Home HONNAVAR ಸಾಕ್ಷಿ ಮನೆಯಂಗಳ ಕಾರ್ಯಕ್ರಮದಲ್ಲಿ ಪಿ.ಆರ್. ನಾಯ್ಕರ ಮಕ್ಕಳ ಕವನ ಸಂಕಲನ ‘ಪಾಟಿ ಚೀಲ’ ಕೃತಿ ಬಿಡುಗಡೆ

ಸಾಕ್ಷಿ ಮನೆಯಂಗಳ ಕಾರ್ಯಕ್ರಮದಲ್ಲಿ ಪಿ.ಆರ್. ನಾಯ್ಕರ ಮಕ್ಕಳ ಕವನ ಸಂಕಲನ ‘ಪಾಟಿ ಚೀಲ’ ಕೃತಿ ಬಿಡುಗಡೆ

ಮಕ್ಕಳ ಅಂತರಂಗದಲ್ಲಿ ಪ್ರೀತಿಯ ಬೀಜ ಬಿತ್ತುತ್ತ ಅಕ್ಷರ ಮೊಳೆಯುವಂತೆ ಮಾಡುವ ಶಿಕ್ಷಕರ ಕಾರ್ಯ ಶ್ಲಾಘನೀಯ. ಸಾಕ್ಷಿ ಶಿಕ್ಷಕರ ಬಳಗ ಮನೆಯಂಗಳದಲ್ಲಿ ಪುಸ್ತಕ ಬಿಡುಗಡೆ ಮಾಡುವುದರ ಮೂಲಕ ಶಿಕ್ಷಕರಲ್ಲಿ ಹೊಸ ಚೈತನ್ಯ ಮೂಡಿಸಿದೆ ಎಂದು ಡಾ. ಶ್ರೀಪಾದ ಶೆಟ್ಟಿ ಹೇಳಿದರು.

ಇತ್ತೀಚೆಗೆ ಹಳದೀಪುರ ಚಂಡೇಶ್ವರದ ಶಿಕ್ಷಕ ಶಶಿಧರ ದೇವಾಡಿಗರವರ ಮನೆಯಂಗಳದಲ್ಲಿ ನಡೆದ ಸಾಕ್ಷಿ ಬಳಗದ ಮನೆಯಂಗಳದಲ್ಲಿ ಸಾಕ್ಷಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 23ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ವಿಗೆ ಪ್ರಾಥಮಿಕ ಶಾಲಾ ಶಿಕ್ಷಕರ ಪಾಲು ಬಹು ದೊಡ್ಡದಿದೆ. ಪ್ರಾಥಮಿಕ ಶಾಲಾ ಶಿಕ್ಷಕರು ಮಾಡುವ ಪ್ರತಿಯೊಂದು ಕಾರ್ಯಕ್ರಮ ಯಶಸ್ಸಿನ ಒಂದು ಭಾಗವಾಗಿದೆ ಎಂದರು. ಶಿಕ್ಷಕ ಪಿ.ಆರ್. ನಾಯ್ಕರ ಮಕ್ಕಳ ಕವನ ಸಂಕಲನ ಪಾಟಿ ಚೀಲ ಮಕ್ಕಳ ಮನಸ್ಸಿನಲ್ಲಿ ಶಾಶ್ವತವಾಗಿ ನೆಲೆ ನಿಲ್ಲುವ ಕೃತಿಯಾಗಿದೆ ಎಂದರು.

