Home Uttara Kannada “ಹಣತೆ ಬೆಳಗಿದ ನಮ್ಮೆಲ್ಲ ಆಲೋಚನೆ ಬೆಳಕಿನ ಸುತ್ತವೇ ಇದೆ’‘ಹಣತೆ ಬೆಳಕಿನಲ್ಲಿ ದೀಪಾವಳಿ ಕವಿಗೋಷ್ಠಿ’ ಉದ್ಘಾಟಿಸಿದ ಗೋವಿಂದ...

“ಹಣತೆ ಬೆಳಗಿದ ನಮ್ಮೆಲ್ಲ ಆಲೋಚನೆ ಬೆಳಕಿನ ಸುತ್ತವೇ ಇದೆ’‘ಹಣತೆ ಬೆಳಕಿನಲ್ಲಿ ದೀಪಾವಳಿ ಕವಿಗೋಷ್ಠಿ’ ಉದ್ಘಾಟಿಸಿದ ಗೋವಿಂದ ಹೆಗಡೆ

ಯಲ್ಲಾಪುರ: ದೀಪಾವಳಿಯಲ್ಲಿ ಹಣತೆ ಬೆಳಗಿದ್ದೇವೆ ಅಂದರೆ ನಮ್ಮೆಲ್ಲ ಆಲೋಚನೆ, ಆಚರಣೆ ಬೆಳಕಿನ ಸುತ್ತವೇ ಇದೆ. ನಮ್ಮ ಒಳಗನ್ನು ಬೆಳಗಬೇಕಾಗಿದೆ ಎಂದರೆ ಅಲ್ಲಿ ಯಾವ ಯಾವ ರೀತಿಯ ಕತ್ತಲೆಗಳನ್ನು ತುಂಬಿಕೊಂಡಿದ್ದೇವೆ ಎಂದು ಎರಡು ಕ್ಷಣ ಯೋಚಿಸಿದರೆ ಸಾಕು, ಒಳಗನ್ನು ಬೆಳಗಬೇಕಾದ ಅವಶ್ಯಕತೆ ಅರಿವಾಗುತ್ತದೆ. ಈ ಹಿನ್ನೆಲೆಯಲ್ಲಿ ಹಣತೆ ಬಳಗದ ಶ್ರಮ ಸಾರ್ಥಕ ಎಂದು ಹಿರಿಯ ಕವಿ ಡಾ. ಗೋವಿಂದ ಹೆಗಡೆ ಅಭಿಪ್ರಾಯಪಟ್ಟರು. ಹಣತೆ ಸಾಹಿತ್ಯಕ ಸಾಂಸ್ಕೃತಿಕ ಜಗಲಿ ಉತ್ತರ ಕನ್ನಡ ಪಟ್ಟಣದ ಅಡಿಕೆ ಭವನದಲ್ಲಿ ಹಮ್ಮಿಕೊಂಡ ‘ಹಣತೆ ಬೆಳಕಿನಲ್ಲಿ ದೀವಾವಳಿ ಕವಿಗೋಷ್ಠಿ ಉದ್ಘಾಟಿಸಿ ಮಾತನಾಡುತ್ತಿದ್ದ ಅವರು ನಾವು ಪ್ರತಿಯೊಬ್ಬರೂ ಅನನ್ಯರು. ನಮ್ಮ ಕವಿತೆಗಳು ಕೂಡ ಹಾಗೆಯೇ ಆಗಬೇಕು. ನಕಲು ಅನುಕರಣೆ ಬೇಡ. ಬರಹಗಾರ ತನ್ನ ಬಾವಕೋಶವನ್ನು ವಿಸ್ತರಿಸಿಕೊಳ್ಳಲು ಸದಾ ಪ್ರಯತ್ನಿಸುತ್ತಿರಬೇಕು. ಹಾಗೆಯೇ ತನ್ನ ಶಬ್ದ ಕೋಶವನ್ನು ಕೂಡ. ಭಾಷೆಯ ತಪ್ಪಾದ ಬಳಕೆಯ ಮೂಲಕ ಮುಕ್ಕಾದ ಕವಿತೆಗಳನ್ನು ಅಪಾಂಗರನ್ನು ಸೃಷ್ಟಿಸುವುದು ಬೇಡ ಎಂದು ಕವಿ ಗೋವಿಂದ ಹೆಗಡೆ ಹೇಳಿದರು.


ಕವಿ ತನ್ನ ಅಂತರಂಗವನ್ನೇ ಪರಮಾಣುವನ್ನಾಗಿಸಿಕೊಂಡು ಬರೆಯಬೇಕು. ಎಡ, ಬಲ, ನಡು ಪಂಥದ ಗೋಜು, ಇಸಂ ಹೆಸರಿನಲ್ಲಿ ಸಾಹಿತ್ಯದ ಮಿತಿ ಇಟ್ಟುಕೊಳ್ಳಬೇಕಾಗಿಲ್ಲ. ಘೋಷಣೆಯ ಸಾಹಿತ್ಯ ಕಾಲದ ಪರೀಕ್ಷೆಯಲ್ಲಿ ನಿಲ್ಲುವುದು ಕಷ್ಟ ಎಂದು ಹೆಗಡೆ ನುಡಿದರು.


