Home KUMTA ಹೆಗಡೆಯ ಶಾಂತಿಕಾಂಬಾ ದೇವಾಲಯದಲ್ಲಿ ಶರನ್ನವರಾತ್ರಿ ಸಂಪನ್ನ.

ಹೆಗಡೆಯ ಶಾಂತಿಕಾಂಬಾ ದೇವಾಲಯದಲ್ಲಿ ಶರನ್ನವರಾತ್ರಿ ಸಂಪನ್ನ.

ಕುಮಟಾ : ತಾಲೂಕಿನ ಹೆಗಡೆಯ ಶ್ರೀ ಶಾಂತಿಕಾಂಬಾ ಪರಮೇಶ್ವರಿ ದೇವಾಲಯದಲ್ಲಿ ಒಂಬತ್ತು ದಿನ ಶರನ್ನವರಾತ್ರಿ ಉತ್ಸವ ವಿಜೃಂಭಣೆಯಿಂದ ಸಂಪನ್ನಗೊಂಡಿತು. ಜಾಗೃತ ಶಕ್ತಿಪೀಠ ಗಳಲ್ಲಿ ಒಂದಾದ ಹೆಗಡೆಯ ಶ್ರೀ ಶಾಂತಿಕಾಂಬಾ ಪರಮೇಶ್ವರಿ ದೇವಿಯ ನವರಾತ್ರಿ ಉತ್ಸವ ಅತ್ಯಂತ ವಿಜೃಂಭಣೆಯಿಂದ ಜರುಗಿತು.. ಒಂಭತ್ತು ದಿನಗಳೂ ಕೂಡ ಗ್ರಾಮದಲ್ಲಿ ಹಬ್ಬದ ವಾತಾವರಣ ಮೂಡಿತ್ತು. ಗ್ರಾಮದ ಭಕ್ತರಷ್ಟೇ ಅಲ್ಲದೇ ಪರ ಊರಿನ ಭಕ್ತರು ಬಂದು ದೇವಿಯ ದರ್ಶನ ಪಡೆದು ಸೇವೆ ಸಲ್ಲಿಸಿ ಪ್ರಸಾದ ಭೋಜನ ಸವಿದು ಪುನೀತರಾದರು.

   ವೇ.ಮೂ ಪರಮೇಶ್ವರ ಶಾಸ್ತ್ರೀ ಹಾಗೂ ವೇ.ಮೂ ತಿಮ್ಮಣ್ಣ ಭಟ್ಟರವರ ನೇತೃತ್ವದಲ್ಲಿ ಹಾಗೂ ಇತರ ಬ್ರಾಹ್ಮಣ ರ ಸಹಕಾರದೊಂದಿಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ನವಚಂಡೀ ಹವನ, ಪ್ರತಿದಿನ ಬಲಿ, ಮಾತೆಯ ಪಲ್ಲಕ್ಕಿ ಉತ್ಸವ ದೊಂದಿಗೆ ಮಹಾಮಂಗಳಾರತಿ ನಡೆಸಲಾಯಿತು.. ದೇವಾಲಯ ಮೊಕ್ತೇಶ್ವರ ನಾಗೇಶ ಶಾನಭಾಗ ಮೊಕ್ತೇಶ್ವರ ಮಂಡಳಿಯ ಪುರುಷೋತ್ತಮ ಶಾನಭಾಗ, ಎಮ್ ಎಮ್ ನಾಯ್ಕ, ಗ್ರಾಮದ ಹೆಗಡೆಯವರಾದ ಪ್ರಭಾಕರ ಹೆಗಡೆ ದಂಪತಿಗಳು ಪ್ರತಿನಿತ್ಯ ನವರಾತ್ರಿ ಉತ್ಸವ ಸಾಂಗವಾಗಿ ಜರುಗಲು ಎಲ್ಲ ರೀತಿಯ ಸಹಕಾರದೊಂದಿಗೆ ಭಕ್ತರಿಗೆ ಯಾವುದೇ ಸಮಸ್ಯೆ ಬರದಂತೆ ಉತ್ತಮ ವ್ಯವಸ್ಥೆ ಕೈಗೊಂಡಿದ್ದರು.