ಹಳದಿಪುರ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ 6ನೇ ತರಗತಿ ವಿದ್ಯಾರ್ಥಿ ಕುಮಾರಿ ಪ್ರತಿಕ್ಷಾ ರವಿ ಮುಕ್ರಿ ಪಾಟಿ ಚೀಲ ಕೃತಿ ಬಿಡುಗಡೆ ಮಾಡಿ ನನ್ನ ಬದುಕಿನ ಅಮೂಲ್ಯ ಕ್ಷಣ ಇದಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿಯು ಪಾಟಿ ಚೀಲ ಓದುವುದರ ಮೂಲಕ ಸಾಹಿತ್ಯದ ಒಲವು ಮೂಡಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕ್ಷೇತ್ರ ಸಮನ್ವಯಾಧಿಕಾರಿ ಎಸ್.ಎಂ. ಹೆಗಡೆ ಮಾತನಾಡಿ, ತಾಲೂಕಿನಲ್ಲಿ ಹಲವು ಪ್ರತಿಭಾನ್ವಿತ ಶಿಕ್ಷಕರು ಇರುವುದರಿಂದಲೇ ನಮ್ಮ ತಾಲೂಕು ಜಿಲ್ಲೆಯಲ್ಲಿಯೇ ಶೈಕ್ಷಣಿಕವಾಗಿ ಮುಂದುವರಿದಿದೆ. ಶಿಕ್ಷಕರಿಗೆ ಉತ್ತೇಜಿಸುವ ಚಟುವಟಿಕೆ ಮನೆಯಂಗಳದಲ್ಲಿ ಸಾಕ್ಷಿ ಕಾರ್ಯಕ್ರಮದ ಮೂಲಕ ಅನಾವರಣಗೊಳ್ಳುತ್ತಿರುವುದು ಮಾದರಿಯಾದ ಕಾರ್ಯಕ್ರಮ ಎಂದರು. ಸಾಕ್ಷಿ ಶಿಕ್ಷಕರ ಬಳಗವು ಶೈಕ್ಷಣಿಕ ವಿಚಾರಗಳಿಗೆ ಸದಾ ತೆರೆದುಕೊಂಡು ಮಕ್ಕಳ ಕಲಿಕೆಗೆ ಪೂರಕವಾದ ಚಟುವಟಿಕೆ ರೂಪಿಸುವ ಕಾರ್ಯ ನಿಜಕ್ಕೂ ಶ್ಲಾಘನೀಯ. ಪಾಟಿ ಚೀಲ ಕವನವನ್ನು ಸುಂದರವಾಗಿ ಹಾಡಿ ಕೃತಿಕಾರ ಪಿ.ಆರ್. ನಾಯ್ಕರಿಗೆ ಇಲಾಖೆ ಪರವಾಗಿ ಅಭಿನಂದಿಸಿದರು.

ಜಿಲ್ಲಾ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ರೋಹಿದಾಸ ನಾಯಕ ಮಾತನಾಡಿ, ಸಾಕ್ಷಿ ಶಿಕ್ಷಕರ ಬಳಗವು ತನ್ನ ಬಳಗದಲ್ಲಿರುವ ಶಿಕ್ಷಕ ಪಿ.ಆರ್. ನಾಯ್ಕರ ಮಕ್ಕಳ ಕವನ ಸಂಕಲನ ಬಿಡುಗಡೆಗೊಳಿಸಿ, ಇಡೀ ಶಿಕ್ಷಕ ಸಮುದಾಯಕ್ಕೆ ಮಾದರಿಯಾದ ಕಾರ್ಯಕ್ರಮ ಇದಾಗಿದೆ ಎಂದರು. ಪ್ರಾಥಮಿಕ ಶಾಲಾ ಶಿಕ್ಷಕರು ಹಲವು ಒತ್ತಡಗಳ ಮಧ್ಯೆಯು ಯಾವುದೇ ಕಾರ್ಯಕ್ರಮ ಸಂಘಟಿಸಿದರು ಅದು ಯಶಸ್ಸು ಗಳಿಸಲು ಸಾಧ್ಯ ಎಂದರು. ಸಾಕ್ಷಿ ಕಾರ್ಯಕ್ರಮ ಇಡೀ ಜಿಲ್ಲೆಗೆ ಮಾದರಿಯಾಗಿ ಶಿಕ್ಷಕರ ನಡುವೆ ಶಾಶ್ವತವಾಗಿ ಇಂತಹ ರಚನಾತ್ಮಕ ಕಾರ್ಯಕ್ರಮಗಳು ನಡೆಯಲಿ ಎಂದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಜಿ. ನಾಯ್ಕ ಮಾತನಾಡಿ, ಸಾಕ್ಷಿ ಶಿಕ್ಷಕರ ಬದುಕಿನ ಅಂತರಂಗದ ಕನ್ನಡಿ ಇದ್ದಂತೆ. ಅದು ಬೆಳಗಿದರೆ ಜಗತ್ತು ಬೆಳಗಿದಂತೆ ಎಂದು ಮಾರ್ಮಿಕವಾಗಿ ಮಾತನಾಡಿ ಪಾಟಿ ಚೀಲ ವಿದ್ಯಾರ್ಥಿ ಜೀವನದ ಬದುಕಿನ ಭಾಗವಾಗಿದೆ ಎಂದರು.

