Home KUMTA ಶಾಸಕರನ್ನು ಭೇಟಿಮಾಡಿದ ಅಘನಾಶಿನಿ ಉಳಿಸಿ ರೈತ ಸಮಿತಿಯ ಸದಸ್ಯರು.

ಶಾಸಕರನ್ನು ಭೇಟಿಮಾಡಿದ ಅಘನಾಶಿನಿ ಉಳಿಸಿ ರೈತ ಸಮಿತಿಯ ಸದಸ್ಯರು.

ಕುಮಟಾ : ಅಘನಾಶಿನಿ ಉಳಿಸಿ ರೈತ ಸಮಿತಿಯ ಅಧ್ಯಕ್ಷ ಗಣಪತಿ ಗೌಡ ಅವರ ನೇತೃತ್ವದಲ್ಲಿ, ಆರ್. ವಿ. ಹೆಗಡೆ ಭದ್ರನ್, ವಿವೇಕ ಹೆಗಡೆ ಮೂರೂರು, ಗಿರಿಯ ಗೌಡ ಕಂಡವಳ್ಳಿ, ಡಾ. ಸುರೇಶ ಹೆಗಡೆ,  ವಿನೋದ್ ಪ್ರಭು, ಕುಮಾರ ಮಾರ್ಕಾಂಡೆಯ ಅವರ ತಂಡವು ಶಾಸಕರನ್ನು ಭೇಟಿ ಮಾಡಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಬಗ್ಗೆ ಸುಧೀರ್ಘ ಚರ್ಚೆ ನಡೆಸಿತು. 

ಹೋರಾಟ ಸಮಿತಿಯ ಅಹವಾಲನ್ನು ಆಲಿಸಿದ ಶಾಸಕರು, ಇದರ ಬಗ್ಗೆ ಕೂಲಂಕುಶವಾಗಿ ಪರಿಶೀಲನೆ ನಡೆಸುವುದಾಗಿಯೂ, ಹಾಗೂ ಮಾರಾಕಲ್ ಡಿಪೋ ಬಳಿ ಡ್ಯಾಮ್ ಮಾಡಿ ಅಲ್ಲಿಂದ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಜಾರಿಗೊಳಿಸಲು ಮುಖ್ಯ ಇಂಜಿನಿಯರ ಜೊತೆಗೆ ಸ್ಥಳಕ್ಕೆ ಆಗಮಿಸುವುದಾಗಿ ಭರವಸೆ ನೀಡಿರುವುದಾಗಿ ಅಧ್ಯಕ್ಷ ಗಣಪತಿ ಗೌಡ ತಿಳಿಸಿದ್ದಾರೆ.

ಇದೀಗ ಯೋಜನೆಯು ಸರಿಯಾದ ಹಾದಿಯಲ್ಲಿ ಹೋಗಬಹುದು ಎನ್ನುವ ವಿಶ್ವಾಸವಿದ್ದು, ಶೀಘ್ರದಲ್ಲಿಯೇ ಶಾಸಕರು ಕ್ರಮ ತೆಗೆದುಕೊಂಡು ಸಮಸ್ಯೆಯನ್ನು ಪರಿಹಾರ ಮಾಡುತ್ತಾರೆ ಎಂಬ ಭರವಸೆಯಿದೆ ಎಂದೂ ಹಾಗೂ ಪ್ರಸ್ತುತ ಯೋಜನೆಯ ಸ್ಥಳ ಬದಲಾವಣೆ ಮಾಡಿ ವರ್ಷದ 365 ದಿನವೂ ನಿಗದಿತ 53 ಗ್ರಾಮಗಳಿಗೆ ಕುಡಿಯುವ ನೀರಿನ ಪೂರೈಕೆ ಆಗುತ್ತದೆ ಎನ್ನುವ ವಿಶ್ವಾಸ, ಜೊತೆಗೆ ಶಾಸಕರ ಬರುವಿಕೆಯ ನಿರೀಕ್ಷೆಯಲ್ಲಿ ಇದ್ದೇವೆಂದೂ ಸಮಿತಿಯ ಸದಸ್ಯರು ಮಾಹಿತಿ ನೀಡಿದ್ದಾರೆ.

ಅಘನಾಶಿನಿ ಉಳಿಸಿ ರೈತ ಹೋರಾಟ ಸಮಿತಿಯ ಪ್ರಮುಖರು ಮುರ್ಡೇಶ್ವರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅವರನ್ನು ಭೇಟಿಮಾಡಿ, ಅವರಿಗೆ ಪ್ರಸ್ತುತ ಕುಡಿಯುವ ನೀರಿನ ಸ್ಥಳ ಬದಲಾವಣೆ ಕುರಿತು ಮನವಿ ನೀಡಿದ್ದೂ ಅಲ್ಲದೆ, ಪ್ರಸ್ತುತ ನಿಗದಿ ಆಗಿರುವ ಜಾಗದ ಕುರಿತಾದ ಸಮಸ್ಯೆಗಳನ್ನು ಚರ್ಚಿಸಿದ್ದಾರೆ. ಕೂಡಲೇ ಈ ಬಗ್ಗೆ ಪರಿಶೀಲನೆ ನಡೆಸಿ ಶೀಘ್ರದಲ್ಲಿ ಕ್ರಮ ಕೈಗೊಳ್ಳುವ ಭರವಸೆ ನೀಡಿರುವುದಾಗಿ ಅಘನಾಶಿನಿ ಉಳಿಸಿ ರೈತ ಹೋರಾಟ ಸಮಿತಿಯ ಅಧ್ಯಕ್ಷರು ಗಣಪತಿ ಗೌಡ ತಿಳಿಸಿದ್ದಾರೆ.