   ಪ್ರತಿದಿನ ದೇವಿಯ ಎಲ್ಲ ಸೇವೆಗಳಿಗೆ ಕೃಷ್ಣ ಬಂಢಾರಿ ಹಾಗೂ ತಂಡದ ಪಂಚವಾದ್ಯದ ನಾದ ಇನ್ನಷ್ಟು ಭಕ್ತಿಪರವಶರಾಗುವಂತೆ ಮಾಡುತ್ತಿತ್ತು. ಶ್ರೀ ಶಾಂತಿಕಾಂಬಾ ಸೇವಾ ಬಳಗದ ಎಲ್ಲ ಸದಸ್ಯರು ಎಲ್ಲ ಭಕ್ತರ ಸಹಕಾರದೊಂದಿಗೆ ಈ ವರ್ಷದಿಂದ ಪ್ರಾರಂಭಿಸಿದ್ದ ಪ್ರಸಾದ ಭೋಜನ ತುಂಬಾ ಅಚ್ಚುಕಟ್ಟಾಗಿ ಯಾವುದೇ ಗೊಂದಲವಿಲ್ಲದೇ ಯಾವ ಭಕ್ತರಿಗೂ ಅಸಮಾಧಾನ ವಾಗದ ರೀತಿಯಲ್ಲಿ ವ್ಯವಸ್ಥೆ ಕೈಗೊಂಡು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು. ದಿನದಿಂದ ದಿನಕ್ಕೆ ಪ್ರಸಾದ ಭೋಜನ ಕ್ಕೆ ಭಕ್ತರ ಸಂಖ್ಯೆ ಹೆಚ್ಚುತ್ತಲೇ ಇದ್ದರೂ ತುಂಬಾ ಸಂತಸದಿಂದ ಎಲ್ಲರಿಗೂ ಪ್ರಸಾದ ಭೋಜನ ವ್ಯವಸ್ಥೆ ತಕ್ಷಣ ಮಾಡಿ ಭಕ್ತರ ಮನ ತಣಿಸಿದ್ದು ವಿಶೇಷ. ಒಂಭತ್ತನೇ ದಿನವಾದ ಸೋಮವಾರ ಸುಮಾರು ಮೂರು ಸಾವಿರಕ್ಕೂ ಅಧಿಕ ಭಕ್ತರು ಪ್ರಸಾದ ಭೋಜನ ಸವಿದರು.. 

  ನವರಾತ್ರಿ ಕೊನೆಯ ದಿನ ಶ್ರೀ ಶಾಂತಿಕಾಂಬಾ ಸೇವಾ ಬಳಗದಿಂದ ದೇವಾಲಯದಲ್ಲಿ ತಮ್ಮನ್ನು ತಾವು ಅರ್ಪಿಸಿಕೊಂಡು ಹಲವು ದಶಕಗಳ ಕಾಲ ಸುಧೀರ್ಘ ಸೇವೆ ಸಲ್ಲಿಸಿ  ಮೊಕ್ತೇಶ್ವರ ರಾಗಿ ನಾಗೇಶ ಶಾನಭಾಗ ಹಾಗೂ ಗ್ರಾಮದ ಹೆಗ್ಗಡೆಯವರಾಗಿ ಹರಿಹರ ಹೆಗಡೆ ಯವರು ಕಾಯಾ ವಾಚಾ ಮನಸಾ ತಾಯಿಯ ಸೇವೆಗೈದ ಹಿನ್ನೆಲೆಯಲ್ಲಿ ಅವರೀರ್ವರಿಗೂ ನಾಗರೀಕ ಸನ್ಮಾನ ಮಾಡಿ ಗೌರವಿಸಲಾಯಿತು..