Home Uttara Kannada ನಿಗದಿತ ಅವಧಿಯೊಳಗೆ ಸಕಾಲ ಸೇವೆ ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲೇ ನಂ.1

ನಿಗದಿತ ಅವಧಿಯೊಳಗೆ ಸಕಾಲ ಸೇವೆ ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲೇ ನಂ.1

ಸಾರ್ವಜನಿಕರಿಗೆ ಸರ್ಕಾರದ ವಿವಿಧ ಇಲಾಖೆಗಳಲ್ಲಿರುವ ಸೇವೆಗಳನ್ನು ಗೊತ್ತುಪಡಿಸಿದ ಕಾಲಮಿತಿಯಲ್ಲಿ ನೀಡುವ ಉದ್ದೇಶದಿಂದ ಜಾರಿಗೆ ಬಂದಿರುವ ಸಕಾಲ ಯೋಜನೆಯ ಟ್ಯಾಗ್ ಲೈನ್, ಇಂದು.. ನಾಳೆ..ಇನ್ನಿಲ್ಲ ಹೇಳಿದ ದಿನ ತಪ್ಪೋಲ್ಲ.. ಆದರೆ ಸಕಾಲ ಯೋಜನೆಯಡಿಯಲ್ಲಿ ಸಲ್ಲಿಕೆಯಾಗುವ ಅರ್ಜಿಗಳನ್ನು ನಿಗಧಿಪಡಿಸಿದ ಅವಧಿಗೂ ಮುಂಚೆಯೇ ತ್ವರಿತವಾಗಿ ಇತ್ಯರ್ಥಪಡಿಸಿ, ಸಾರ್ವಜನಿಕರಿಗೆ ಸೇವೆ ಒದಗಿಸುವಲ್ಲಿ ಉತ್ತರ ಕನ್ನಡ ಜಿಲ್ಲೆ ಇಡೀ ರಾಜ್ಯದಲ್ಲೇ ನಂ.1 ಸ್ಥಾನದಲ್ಲಿದೆ.


ಜಿಲ್ಲೆಯಲ್ಲಿ ಜನವರಿ 2024 ರ ಮಾಹೆಯಲ್ಲಿ ಸಕಾಲ ಯೋಜನೆಯಡಿಯಲ್ಲಿ ಸ್ವೀಕರಿಸಿದ ಒಟ್ಟು 58,318 ಅರ್ಜಿಗಳನ್ನು, ಸದ್ರಿ ಅರ್ಜಿಗಳ ವಿಲೇವಾರಿಗೆ ನಿಗಧಿಪಡಿಸಿದ್ದ ಕಾಲಮಿತಿಗೂ ಮುಂಚಿತವಾಗಿ ಅರ್ಜಿಗಳನ್ನು ಯಶಸ್ವಿಯಾಗಿ ಕ್ಷಿಪ್ರಗತಿಯಲ್ಲಿ ವಿಲೇವಾರಿ ಮಾಡಲಾಗಿದೆ.
ಜನವರಿಯಲ್ಲಿ ಜಿಲ್ಲೆಯ ಅಂಕೋಲಾ ತಾಲೂಕಿನಲ್ಲಿ 3879, ಭಟ್ಕಳ 3873, ದಾಂಡೇಲಿ 2426, ಹಳಿಯಾಳ 3472, ಹೊನ್ನಾವರ 8108, ಕಾರವಾರ 9152, ಕುಮುಟಾ 4626, ಮುಂಡಗೋಡು 4545, ಸಿದ್ದಾಪುರ 4114, ಶಿರಸಿ 8216, ಸುಪಾ 1347 ಹಾಗೂ ಯಲ್ಲಾಪುರದಲ್ಲಿ 4560 ಸಕಾಲ ಯೋಜನೆಯಡಿ ಸಲ್ಲಿಕೆಯಾಗಿದ್ದ ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ.


