Home BHATKAL ಭಟ್ಕಳದ ಬೆಳಕೆಯ ಶ್ರೀ ದುರ್ಗಾಪರಮೇಶ್ವರೀ ದೇವಾಲಯದಲ್ಲಿ ಶರನ್ನವರಾತ್ರಿ ಉತ್ಸವ

ಭಟ್ಕಳದ ಬೆಳಕೆಯ ಶ್ರೀ ದುರ್ಗಾಪರಮೇಶ್ವರೀ ದೇವಾಲಯದಲ್ಲಿ ಶರನ್ನವರಾತ್ರಿ ಉತ್ಸವ

ಭಟ್ಕಳ ಸಮೀಪದ ಬೆಳಕೆಯ ಶ್ರೀ ದುರ್ಗಾಪರಮೇಶ್ವರೀ ದೇವಾಲಯದಲ್ಲಿ ಶರನ್ನವರಾತ್ರಿ ಉತ್ಸವವು ದಿನಾಂಕ ೧೫.೧೦.೨೦೨೩ ರಿಂದ ೨೪.೧೦.೨೦೨೩ ವರೆಗೆ ನಡೆಯುತ್ತಿದ್ದು, ಶ್ರೀ ಅಖಿಲ ಹವ್ಯಕ ಮಹಾಸಭೆಯವತಿಯಿಂದ ಪ್ರಥಮಬಾರಿಗೆ ಅತ್ಯಂತ ವೈಭವದಿಂದ, ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನವರಾತ್ರಿ ಉತ್ಸವವು ನಡೆಯುತ್ತಿದೆ.

ವರಪ್ರದೆಯಾದ ಶ್ರೀ ದುರ್ಗಾಪರಮೇಶ್ವರೀ ದೇವಿಯ ಶಿಲಾಮಯ ದೇಗುಲದ ಪ್ರಾಂಗಣದಲ್ಲಿ ಕ್ಷೇತ್ರದ ಸಾನ್ನಿಧ್ಯವೃದ್ಧಿ ಹಾಗೂ ಲೋಕಕಲ್ಯಾಣದ ಸಂಕಲ್ಪದೊಂದಿಗೆ ನವರಾತ್ರಿಯ ವಿಶೇಷ ಕಾರ್ಯಕ್ರಮವನ್ನು ಹವ್ಯಕ ಮಹಾಸಭೆಯು ಆಯೋಜಿಸಿದ್ದು, ಪ್ರತಿದಿನ ಪ್ರಾತಃಕಾಲ ವಿಶೇಷ ಅಭಿಷೇಕ, ಪುಷ್ಪಾಲಂಕಾರ, ದುರ್ಗಾಸಪ್ತಶತಿ ಪಾರಾಯಣ, ಶ್ರೀದುರ್ಗಾಹೋಮ, ಪೂರ್ಣಾಹುತಿ, ಮಹಾಮಂಗಳಾರತಿ ಹಾಗೂ ಪ್ರಸಾದ ವಿನಿಯೋಗಗಳು ನಡೆಯುತ್ತಿದ್ದು, ಸಾಯಂಕಾಲ ದುರ್ಗಾದೀಪ ನಮಸ್ಕಾರ, ಅಷ್ಟಾವಧಾನ ಸೇವೆ, ಮಹಾಮಂಗಳಾರತಿ ಸೇರಿದಂತೆ ಅನೇಕ ಧಾರ್ಮಿಕ ಕೈಂಕರ್ಯಗಳ ಮೂಲಕ ಶ್ರೀದೇವಿಯ ಆರಾಧನೆ ನಡೆಯುತ್ತಿದೆ.

ಸ್ಥಳೀಯರು ಹಾಗೂ ವಿವಿಧ ಭಾಗಗಳ ಸದ್ಭಕ್ತರು ಧಾರ್ಮಿಕ ಸೇವೆಗಳಲ್ಲಿ ಭಾಗಿಗಳಾಗುವ ಮೂಲಕ ಹಾಗೂ ಕಾರ್ಯಕ್ರಮಕ್ಕೆ ಅಗತ್ಯವಾದ ಹಲವು ವಿಧದ ಸುವಸ್ತುಗಳನ್ನು ಸಮರ್ಪಿಸುವುದರ ಮೂಲಕ ನವರಾತ್ರಿ ಉತ್ಸವದಲ್ಲಿ ಭಾಗಿಗಳಾಗುತ್ತಿದ್ದು, ಆಸ್ತಿಕ ಭಕ್ತಜನರು ಶ್ರೀದೇವಿಯ ದರ್ಶನ ಪಡೆಯಬಹುದಾಗಿದೆ.

ಅನ್ನಸಂತರ್ಪಣೆ ಹಾಗೂ ಚಂಡಿಕಾ ಹೋಮ:
ದಿನಾಂಕ ೨೨.೧೦.೨೦೨೩ ಭಾನುವಾರರಂದು ಸಾರ್ವಜನಿಕ ಅನ್ನಸಂತರ್ಪಣೆ ಹಾಗೂ ೨೩.೧೦.೨೦೨೩ ರಂದು ಶ್ರೀ ಚಂಡಿಕಾ ಹೋಮ ನಡೆಯಲಿದ್ದು, ಆಸ್ತಿಕ ಭಕ್ತಮಹಾಜನರು ಪುಣ್ಯಕಾರ್ಯದಲ್ಲಿ ಭಾಗಿಗಳಾಗಿ ಶ್ರೀದುರ್ಗಾಪರಮೇಶ್ವರಿಯ ಅನುಗ್ರಹಕ್ಕೆ ಪಾತ್ರರಾಗಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕ 9148459191.

ಸ್ಥಳದ ಹಿನ್ನೆಲೆ:

ಮಂಜುನಾಥ ಬಿಲ್ಲವ ಎಂಬುವವರು ಶ್ರೀ ಅಖಿಲ ಹವ್ಯಕ ಮಹಾಸಭೆಯ ಸಮಾಜಮುಖೀ ಕಾರ್ಯಗಳನ್ನು ಗುರುತಿಸಿ, ಶ್ರೀ ರಾಮಚಂದ್ರಾಪುರಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಮಾರ್ಗದರ್ಶನದಂತೆ, ಭಟ್ಕಳ ಸಮೀಪದ ಬೆಳಕೆ ಗ್ರಾಮದಲ್ಲಿ ಶ್ರೀದುರ್ಗಾಪರಮೇಶ್ವರಿ ದೇವಾಲಯ, ನಾಗದೇವರ ಸನ್ನಿಧಿ, ಬಯಲು ರಂಗಮಂದಿರ ಸಹಿತವಾದ ಸುಮಾರು ಒಂದು ಎಕರೆ ಜಾಗವನ್ನು ಶ್ರೀ ಅಖಿಲ ಹವ್ಯಕ ಮಹಾಸಭೆಗೆ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಸೇವಾರೂಪದಲ್ಲಿ ಈ ವರ್ಷದ ಏಪ್ರಿಲ್‌ನಲ್ಲಿ ಸಮರ್ಪಿಸಿದ್ದು, ಹವ್ಯಕ ಮಹಾಸಭೆಯಿಂದ ಶ್ರೀಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗಾಗಿ ಕಾರ್ಯಯೋಜನೆಗಳನ್ನು ಹಾಕಿಕೊಳ್ಳಲಾಗಿದೆ.