Home HONNAVAR ಚಂದಾವರ ಪೇಸ್ತ್ ಸಂಪನ್ನ : ಮೊಂಬತ್ತಿ ಬೆಳಗಿ ಪ್ರಾರ್ಥನೆ

ಚಂದಾವರ ಪೇಸ್ತ್ ಸಂಪನ್ನ : ಮೊಂಬತ್ತಿ ಬೆಳಗಿ ಪ್ರಾರ್ಥನೆ

ಕುಮಟಾ : ವಿವಿಧ ಜಾತಿ ಧರ್ಮ ಪಂಥದ ಆಚರಣೆಗಳು ವಿಭಿನ್ನವಾಗಿದ್ದರೂ, ಹಲವು ಆಚರಣೆಗಳು ಎಲ್ಲಾ ಸಮುದಾಯದ ಜನರೂ ಸೇರಿ ವಿಶೇಷವಾಗಿ ಆಚರಿಸಲ್ಪಡುತ್ತದೆ. ಅಂತಹವುಗಳಲ್ಲಿ ಸರ್ವ ಧರ್ಮಿಯರ ಭಾವೈಕ್ಯತೆಯ ಹಬ್ಬ ಚಂದಾವರ ಪೇಸ್ತ್ ಸಹ ಒಂದು.

ಶನಿವಾರ ಸಾವಿರಾರು ಭಕ್ತರ ಪಾಲ್ಗೊಳ್ಳುವಿಕೆಯಲ್ಲಿ ಶ್ರದ್ಧಾಭಕ್ತಿಯಿಂದ ಚಂದಾವರ ಪೇಸ್ತ್ ಸಂಪನ್ನಗೊಂಡಿತು. ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ ಭಕ್ತರು ಮೇಣದ ಬತ್ತಿ ಬೆಳಗಿ ಇಷ್ಠಾರ್ಥ ಸಿದ್ಧಿಸುವಂತೆ ಪ್ರಾರ್ಥಿಸಿದರು.

ದೇವಧೂತ ಸೆಂಟ್ ಫ್ರಾನ್ಸಿಸ್ ಝೇವಿಯರರ ದರ್ಶನ ಪಡೆಯಲು ಕ್ರಿಶ್ಚಿಯನ್ ಸಮುದಾಯದ ಜೊತೆಗೆ ಇತರೆ ಧರ್ಮಿಯರೂ ಕೂಡಾ ಚರ್ಚ್ ಗೆ ಆಗಮಿಸಿ, ಪ್ರಾರ್ಥಿಸಿದರು. ಚರ್ಚಿನ ಹೊರಭಾಗದಲ್ಲಿ ದೇವನ ದರ್ಶಕ್ಕೆ ಅವಕಾಶ ಕಲ್ಪಿಸಲಾಗಿತ್ತು.

ರಸ್ತೆಯ ಎರಡೂ ಭಾಗಗಳಲ್ಲಿ ವಿವಿಧ ತಿಂಡಿ-ತಿನಿಸುಗಳ ಮಳಿಗೆಗಳು, ಜಾತ್ರಾ ಪೇಟೆಗಳು ಜನರನ್ನು ಆಕರ್ಷಿಸುತ್ತಿದ್ದವು. ಚರ್ಚ್‌ನ ಆವರಣ ಸೇರಿದಂತೆ ರಸ್ತೆಯೂದ್ದಕ್ಕೂ ಜನ ಜಾತ್ರೆಯಂತೆ ಸೇರಿದ್ದರು. ಚರ್ಚ್‍ನಲ್ಲಿ ಯೆಸುವಿನ ಪ್ರಾರ್ಥನೆಯ ಜೊತೆಗೆ ಧರ್ಮಗುರುಗಳಿಂದ ಪ್ರವಚನ ನಡೆಯಿತು.

ಚರ್ಚ್ ಎದುರಿನ  ವಿಶಾಲ ಬಯಲಿನಲ್ಲಿ ಬಲಿ ಪೂಜೆ, ಸಾಮೂಹಿಕ ಪ್ರಾರ್ಥನೆ ,ತಪ್ಪು ಒಪ್ಪುಗಳ ಸಮರ್ಪಣೆ, ಕ್ಷಮಾಪಣಾ ವಿಧಿಗಳು ನಡೆಯುವ ಮೂಲಕ ಸಾಂಪ್ರದಾಯಿಕ ರೀತಿಯಲ್ಲಿ ಹಬ್ಬ ಆಚರಿಸಿದ್ದು ವಿಶೇಷ.

ಸಂತ ಫ್ರಾನ್ಸಿಸ್ ಝೇವಿಯರ್‌ನ ಪ್ರತಿಮೆಯ ದರ್ಶನ ಪಡೆಯಲು ಕ್ರೈಸ್ತರು ಮಾತ್ರ­ವಲ್ಲದೇ ಹಿಂದೂ, ಮುಸ್ಲಿಂ ಸಮುದಾಯದವರೂ ಬರುವ ಕಾರಣ ಇದೊಂದು ಸರ್ವ ಧರ್ಮಗಳ ಸಮ್ಮೇಳನದಂತೆ ಭಾಸವಾಗುತ್ತದೆ. ಇಲ್ಲಿ ಹರಕೆ ಸಲ್ಲಿಸಿದರೆ ಇಷ್ಟಾರ್ಥ ಸಿದ್ಧಿಯಾಗುವುದು ಎಂಬ ನಂಬಿಕೆಯಿಂದ ಎಲ್ಲ ಧರ್ಮೀಯರೂ ಇಲ್ಲಿಗೆ ಬಂದು ಹರಕೆ ತೀರಿಸುತ್ತಾರೆ.

ಹೊನ್ನಾವರದಿಂದ ಅರೇ ಅಂಗಡಿ, ನೇಲಕೋಡು, ಹೆಬ್ಬಾರಕೆರೆ ಮೂಲಕ ಚಂದಾವರ ತಲುಪಬಹುದು. ಈ ಮಾರ್ಗವಾಗಿ ರಾಜ್ಯ ಸಾರಿಗೆ ಸಂಸ್ಥೆಯಿಂದ ನಿತ್ಯವೂ ಹಲವು ಬಸ್ ಸಂಚಾರ ಇದೆ. ಈ ಚರ್ಚ್‌ ಹೆದ್ದಾರಿ ಪಕ್ಕದಲ್ಲೇ ಇರುವುದರಿಂದ ಜನರು ಸಾಮಾನ್ಯವಾಗಿಯೇ ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಾರೆ. ಇದರಲ್ಲಿಯೂ ಗ್ರಾಮೀಣ ಭಾಗದ ಮಹಿಳೆಯರು ಬಲು ಅಪರೂಪದ ಗಡ್ಡೆ-ಗೆಣಸುಗಳನ್ನು ಮಾರಾಟ ಮಾಡುತ್ತಿರುವುದು ಗಮನ ಸೆಳೆಯಿತು.