Home Uttara Kannada ಅನಾರೋಗ್ಯ ಪೀಡಿತರಿಗೆ ಧನಸಹಾಯ : ಶಾಲೆಗೆ ಸ್ಮಾರ್ಟ್ ಟಿವಿ ಕೊಡುಗೆ.

ಅನಾರೋಗ್ಯ ಪೀಡಿತರಿಗೆ ಧನಸಹಾಯ : ಶಾಲೆಗೆ ಸ್ಮಾರ್ಟ್ ಟಿವಿ ಕೊಡುಗೆ.

ಕುಮಟಾ : ಶ್ರೀ ಲಕ್ಷ್ಮೀ ನರಸಿಂಹ ಯಕ್ಷಗಾನ ಮಂಡಳಿ ‌ಹೊಲನಗದ್ದೆ ಇವರ ಆಶ್ರಯದಲ್ಲಿ ‌ಖ್ಯಾತ ಕಲಾವಿದರು, ಚಿಣ್ಣರ ಮೇಳದ‌ ಕಲಾವಿದರಿಂದ ‌ಉಚಿತ ಯಕ್ಷಗಾನ ಪ್ರದರ್ಶನ, ಅನಾರೋಗ್ಯ ಪೀಡಿತರಿಗೆ ಧನಸಹಾಯ, ಶಾಲೆಗೆ ಸ್ಮಾರ್ಟ್ ಟಿವಿ ವಿತರಣೆ ಕಾರ್ಯಕ್ರಮವು ಯಕ್ಷಗಾನ ಭಾಗವತ ಜಿ.ಕೆ.ಹೆಗಡೆ ಇವರ ನೇತೃತ್ವದಲ್ಲಿ ಜರುಗಿತು.

ಕುಮಟಾ ಹವ್ಯಕ ಸಭಾಭವನದಲ್ಲಿ ನಡೆದ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹವ್ಯಕ ಸೇವಾ ಸಂಘದ ಅಧ್ಯಕ್ಷರಾದ ಶ್ರೀಕಾಂತ ಹೆಗಡೆ ವಹಿಸಿ ಇಂದಿನ ಉತ್ತಮ ‌ಸಮಾಜದ ನಿರ್ಮಾಣಕ್ಕೆ ಯಕ್ಷಗಾನ ಕಲೆಯ ಅವಶ್ಯಕತೆ ಇದೆ ಎಂದರು.‌ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮುಖಂಡರಾದ ‌ಸೂರಜ್ ನಾಯ್ಕ ಸೋನಿ‌ ಮಾತನಾಡಿ‌ ಯಾವುದೇ ಬೇಧಭಾವ ಇಲ್ಲದೇ ಪ್ರತಿಭೆಯನ್ನು ಪ್ರೋತ್ಸಾಹಿಸುವ ಗುಣವನ್ನು ಬೆಳೆಸಿಕೊಳ್ಳಬೇಕು. ಯಕ್ಷಗಾನ ಕಲೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸಿ, ಉಳಿಸಿ, ಬೆಳೆಸಲು ಯುವಕ ಯುವತಿಯರು ಯಕ್ಷಗಾನ ಕಲೆಯನ್ನು ಕಲಿಯಲು‌ ಆಸಕ್ತಿ ಹೊಂದಬೇಕು ಎಂದರು. 

ವೇದಿಕೆಯಲ್ಲಿ ಉಪಸ್ಥಿತರಿದ್ದ ಪ್ರಮುಖರಾದ ದತ್ತಾ ಪಟಗಾರ, ‌ ರಾಘವೇಂದ್ರ ಪಟಗಾರ, ಜ್ಯೇಷ್ಠಾಪುರ ಶಾಲಾ ಶಿಕ್ಷಕರಾದ ಪ್ರಶಾಂತ ನಾಯಕ  ಜಿ. ಕೆ.‌ ಹೆಗಡೆಯವರ ಕಲಾ ಸೇವೆ ಹಾಗೂ ಸಾಮಾಜಿಕ ಕಳಕಳಿಯ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಸಂಯೋಜಕ ಜಿ. ಕೆ. ಹೆಗಡೆ ಇವರು ಮಾತನಾಡಿ ತಾನು ಕಳೆದ ಏಳು ವರ್ಷಗಳಿಂದ  ಮಾಡುತ್ತಾ  ಬಂದಿರುವ ಈ ಚಿಕ್ಕ ಸಾಮಾಜಿಕ ಸೇವೆ ಇತರರಿಗೆ ಸ್ಪೂರ್ತಿಯಾಗಿ ಸಮಾಜಕ್ಕೆ ಎಲ್ಲರೂ‌ ಸಹಕರಿಸುವಂತಾಗಲಿ ಎಂಬುದು ತನ್ನ ಸದುದ್ದೇಶವಾಗಿದೆ. ಸಹಕರಿಸಿದ ಸರ್ವರಿಗೂ ಧನ್ಯವಾದ ಸಲ್ಲಿಸಿದರು.

ಈ ಸಂದರ್ಭದಲ್ಲಿ ಜ್ಯೇಷ್ಠಾಪುರ ಶಾಲಾ ವಿದ್ಯಾರ್ಥಿಗಳ ಉಪಯೋಗಕ್ಕಾಗಿ ಸ್ಮಾರ್ಟ್ ಟಿವಿಯನ್ನು , ಅನಾರೋಗ್ಯ ಪೀಡಿತ ಮೋಹನ ನಾಯ್ಕ ಗುಡೇಅಂಗಡಿ ಇವರಿಗೆ ರೂ. ಹತ್ತು ಸಾವಿರ ಧನಸಹಾಯ ನೀಡಲಾಯಿತು. ‌ಸಿ.ಎ. ಪರೀಕ್ಷೆಯಲ್ಲಿ ಸಾಧನೆಗೈದ ಜಯಂತ ಶ್ರೀಕಾಂತ ಭಟ್ ಇವರನ್ನು ಸನ್ಮಾನಿಸಲಾಯಿತು. ಎಂ.ಎನ್.ಹೆಗಡೆ ನಿರೂಪಿಸಿದರು.‌ ಗಂಗಾಧರ ನಾಯ್ಕ ಸ್ವಾಗತಿಸಿದರು. ಶಿಕ್ಷಕರಾದ ಸಿ.‌ಜಿ.ನಾಯ್ಕ ‌ವಂದನಾರ್ಪಣೆಗೈದರು.

ನಂತರ ಚಕ್ರ ಚಂಡಿಕೆ ಪೌರಾಣಿಕ ಯಕ್ಷಗಾನ  ಯಶಸ್ವಿಯಾಗಿ ನಡೆಯಿತು.