ಜಿಲ್ಲೆಯ ತಾಲೂಕುಗಳ ನಡುವಿನ ಸಕಾಲ ಅರ್ಜಿಗಳ ರ್ಯಾ ಕಿಂಗ್ನಲ್ಲಿ ಮುಂಡಗೋಡು ಪ್ರಥಮ, ಸಿದ್ದಾಪುರ ದ್ವಿತೀಯ, ಹೊನ್ನಾವರ ತೃತೀಯ ನಂತರದ ಸ್ಥಾನದಲ್ಲಿ ಕ್ರಮವಾಗಿ ಹಳಿಯಾಳ, ಯಲ್ಲಾಪುರ, ಕುಮಟಾ, ದಾಂಡೇಲಿ, ಅಂಕೋಲಾ, ಕಾರವಾರ, ಸೂಪ, ಶಿರಸಿ ಮತ್ತು ಭಟ್ಕಳ ತಾಲೂಕುಗಳಿದ್ದು, ಎಲ್ಲಾ ತಾಲೂಕುಗಳಲ್ಲಿ ತ್ವರಿತಗತಿಯಲ್ಲಿ ಅರ್ಜಿಗಳನ್ನು ವಿಲೇವಾರಿ ಮಾಡಲಾಗುತ್ತಿದೆ.
ಸಾರ್ವಜನಿಕರು ಜಿಲ್ಲೆಯ ವಿವಿಧ ಇಲಾಖೆಗಳಲ್ಲಿ ಲಭ್ಯವಿರುವ ತಮಗೆ ಅಗತ್ಯವಿರುವ ಸೇವೆಗಳನ್ನು ಪಡೆಯಲು ಸಲ್ಲಿಸುವ ಎಲ್ಲಾ ಅರ್ಜಿಗಳನ್ನು ಸಕಾಲ ಯೋಜನೆಯ ವ್ಯಾಪ್ತಿಯೊಳಗೆ ತೆಗೆದುಕೊಳ್ಳುತ್ತಿದ್ದು, ಸಾರ್ವಜನಿಕರು ನೇರವಾಗಿ ಸಲ್ಲಿಸುವ ಅರ್ಜಿಗಳನ್ನೂ ಸಹ ಸಕಾಲ ವ್ಯಾಪ್ತಿಗೆ ಸೇರ್ಪಡೆಗೊಳಿಸಿ ಇತ್ಯರ್ಥಪಡಿಸಲಾಗುತ್ತಿದೆ. ಯಾವುದೇ ಅರ್ಜಿಗಳು ಸಕಾಲದಿಂದ ಹೊರಗುಳಿಯದಂತೆ ಕ್ರಮ ಕೈಗೊಳ್ಳಲಾಗಿದ್ದು, ಇದರಿಂದ ಸಾರ್ವಜನಿಕರಿಗೆ ಅವರು ಕೋರಿರುವ ಸೇವೆಗಳು ನಿರ್ದಿಷ್ಟ ಅವಧಿಗಿಂತ ಮುಂಚಿತವಾಗಿಯೇ ಅವರಿಗೆ ಲಭ್ಯವಾಗುತ್ತಿವೆ.


