Home State News ಅಖಿಲ ಹವ್ಯಕ ಮಹಾಸಭೆಯ 81 ನೆಯ ವರ್ಷದ ಸಂಸ್ಥಾಪನೋತ್ಸವ ಹಾಗೂ ವಿಶೇಷ ಪ್ರಶಸ್ತಿ ಪ್ರದಾನ ಸಮಾರಂಭ

ಅಖಿಲ ಹವ್ಯಕ ಮಹಾಸಭೆಯ 81 ನೆಯ ವರ್ಷದ ಸಂಸ್ಥಾಪನೋತ್ಸವ ಹಾಗೂ ವಿಶೇಷ ಪ್ರಶಸ್ತಿ ಪ್ರದಾನ ಸಮಾರಂಭ

ನಮ್ಮಲ್ಲಿರುವ ಜ್ಞಾನವನ್ನು ಹಂಚುವುದರ ಮೂಲಕ ಸಮಾಜಕ್ಕೆ ನಾವು ಉಪಕಾರಿಯಾಗಬೇಕು. ನಮ್ಮ ಸಾಧನೆಯ ಜೊತೆಜೊತೆಗೆ ನಮ್ಮ ಕ್ಷೇತ್ರಕ್ಕೆ ಸಂಬಂಧಿಸಿದ ಜ್ಞಾನವನ್ನು ನಾವು ಹಂಚಬೇಕು ಹಾಗೂ ನಮ್ಮ ಅನುಭವಗಳನ್ನು ನಾವು ದಾಖಲಿಸಬೇಕು ಎಂದು ಡಾ| ಪಾದೇಕಲ್ಲು ವಿಷ್ಣುಭಟ್ ಹೇಳಿದರು.

ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಹವ್ಯಕ ಭವನದಲ್ಲಿ ನಡೆದ 81 ನೇ ವರ್ಷದ ಶ್ರೀ ಅಖಿಲ ಹವ್ಯಕ ಮಹಾಸಭೆಯ ಸಂಸ್ಥಾಪನೋತ್ಸವ ಹಾಗೂ ಹವ್ಯಕ ವಿಶೇಷ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅಭ್ಯಾಗತರಾಗಿ ಮಾತನಾಡಿದ ಹಿರಿಯ ವಿದ್ವಾಂಸ ಹಾಗೂ ಭಾಷಾಶಾಸ್ತ್ರಜ್ಞರಾದ ಡಾ| ಪಾದೇಕಲ್ಲು ವಿಷ್ಣುಭಟ್ , ಹವ್ಯಕ ಮಹಾಸಭೆ ಸಾಧಕರನ್ನು ಸನ್ಮಾನಿಸುತ್ತಿರುವುದು ಈ ಸಾಧಕ ನಮ್ಮವ ಎಂದು ಸಮಾಜಕ್ಕೆ ಪರಿಚಯಿಸುವ ಕಾರ್ಯ. ಪ್ರತಿಭೆಯನ್ನು ಗೌರವಿಸುವುದು ಇನ್ನಷ್ಟು ಸಾಧನೆಗಳಿಗೆ ಪ್ರೇರಣೆಯಾಗಲಿದೆ. ಹವ್ಯಕ ಮಹಾಸಭೆ ಉತ್ತಮ ಕಾರ್ಯಗಳನ್ನು ಮಾಡುತ್ತಿದ್ದು, ನಾವೆಲ್ಲ ಮಹಾಸಭೆಯ ಜೊತೆಯಾಗೋಣ ಎಂದರು.

ಸಿ.ಐ.ಡಿ ಪೋಲೀಸ್ ಅಧೀಕ್ಷಕ ರಾಘವೇಂದ್ರ ಹೆಗಡೆ ಮುಖ್ಯ ಅಭ್ಯಾಗತರಾಗಿ ಮಾತನಾಡಿ, ಪ್ರಶಸ್ತಿ ಪುರಸ್ಕಾರದಿಂದ ಸಾಧನೆಗೆ ಗೌರವ ಸಲ್ಲಿಸಲ್ಪಟ್ಟರೆ, ಇನ್ನುಳಿದವರಿಗೆ ಅವರ ಸಾಧನೆಯೇ ಪ್ರೇರಣೆಯಾಗಲು ಸಾಧ್ಯ. ಹವ್ಯಕ ಮಹಾಸಭೆ ಉತ್ತಮ ಕಾರ್ಯಗಳನ್ನು ಮಾಡುತ್ತಿದ್ದು. ಸಮಾಜದ ಉನ್ನತಿ ಇನ್ನಷ್ಟು ಸಾಧ್ಯವಾಗಲಿ ಎಂದರು.

