್ತದೆ. ತ್ವಚೆಯ ಕಾಂತಿಯನ್ನು ಹೆಚ್ಚಿಸಿ ಮುಪ್ಪನ್ನು ತಡೆಯುತ್ತದೆ.

*ಜೀರಿಗೆ ಪುಡಿಯನ್ನು ಮಜ್ಜಿಗೆ ಹಾಗೂ ಸ್ವಲ್ಪ ಉಪ್ಪು ಬೆರೆಸಿ ಕುಡಿದರೆ ಜೀರ್ಣಶಕ್ತಿ ಹೆಚ್ಚಿಸುತ್ತದೆ.

*ಊಟದ ಜೊತೆ ಉಪ್ಪಿನಕಾಯಿ ಇದ್ದಂತೆ ಕೊನೆಯಲ್ಲಿ ಮಜ್ಜಿಗೆ ಸೇರಿಸಿ ಊಟ ಮಾಡಿದರೆ ಹೊಟ್ಟೆಗೂ ಸುಖಕರ, ಊಟವೂ ಪೂರ್ಣವಾಗುತ್ತದೆ.

*ಸಕ್ಕರೆ ಕಾಯಿಲೆ ಇರುವವರಿಗೂ ಮಜ್ಜಿಗೆ ನೀರು ಉತ್ತಮ. ದಿನದಲ್ಲಿ ನಾಲ್ಕೈದು ಲೋಟ ಮಜ್ಜಿಗೆ ನೀರು ಕುಡಿಯುತ್ತಿದ್ದರೆ ದೇಹದ ಸ್ಥಿತಿ ಉತ್ತಮವಾಗಿರುತ್ತದೆ.

*ಡಯಟ್ ಮಾಡುವವರು ಹಣ್ಣು, ತರಕಾರಿಗಳ ಜೊತೆ ಮಜ್ಜಿಗೆಯನ್ನು ಸೇವಿಸಬೇಕು.

*ತಲೆಹೊಟ್ಟಿನ ಸಮಸ್ಯೆ ಇರುವವರು ಹುಳಿ ಮಜ್ಜಿಗೆಯನ್ನು ಕೂದಲಿನ ಬುಡಕ್ಕೆ ಸವರಿ ಎರಡು ಗಂಟೆ ಕಳೆದು ಸ್ನಾನ ಮಾಡಬೇಕು. ಹೀಗೆ ನಾಲ್ಕೈದು ಸಲ ಸ್ನಾನ ಮಾಡಿದರೆ ತಲೆಹೊಟ್ಟು ನಿವಾರಣೆಯಾಗುತ್ತದೆ.