ರಾಜ್ಯದಲ್ಲಿ ಸಕಾಲ ಯೋಜನೆಯಲ್ಲಿ ಸರ್ಕಾರದ 100 ವಿವಿಧ ಇಲಾಖೆ ಮತ್ತು ಸಂಸ್ಥೆಗಳ ವ್ಯಾಪ್ತಿಯಲ್ಲಿರುವ 1181 ಸೇವೆಗಳನ್ನು ಸಾರ್ವಜನಿಕರಿಗೆ ಒದಗಿಸಲಾಗುತ್ತಿದೆ.
ಜಿಲ್ಲೆಯ ವಿವಿಧ ಇಲಾಖೆಗಳಲ್ಲಿ ಸಕಾಲ ಯೋಜನೆಯಲ್ಲಿ ಸಲ್ಲಿಕೆಯಾಗುವ ಅರ್ಜಿಗಳನ್ನು ಪ್ರತಿ ದಿನ ಜಿಲ್ಲಾಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದು, ತಕ್ಷಣ ವಿಲೇವಾರಿ ಮಾಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡುತ್ತಿದ್ದು, ಪ್ರತೀ ವಾರ ಇಲಾಖೆಗಳಲ್ಲಿ ಬಾಕಿ ಇರುವ ಹಾಗೂ ವಿಲೇವಾರಿಯಾಗಿರುವ ಅರ್ಜಿಗಳ ಕುರಿತಂತೆ ಸಭೆಗಳನ್ನು ನಡೆಸುವ ಮೂಲಕ ಕಾಲಮಿತಿಯೊಳಗೆ ಎಲ್ಲಾ ಅರ್ಜಿಗಳನ್ನು ವಿಲೇವಾರಿಯಾಗಿ. ಸಾರ್ವಜನಿಕರಿಗೆ ಸರ್ಕಾರದ ಸೇವೆಗಳು ಶೀಘ್ರದಲ್ಲಿ ದೊರೆಯುವಂತೆ ಮೇಲ್ವಿಚಾರಣೆ ನಡೆಸುತ್ತಿದ್ದಾರೆ.
ಸಕಾಲ ಯೋಜನೆಯಡಿ ಸಲ್ಲಿಕೆಯಾಗುವ ಅರ್ಜಿಗಳನ್ನು ಕಾಲಮಿತಿಗಿಂತ ಮುಂಚಿತವಾಗಿಯೇ ವಿಲೇವಾರಿ ಮಾಡುವಲ್ಲಿ ನಮ್ಮ ಜಿಲ್ಲೆಯು ರಾಜ್ಯದಲ್ಲೇ ಪ್ರಥಮ ಸ್ಥಾನದಲ್ಲಿದೆ. ಎಲ್ಲಾ ಇಲಾಖೆಗಳ ಅಧಿಕಾರಿಗಳು ಹೆಚ್ಚಿನ ಮುತುವರ್ಜಿ ವಹಿಸಿ ಅರ್ಜಿಗಳನ್ನು ವಿಲೇವಾರಿ ಮಾಡುವ ಮೂಲಕ ಸಾರ್ವಜನಿಕರಿಗೆ ತ್ವರಿತವಾಗಿ ತಮ್ಮ ಇಲಾಖೆಯ ಸೇವೆಗಳನ್ನು ಒದಗಿಸುತ್ತಿದ್ದಾರೆ. ಜಿಲ್ಲೆಯ ಎಲ್ಲಾ ಇಲಾಖೆಗಳಲ್ಲಿ ಸ್ವೀಕೃತವಾಗುವ ಸಾರ್ವಜನಿಕರ ಅರ್ಜಿಗಳನ್ನು ಸಕಾಲ ವ್ಯಾಪ್ತಿಗೆ ಸೇರ್ಪಡೆ ಮಾಡಿಕೊಂಡು ಅಗತ್ಯ ಸೇವೆಗಳನ್ನು ಒದಗಿಸುವಂತೆ ನಿರ್ದೇಶನಗಳನ್ನು ನೀಡಲಾಗಿದೆ. ಅರ್ಜಿಗಳ ವಿಲೇವಾರಿ ಕುರಿತಂತೆ ಪ್ರತಿ ದಿನ ಪರಿಶೀಲನೆ ಹಾಗೂ ಪ್ರತೀ ವಾರ ಅಧಿಕಾರಿಗಳ ಸಭೆ ನಡೆಸಲಾಗುತ್ತಿದೆ. ಸಕಾಲ ಯೋಜನೆಯ ಒಟ್ಟು ರ್ಯಾ ಕಿಂಗ್ನಲ್ಲಿ ಜಿಲ್ಲೆಯು ರಾಜ್ಯದಲ್ಲಿ ಮೊದಲನೇ ಸ್ಥಾನ ಪಡೆಯುವ ನಿಟ್ಟಿನಲ್ಲಿ ಇನ್ನಷ್ಟು ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವಂತೆ ಎಲ್ಲಾ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಗಂಗೂಬಾಯಿ ಮಾನಕರ, ಜಿಲ್ಲಾಧಿಕಾರಿ, ಉತ್ತರಕನ್ನಡಜಿಲ್ಲೆ.