ಆಶಯ ಮಾತುಗಳನ್ನಾಡಿದ ಹಣತೆ ಜಿಲ್ಲಾಧ್ಯಕ್ಷ ಅರವಿಂದ ಕರ್ಕಿಕೋಡಿ, ಕವಿ ಇಂದು ತನ್ನ ಸ್ಥಿತಪ್ರಜ್ಞತ್ವ ಉಳಿಸಿಕೊಂಡು ಬರೆಯುವುದು ಸವಾಲಿನ ಸಂಗತಿಯಾಗಿದೆ. ಜೊತೆಗೆ ತಾನು ಬರೆದ ಕೃತಿಯನ್ನು ಮಾರಾಟ ಮಾಡಲು ಸರಕಾರದತ್ತ ಮುಖ ಮಾಡಿ ಸೋಲುತ್ತಿದ್ದಾನೆ. ಇದರ ಬದಲು ಎಲ್ಲ ಬರಹಗರರು ಸಹಕಾರ ಮನೋಭಾವದೊಂದಿಗೆ ರ‍್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕಾದ ತುರ್ತು ಇದೆ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಯಕ್ಷಗಾನ ಕಲಾವಿದ, ಕವಿ ಗಣಪತಿ ಹೆಗಡೆ ಕೊಂಡದಕುಳಿ, ಸಂಗೀತ, ಸಾಹಿತ್ಯ, ಯಕ್ಷಗಾನ ಎಲ್ಲ ಕಲೆಗಳೂ ಸತ್ಯದ ಹುಡುಕಾಟವೇ ಆಗಿದೆ. ಕವಿ ಬದುಕಿನಲ್ಲಿ ಎಷ್ಟೇ ಕಷ್ಟ ಅನುಭವಿಸಿದರೂ ಆತ ಬರೆದ ಕಾವ್ಯ ಸಮಾಜಕ್ಕೆ ಸುಖವನ್ನೇ ಕೊಡುತ್ತದೆ ಎಂದರು.


ಅಧ್ಯಕ್ಷತೆ ವಹಿಸಿದ್ದ ಹಿರಿಯ ಕವಿ ವನರಾಗ ಶರ್ಮ ಬರಹಗಾರ ಸೃಷ್ಟಿತತ್ವ ಮರೆಯದೇ ತನ್ನೊಳಗನ್ನು ಹೊರಹಾಕಲು ಪ್ರಯತ್ನಿಸಬೇಕು. ಅಂದಾಗ ಮಾತ್ರ ಅದು ಎಲ್ಲರನ್ನೂ ಮುಟ್ಟುತ್ತದೆ, ತಟ್ಟುತ್ತದೆ. ರಾಜ್ಯದಲ್ಲಿಯೇ ಮೊಟ್ಟಮೊದಲ ಬಾರಿಗೆ ‘ಹಣತೆ’ ಸಂಘಟನೆ ರಮ್ಜಾನ್, ದೀಪಾವಳಿ, ಕ್ರಿಸ್ಮಸ್ ಕವಿಗೋಷ್ಠಿಯನ್ನು ಮಾಡುತ್ತಿರುವುದು ತುಂಬ ಅರ್ಥಪೂರ್ಣ ಎಂದರು.


ಕವಿಗೋಷ್ಠಿಯಲ್ಲಿ ಸಿಂಧುಚಂದ್ರ ಶಿರಸಿ, ಶೋಭಾ ನಾಯ್ಕ ಹಿರೇಕೈ, ಸುರೇಶ ಕಡೆಮನಿ, ಗಣಪತಿ ನಾಯ್ಕ ಗೇರಸೊಪ್ಪ, ಸುಮಂಗಲ ಚಕ್ರಸಾಲಿ, ಕಮಲಾ ಕೊಂಡದಕುಳಿ, ಸುಬ್ರಾಯ ಬಿದ್ರಮನೆ, ದತ್ತಾತ್ರೇಯ ಹೆಗಡೆ ಕಣ್ಣಿಪಾಲ, ಪ್ರತಿಮಾ ಕೋಮಾರ್, ಅಬ್ದುಲ್ ರೆಹಮಾನ್, ಗಾಯತ್ರಿ ರಾಘವೇಂದ್ರ, ಸಣ್ಣಪ್ಪ ಭಾಗವತ, ಸುಚೇತನಾ ನಾಗರಾಜ ಮದ್ಗುಣಿ, ರಾಘವೇಂದ್ರ ಟಿ. ನಾಯ್ಕ, ಪೂನಂ ಧಾರವಾಡಕರ್, ರಾಘವೇಂದ್ರ ಗಡೆಪ್ಪನವರ್ ಮುಂತಾದವರು ಕವನ ವಾಚನ ಮಾಡಿದರು.


ವೇದಿಕೆಯಲ್ಲಿ ಹಣತೆ ಜಿಲ್ಲಾ ಸಂಚಾಲಕ ಎನ್. ಜಯಚಂದ್ರನ್, ಕಾರ್ಯಕಾರಿ ಸದಸ್ಯ ಉಪೇಂದ್ರ ಘೋರ್ಪಡೆ, ದಾಂಡೇಲಿ ಘಟಕದ ಅಧ್ಯಕ್ಷ ರಘವೇಂದ್ರ ಗಡೆಪ್ಪನವರ್ ಉಪಸ್ಥಿತರಿದ್ದರು. ಹಣತೆ ಯಲ್ಲಾಪುರ ಘಟಕದ ಅಧ್ಯಕ್ಷ ರಾಘವೇಂದ್ರ ಹೊನ್ನಾವರ ಸ್ವಾಗತಿಸಿದರು, ಪದ್ಮಾ ಪಟಗಾರ ವಂದಿಸಿದರು.