Home SIRSI ದಾಂಡಿಯಾ ನೃತ್ಯದಲ್ಲಿ ಪಾಲ್ಗೊಂಡ ಶಾಸಕ ಭೀಮಣ್ಣ ನಾಯ್ಕ.

ದಾಂಡಿಯಾ ನೃತ್ಯದಲ್ಲಿ ಪಾಲ್ಗೊಂಡ ಶಾಸಕ ಭೀಮಣ್ಣ ನಾಯ್ಕ.

ಶಿರಸಿ : ಶಿರಸಿ ಸಿದ್ದಾಪುರ ಶಾಸಕ ಭೀಮಣ್ಣ ನಾಯ್ಕ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಶಿರಸಿಯಲ್ಲಿ ನೆಲೆಸಿರುವ ರಾಜಸ್ಥಾನೀ ವಿಷ್ಣು ಸಮಾಜದವರು ಆಯೋಜಿಸಿರುವ ನವರಾತ್ರಿ-ದಾಂಡಿಯಾ-ರಾಸ್ ಕಾರ್ಯಕ್ರಮದಲ್ಲಿ ಪರಿವಾರ ಸಮೇತ ಪಾಲ್ಗೊಂಡು, ಪ್ರತಿಷ್ಠಾಪಿತ ದೇವಿಗೆ ಆರತಿ ಬೆಳಗಿ, ದಾಂಡಿಯಾದಲ್ಲಿ ಹೆಜ್ಜೆ ಹಾಕಿ ಗಮನಸೆಳೆದರು.

ನಂತರ ಮಾತನಾಡಿದ ಅವರು ಇದು ಒಂದು ಸಮಾಜದ ಕಾರ್ಯಕ್ರಮ ಅಲ್ಲ. ದೇಶದ ಪರಂಪರೆಯ ವಿಶೇಷ ಆಚರಣೆಯಾಗಿದೆ. ದೇಶದಲ್ಲಿ ಎಲ್ಲ ಸಮುದಾಯ, ಜಾತಿಯವರಿದ್ದಾರೆ. ಎಲ್ಲರೂ ಒಂದಾಗಿ ಬದುಕುತ್ತೇವೆ. ಅವರವರ ಆಚರಣೆ ಅವರು ಮಾಡಿಕೊಂಡು ಬಂದಿದ್ದಾರೆ. ಹಿಂದು ಪರಂಪರೆಯನ್ನು ಅವರವರ ಸಮುದಾಯದವರ ಆಚರಣೆಯಂತೆ ಆಚರಿಸಿಕೊಂಡು ಉಳಿಸಿಕೊಂಡು ಬಂದಿದ್ದಾರೆ. ಆದರೆ ಎಲ್ಲರ ಭಾವನೆ ಒಂದೇ. ಪರಂಪರೆ ಎಂದಿಗೂ ನಶಿಸಲು ಬಿಡಬಾರದು ಎಂದು ಎಲ್ಲೆಲ್ಲಿ ಸಮುದಾಯ ಇದೆಯೋ ಅಲ್ಲಿಯೇ ಸಂಘಟಿಸಿ ಕಾರ್ಯಕ್ರಮ ಆಚರಿಸುತ್ತಾ ಬಂದಿದ್ದಾರೆ ಎಂದರು.


ನೀವು 10 ದಿನಗಳ ಪೂಜೆ, ದಾಂಡಿಯಾ ಸೇವೆಯ ಸಾಂಪ್ರದಾಯಿಕ ನೃತ್ಯ ಸೇವೆ ಮಾಡುವುದು ಹೆಮ್ಮೆಯ ವಿಷಯ. ತಾಯಂದಿರು ಪೂಜೆಗಳಲ್ಲಿ ಸಂಪ್ರದಾಯ ಆಚರಣೆಯನ್ನು ಹೆಚ್ಚಿನದಾಗಿ ಆಚರಿಸುವುದರಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಇನ್ನೂ ಹೆಚ್ಚಿನ ಶಕ್ತಿ ಆ ತಾಯಿ ನಿಮಗೆಲ್ಲ ನೀಡಲಿ ಎಂದು ಪ್ರಾರ್ಥಿಸೋಣ. ಸಮಾಜವನ್ನು ಇನ್ನಷ್ಟು ಹೆಚ್ಚು ಎತ್ತಿ ಹಿಡಿಯಲು ಮಕ್ಕಳಿಗೆ ಸಂಸ್ಕಾರ ನೀಡಬೇಕು. ಜೊತೆಯಲ್ಲಿ ದೇಶ, ನಾಡಿನ ಅಭಿಮಾನ, ನೆರೆಹೊರೆಯವರೊಂದಿಗೆ ಭಾವನಾತ್ಮಕತೆಯೊಂದಿಗೆ ಬಾಳುವುದು ಮುಖ್ಯ. ನಾವೆಲ್ಲ ಒಂದಾಗಿ ಆಚರಿಸಬೇಕು, ಎಂದರು.

ವಿಡಿಯೋ


ರಾಜಸ್ಥಾನದಿಂದ ಇಲ್ಲಿಗೆ ಬಂದು, ಇಲ್ಲಿ ನೆಲೆಸಿ, ಕನ್ನಡಿಗರೊಂದಿಗೆ ಉತ್ತಮ ಬಾಂಧವ್ಯ ಹೊಂದಿ, ವ್ಯಾಪಾರ, ವ್ಯವಹಾರ ಮಾಡುತ್ತಿದ್ದೀರಿ. ನಿಮಗೆ ಎಲ್ಲ ರೀತಿಯ ಸಹಕಾರ ನೀಡಿ ನಿಮಗೆ ಯಾವುದೇ ತೊಡಕು ಬಾರದ ರೀತಿಯಲ್ಲಿ ನನ್ನ ಸಹಕಾರ ಸದಾ ಇರುತ್ತದೆ. ಭೂಮಿ ಒಂದೇ, ನಮ್ಮಲ್ಲಿ ಭಿನ್ನಾಭಿಪ್ರಾಯ ಇರಬಾರದು. ನಿಸ್ವಾರ್ಥ ಸೇವೆ ಓರ್ವ ಶಾಸಕನ ಗುರಿ. ಅದನ್ನು ಮಾಡುತ್ತೇನೆ ಎಂದರು.

ಈ ಸಂದರ್ಭದಲ್ಲಿ ಸಮಾಜದ ಅಧ್ಯಕ್ಷ ಹಸ್ತಿಮಲ್ ಚೌಧರಿ, ಕೋಶಾಧ್ಯಕ್ಷ ಖಾನಾಲಾಲ್ ಚೌಧರಿ ರವೀಶಜಿ ಸುತಾರ್, ಮಂಗಲ ಪಾಟೀಲ್, ಅಭಯ್‌ಸಿಂಗ್, ಜಸರಾಜ್, ಶಾಸಕರ ಪತ್ನಿ ಗೀತಾ ನಾಯ್ಕ, ಪುತ್ರ ಅಶ್ವಿನ್ ನಾಯ್ಕ, ಜ್ಯೋತಿ ಪಾಟೀಲ್, ಗೀತಾ ಶೆಟ್ಟಿ, ಶ್ರೀನಿವಾಸ ನಾಯ್ಕ, ಶ್ಯಾಮ್ ಭಟ್ಟ, ರವಿ ಹಾಗೂ ಇತರರು ಉಪಸ್ಥಿತರಿದ್ದರು.