ಹವ್ಯಕ ಮಹಾಸಭೆಯ ಅಧ್ಯಕ್ಷರಾದ ಡಾ. ಗಿರಿಧರ ಕಜೆ ಮಾತನಾಡಿ, ಹವ್ಯಕ ಸಮಾಜ ಯಾವುದೋ ಘರ್ಷಣೆ ಇತ್ಯಾದಿಗಳ ಕಾರಣದಿಂದ ಹುಟ್ಟುಕೊಂಡಿದ್ದಲ್ಲ. ಲೋಕಕಲ್ಯಾಣದ ಕಾರಣಕ್ಕಾಗಿಯೇ ಹುಟ್ಟಿಕೊಂಡವರು ಹವ್ಯಕರು. ಸ್ವಾತಂತ್ರ್ಯ ಪೂರ್ವದಲ್ಲೇ ಸಂಘಟಿತರಾಗಿ ಈ ಮಹಾಸಭೆಯನ್ನು ಹವ್ಯಕರು ಸಂಘಟಿಸದರು ಎಂದರೆ ನಮ್ಮ ಸಮಾಜದ ಮುಂದಾಲೋಚನೆಯನ್ನು ಗುರುತಿಸಲು ಸಾಧ್ಯ. ಹವ್ಯಕ ಮಹಾಸಭೆಯು 81 ನೇ ಸಂಸ್ಥಾಪನೋತ್ಸವವನ್ನು ಆಚರಿಸಿಕೊಳ್ಳುತ್ತಿದೆ. ಇಷ್ಟು ವರ್ಷಗಳಲ್ಲಿ ಮಹಾಸಭೆ ಎಷ್ಟು ಆಸ್ತಿಯನ್ನುಗಳಿಸಿದೆ ಎಂದು ಆಲೋಚಿಸುವುದಕ್ಕಿಂತ, ಪ್ರತಿಭಾವಂತ ಹವ್ಯಕ ಸಮಾಜವೇ ಮಹಾಸಭೆಯ ಆಸ್ತಿ ಎಂದು ಅಭಿಪ್ರಾಯ ಪಟ್ಟರು.

2018 ರಲ್ಲಿ ಎರಡನೇ ವಿಶ್ವಹವ್ಯಕ ಸಮ್ಮೇಳನವನ್ನು ಆಯೋಜಿಸಲಾಗಿತ್ತು. ಅದಕ್ಕೆ ನಾಡಿನಾದ್ಯಂತ ಅಭೂತಪೂರ್ವ ಪ್ರತಿಸ್ಪಂದನೆ ವ್ಯಕ್ತವಾಗಿತ್ತು. ಇದೀಗ ಈ ವರ್ಷ ಡಿಸೆಂಬರ್ 27,28,29 ರಂದು 3ನೆಯ ವಿಶ್ವಹವ್ಯಕ ಸಮ್ಮೇಳನವನ್ನು ಆಯೋಜಿಸಲು ತೀರ್ಮಾನಿಸಲಾಗಿದೆ. ಇದಕ್ಕೆ ಪೂರ್ವಭಾವಿಯಾಗಿ ಹತ್ತಾರು ಸಮಾವೇಶಗಳು ನಡೆಯಲಿದ್ದು, ಇದು ಎಲ್ಲಾ ಸಮಾಜದವರಿಗೂ ಮುಕ್ತವಾಗಿರಲಿದೆ. ಇದು ಜಾತಿಯ ಸಮಾವೇಶವಾಗದೇ, ಹವ್ಯಕ ಸಮಾಜವನ್ನು ಸಮಷ್ಟಿ ಸಮಾಜಕ್ಕೆ ಪರಿಚಯಿಸುವ ಕಾರ್ಯ ಇಲ್ಲಿ ನಡೆಯಲಿದೆ ಎಂದರು.

ಹವ್ಯಕ ವಿಭೂಷಣ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ, ಹೆಚ್.ಎಂ ತಿಮ್ಮಪ್ಪ ಕಲಸಿ,
ನಮ್ಮವರು ನಮಗೆ ಕೊಡುವ ಪ್ರಶಸ್ತಿ ