Home BHATKAL ಪತ್ನಿಯ ಕತ್ತು ಸೀಳಿ ಬರ್ಬರವಾಗಿ ಹತ್ಯೆಮಾಡಿದ ಪತಿ : ಮುರುಡೇಶ್ವರದಲ್ಲಿ ನಡೆದ ಘಟನೆ : ಆರೋಪಿಯನ್ನು...

ಪತ್ನಿಯ ಕತ್ತು ಸೀಳಿ ಬರ್ಬರವಾಗಿ ಹತ್ಯೆಮಾಡಿದ ಪತಿ : ಮುರುಡೇಶ್ವರದಲ್ಲಿ ನಡೆದ ಘಟನೆ : ಆರೋಪಿಯನ್ನು ಬಂಧಿಸಿದ ಪೊಲೀಸರು.

ಭಟ್ಕಳ : ಪತಿಯೊರ್ವ ತನ್ನ ಪತ್ನಿಯನ್ನು ಇರಿದು, ಬರ್ಬರವಾಗಿ ಕತ್ತು ಸೀಳಿ ಕೊಲೆ ಮಾಡಿದ ಘಟನೆ ತಾಲೂಕಿನ ಮುರ್ಡೇಶ್ವರ ಠಾಣೆಯ ವ್ಯಾಪ್ತಿಯಲ್ಲಿ ಮಂಗಳವಾರ ನಡೆದಿದೆ. ಕೌಟುಂಬಿಕ ಕಲಹದ ಹಿನ್ನಲೆಯಲ್ಲಿ ಈ ಘಟನೆ ನಡೆದಿದೆ ಎಂದು ಅಂದಾಜಿಸಲಾಗಿದೆ. ಸುದ್ದಿ ತಿಳಿಯುತ್ತಿರುಂತೆ ಸ್ಥಳದಲ್ಲಿ ನೂರಾರು ಸಂಖ್ಯೆಯಲ್ಲಿ ಗ್ರಾಮಸ್ಥರು ಜಮಾವಣೆಗೊಂಡಿದ್ದಾರೆ. ಅಮ್ಮನನ್ನು ಕಳೆದುಕೊಂಡ ಮಕ್ಕಳ, ಹಾಗೂ ಕುಟುಂಬದವರ ರೋದನೆ ಮುಗಿಲು ಮುಟ್ಟಿತ್ತು.

ಭಟ್ಕಳ ತಾಲೂಕಿನ ಮುರ್ಡೇಶ್ವರ ನಿವಾಸಿ ನಂದಿನಿ ಲೋಕೇಶ ನಾಯ್ಕ(30) ಮೃತ ಮಹಿಳೆ. ಮೃತಳಿಗೆ ಪುತ್ರ ಹಾಗೂ ಪುತ್ರಿ ಇದ್ದಾರೆ. ಶಿಲ್ಪಿ ಕೆಲಸ ಮಾಡುತ್ತಿದ್ದ ಲೋಕೇಶ ನಾಯ್ಕ ಮುರ್ಡೇಶ್ವರದ ನಾಡವರ ಕೇರಿ ನಿವಾಸಿ. ಸಬ್ಬತ್ತಿ ಕ್ರಾಸನಲ್ಲಿರುವ ಮನೆಯೊಂದರಲ್ಲೊ ತನ್ನ ಪತ್ನಿ ಮತ್ತು ಮಕ್ಕಳೊಂದಿಗೆ ವಾಸಿಸುತ್ತಿದ್ದ. ಕೌಟುಂಬಿಕ ಕಲಹದ ಹಿನ್ನಲೆಯಲ್ಲಿ ಪತ್ನಿಯ ಕುತ್ತಿಗೆ ಸೀಳಿ ಕೊಲೆ ಮಾಡಿ ಪರಾರಿಯಾಗಿದ್ದ. ಗಾಯಗೊಂಡ ಮಹಿಳೆ ರಕ್ತದ ಮಡುವಿನಲ್ಲಿ ಹೊರಗೆ ಓಡಿಬಂದು ಬಿದ್ದಿದ್ದಳು. ಇದನ್ನು ಪಕ್ಕದ ಮನೆಯವರು,ಮನೆಯ ನೋಡಿ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ತಕ್ಷಣ ಸ್ಥಳಕ್ಕೆ ಬಂದ ಪೊಲೀಸ್ ಸಿಪಿಐ ವಸಂತ ಕಾಯ್ಕಿಣಿ ಮತ್ತು ಅವರ ತಂಡ ಬಲೆ ಬೀಸಿ ಆರೋಪಿ ಲೋಕೇಶ ನಾಯ್ಕನನ್ನು ಹೊಟೇಲೊಂದರಲ್ಲಿ ವಶಕ್ಕೆ ಪಡೆದಿದ್ದಾರೆ. ಎಸ್ ಪಿ ವಿಷ್ಣುವರ್ಧನ್, ಡಿವೈ ಎಸ್ ಪಿ ಶ್ರೀಕಾಂತ ಕೆ ಸ್ಥಳಕ್ಕೆ ಭೇಟಿ ನೀಡಿ ಮುಂದಿನ ತನಿಖೆಗೆ ಮಾರ್ಗದರ್ಶನ ನೀಡಿದ್ದಾರೆ.