ಸಾಹಿತಿ, ಪುಟ್ಟು ಕುಲಕರ್ಣಿ ಕುಮಟಾ ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಅಧ್ಯಕ್ಷ ರವೀಂದ್ರ ಭಟ್ ಸೂರಿ, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಗೌರವಾಧ್ಯಕ್ಷ ಸುದೀಶ ನಾಯ್ಕ, ತಾಲೂಕಾ ಸಾಹಿತ್ಯ ಪರಿಷತ್ತು ಘಟಕದ ಅಧ್ಯಕ್ಷ ಎಸ್. ಹೆಚ್ ಗೌಡ, ಹಳದಿಪುರ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಅಜಿತ್ ನಾಯ್ಕ ಸಂದರ್ಭೋಜಿತವಾಗಿ ಮಾತನಾಡಿದರು.

ಕವಿಯಿತ್ರಿ ಮಾದೇವಿ ಗೌಡ ಕೃತಿ ಪರಿಚಯಿಸಿದರು. ಶಿಕ್ಷಕ ಸಂಘದ ಉಪಾಧ್ಯಕ್ಷೆ ಲಕ್ಷ್ಮಿ ಎಚ್. ಪಾಟಿ ಚೀಲ ಕವನ ಸಂಕಲನದ ಕವಿತೆಯನ್ನು ರಾಗ ಸಂಯೋಜಿಸಿ ಹಾಡಿದರು. ಪ್ರಾರಂಭದಲ್ಲಿ ಶಿಕ್ಷಕ ಶಶಿಧರ ದೇವಾಡಿಗ ಸ್ವಾಗತಿಸಿದರೆ, ನಿವೃತ್ತ ಶಿಕ್ಷಕ ರಾಮ ಗೌಡ ವಂದಿಸಿದರು. ಶಿಕ್ಷಕಿ ಶಶಿಕಲಾ ನಾಯ್ಕ ಮತ್ತು ಉಷಾ ಶೆಟ್ಟಿ ನಿರೂಪಿಸಿದರು.
ಸಭೆಯಲ್ಲಿ ಕೃತಿಕಾರ ಪಿ.ಆರ್.ನಾಯ್ಕ, ಸಾಕ್ಷಿ ಬಳಗದ ಸಂಚಾಲಕ ಜನಾರ್ಧನ ಹರ್ನಿರು, ಪ್ರೊ ಪ್ರಮೋದ್ ನಾಯ್ಕ,ಪ್ರೌಢಶಾಲಾ ಮುಖ್ಯಾಧ್ಯಾಪಕಿ ಮಮತಾ ನಾಯ್ಕ,ಕ್ಷೇತ್ರ ಸಂಪನ್ಮೂಲ ವ್ಯಕ್ತಿ ವಿ.ಜಿ.ನಾಯ್ಕ, ಶಿಕ್ಷಕ ಸಂಘದ ಉಪಾಧ್ಯಕ್ಷ ಸುರೇಶ ನಾಯ್ಕ, ಪ್ರತಿಮಾ ಹೆಗಡೆ, ಸುಬ್ರಾಯ ಶಾನಭಾಗ, ಕವಿ ನಾಗಪ್ಪ ಗೌಡ, ಸಿ ಆರ್ ಪಿ ನಾಸಿರ್ ಖಾನ್, ಲುವೇಜಿನ್ ಪಿಂಟೊ, ಎಂ.ಜಿ.ಮೋಗೇರ, ನಾಗರತ್ನ ದೇವಾಡಿಗ, ಶ್ರೀಮತಿ ನಾಯ್ಕ, ಶೇಖರ ನಾಯ್ಕ ಗಣೇಶ ಹಳದೀಪುರ, ಎಂ.ಆರ್. ಭಟ್ಟ,ಪದ್ಮಾವತಿ ನಾಯ್ಕ,ರತ್ನಾಕರ ದೇಶ ಭಂಡಾರಿ, ಸುಭಾಷ ನಾಯ್ಕ,ಬಿ. ಎನ್.ಹೆಗಡೆ, ನಾಗರಾಜ ಪಟಗಾರ, ಸತೀಶ ನಾಯ್ಕ, ಅರುಣಾ ನಾಯ್ಕ,ನಸೀಮಾ ಬಾನು, ಗೀತಾ ಹೊಸೂರ, ಅಮಿತಾ ನಾಯ್ಕ, ಸಂಗೀತ ದೇಶಭಂಡಾರಿ, ಕೃಷ್ಣ ಅಂಬಿಗ, ಪದ್ಮಾವತಿ ನಾಯ್ಕ ,ದಿನಕರ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.