Home Special News ಕುಮಟಾದಲ್ಲಿ ಭಜರಂಗಿಯ ಪವಾಡ ಕಂಡು ದಂಗಾದ ಜನರು

ಕುಮಟಾದಲ್ಲಿ ಭಜರಂಗಿಯ ಪವಾಡ ಕಂಡು ದಂಗಾದ ಜನರು

ಕುಮಟಾ : ಒಂದೆಡೆ ಜೈ ಶ್ರೀರಾಮ ಘೋಷಣೆ. ಇನ್ನೊಂದೆಡೆ ದಾರಿಯುದ್ದಕ್ಕೂ ಜನಸಾಗರ. ಎಲ್ಲೆಡೆ ಹಾರಾಡಿದ ಕೇಸರಿಯ ಶ್ರೀರಾಮ ಘೋಷಣೆ ಬರೆದ ಬಾವುಟಗಳು, ಪೂರ್ಣಕುಂಬ ಹಿಡಿದ ಮಹಿಳೆಯರು, ಚಂಡೆಯ ವಾದಕರು ಜೊತೆಗೆ ಜನರ ಹೆಗಲಲ್ಲಿ ವಿರಾಜಮಾನನಾಗಿ ಗಾಂಭೀರ್ಯದಿಂದ ಸಾಗುವ ಚಂದಾವರ ಸೀಮೆ ಹನುಮಂತ ದೇವರ ಪಲ್ಲಕ್ಕಿ. ಇದೆಲ್ಲಾ ಕಂಡಿದ್ದು ತಾಲೂಕಿನ ಪಟ್ಟಣದಲ್ಲಿ. ಲುಕ್ಕೇರಿಯಿಂದ ಶ್ರೀ ಶಾಂತಿಕಾಂಬ ದೇವಾಲಯಕ್ಕೆ ಆಗಮಿಸಿದ ಹನುಮಂತನ ಪಲ್ಲಕ್ಕಿಯನ್ನು ಜನರು ಅತ್ಯಂತ ವೈಭವದಿಂದ ಸ್ವಾಗತಿಸಿದರು. ಜನರ ಜಯಘೋಷ ಮುಗಿಲು ಮುಟ್ಟಿತ್ತು.


ಸಹಸ್ರಾರು ಜನರ ನಡುವಿನಲ್ಲಿ ಹನುಮನ ಸವಾರಿ ಬರುವ ವೇಳೆ ಭಕ್ತನೊಬ್ಬ ಅದ್ಯಾವುದೋ ಕಾರಣದಿಂದ ರಸ್ತೆಯ ಪಕ್ಕ ಮೂರ್ಛೆತಪ್ಪಿ ಬಿದ್ದಿದ್ದು, ಜನರು ಆತನ ಬಗ್ಗೆ ಲಕ್ಷ ಕೊಡದೇ ಇದ್ದ ಸಂದರ್ಭದಲ್ಲಿಯೂ ಹನುಮ ಅವನ ಬಳಿಗೆ ಹೋಗಿ ಅವನನ್ನು ಮೇಲೆ ಏಳಿಸಿ ಪವಾಡ ಮೆರೆದಿದ್ದಾನೆ. ಈ ಪವಾಡವನ್ನು ನೂರಾರು ಜನರು ಕಣ್ತುಂಬಿ ಕೊಂಡರು. ಈ ಬಗ್ಗೆ ವಿಡಿಯೋ ಸಹ ಹರಿದಾಡುತ್ತಲಿದೆ. ಅಷ್ಟು ಗದ್ದಲದ ನಡುವೆಯೂ ಹನುಮನಿಗೆ ಭಕ್ತರ ಮೇಲಿನ ಪ್ರೀತಿಯ ಭಾವ ಅನೇಕ ಜನರ ಕಣ್ಣಲ್ಲಿ ಭಕ್ತಿಯ ದೀಪ ಬೆಳಗಿತ್ತು ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ.

ಕುಮಟಾದಲ್ಲಿ ಹಲ ದಿನ ಹನುಮನ ಸವಾರಿ.
ಇನ್ನು ಹಲ ದಿನಗಳ ಕಾಲ ಇಲ್ಲಿಯೆ ನೆಲೆಸಿ ಹನುಮಂತ ಭಕ್ತರಿಗೆ ದರ್ಶನ ನೀಡುವ ಜೊತೆಗೆ ಭಕ್ತಾದಿಗಳ ಸೇವೆ ಸ್ವೀಕರಿಸಲಿದ್ದಾನೆ. ಜೂ. 29 ರ ವರೆಗೆ ಹನುಮನ ಸವಾರಿ ಕುಮಟಾದಲ್ಲಿ ಇರಲಿದೆ. ಪ್ರತಿನಿತ್ಯ ಹಲವು ಭಾಗಗಳಿಗೆ ಸವಾರಿ ಮೂಲಕ ತೆರಳಿ, ಆ ಮೂಲಕ ಭಕ್ತರ ಮನೆಯಂಗಳದಲ್ಲಿ ನಿಂತು ದರುಶನ ನೀಡಿ, ಅವರ ಸಕಲ ಕಷ್ಟಗಳನ್ನು ದೂರ ಮಾಡಲಿದ್ದಾರೆ.

ಒಟ್ಟಿನಲ್ಲಿ ಕುಮಟಾದ ಜನರು ಈ ಪುಣ್ಯ ಪರ್ವ ಕಾಲದಲ್ಲಿ ಭಾಗವಹಿಸಿ, ಹನುಮನ ಕೃಪಾಕಟಾಕ್ಷಕ್ಕೆ ಪಾತ್ರರಾಗಿ ವಿವಿಧ ಸೇವೆಗಳನ್ನು ಸಲ್ಲಿಸಿ ಧನ್ಯರಾಗಲು ಕಾಯುತ್ತಿದ್ದಾರೆ.