Home KUMTA ಗೆಲ್ ಗಾಯಿ ಪಂದ್ಯಾವಳಿ ನಡೆಸಿ ಗಮನಸೆಳೆದ ಯುವಕರು.

ಗೆಲ್ ಗಾಯಿ ಪಂದ್ಯಾವಳಿ ನಡೆಸಿ ಗಮನಸೆಳೆದ ಯುವಕರು.

ಕುಮಟಾ : ಉತ್ತರ ಕನ್ನಡ ಜಿಲ್ಲೆಯ ಗ್ರಾಮೀಣ ಭಾಗದ ಪ್ರಸಿದ್ದ ಕ್ರೀಡೆ ಸುಲು ಗಾಯಿ (ಗೆಲ್ ಗಾಯಿ) ಬಹುತೇಕ ಕಣ್ಮೆಯಾಗುತ್ತಿರುವ ನಡುವೆ ತಾಲೂಕಿನ ಕೋಡ್ಕಣಿಯ ಯುವಕರ ತಂಡ ಸುಲುಗಾಯಿ ಪಂದ್ಯಾವಳಿಯನ್ನು ಆಯೋಜಿಸಿ ಕ್ರೀಡೆಗೆ ಮತ್ತಷ್ಟು ಮೆರಗು ತಂದಿದೆ.

ಈ ಮೂಲಕ ಕಣ್ಮರೆಯಾಗುತ್ತಿದ್ದ ಕ್ರೀಡೆಗೆ ಹೊಸ ರೂಪ ನೀಡಿ ಅದನ್ನು ಸಮಾಜಕ್ಕೆ ಪರಿಚಯಿಸುವ ಹಾಗೂ ಮುಂದಿನ ಜನಾಂಗಕ್ಕೆ ಅದನ್ನು ವರ್ಗಾಯಿಸುವ ಕಾರ್ಯವನ್ನು ಈ ಯುವಕರ ತಂಡ ಮಾಡಿ ಮೆಚ್ಚುಗೆ ಪಡೆದುಕೊಂಡಿದೆ.

ದೀಪಾವಳಿ ಹಬ್ಬದ ಅಂಗವಾಗಿ ಕೋಡ್ಕಣಿ ಯುವಕರ ತಂಡವು ಸುಲುಗಾಯಿ ಆಟವನ್ನು ಪಂದ್ಯಾವಳಿ ರೂಪದಲ್ಲಿ ಆಯೋಜನೆ ಮಾಡಿದ್ದು, ಈ ವೇಳೆ ತಾಲೂಕಿನ ಹಲವೆಡೆಯ ಸ್ಪರ್ಧಾಳುಗಳು ಪಾಲ್ಗೊಂಡು ಕ್ರೀಡೋತ್ಸಾಹ ಮೆರೆದರು.

ಕಣ್ಣಳತೆಯ ದೂರದಲ್ಲಿ ಕಾಯಿಯನ್ನು ಇಟ್ಟು, ದೂರದಿಂದ ಕಲ್ಲಿನಿಂದ ಹೊಡೆದು ಕಾಯಿಯನ್ನು ಇಬ್ಬಾಗಿಸುವುದು ಈ ಆಟದ ವಿಶೇಷತೆ. ಈ ರೀತಿಯಾಗಿ ಯಾರು ಜಯಗಳಿಸುತ್ತಾರೋ ಅವರಿಗೆ ನಗದು ಬಹುಮಾನವನ್ನು ಸಹ ಘೋಷಣೆ ಮಾಡಲಾಗಿತ್ತು.

ಈ ಆಟದಲ್ಲಿ ಗೆದ್ದ  ಸ್ಪರ್ಧಾಳುಗಳಿಗೆ ಕ್ರಮವಾಗಿ 8000, 4000,2000,1000 ರೂ.ಗಳ ನಗದನ್ನು ನೀಡಿ ಗೌರವಿಸಲಾಯಿತು. ಈ ಆಟವನ್ನು ನೋಡಲು ಸಾವಿರಾರು ಜನರು ಸೇರಿದ್ದು ಪ್ರತಿಯೊಬ್ಬ ಸ್ಪರ್ದಾಳುಗಳನ್ನು ಹುರಿದುಂಬಿಸಿ ಕೇಕೆ ಹಾಕಿ ಜನರು ಸಂತಸ ಪಟ್ಟರು.

ಈ ಸ್ಪರ್ಧೆಯಲ್ಲಿ ಶಿವಾರಾಜ ದಿವಗಿ ಪ್ರಥಮ ಬಹುಮಾನ, ಪರಮೇಶ್ವರ ಪಟಗಾರ ಪಡುವಣಿ ದ್ವಿತೀಯ, ಭಾರ್ಗವ ತೃತೀಯ ಹಾಗೂ ರಾಜೇಶ ಪಟಗಾರ ಚತುರ್ಥ ಬಹುಮಾನ ಪಡೆದುಕೊಂಡರು. ಗ್ರಾಮೀಣ ಕ್ರೀಡೆಗಳತ್ತ ಯುವ ಜನತೆ ಒಲವು ತೋರಿದ್ದು, ಇದಕ್ಕೆ ಸಾಕ್ಷಿ ಎನ್ನುವಂತೆ ಈ ಕ್ರೀಡಾಕೂಟ ಯಶಸ್ವಿಯಾಗಿ ನಡೆದು ಬಹು ಮೆಚ್ಚುಗೆ ಪಡೆದುಕೊಂಡಿತು.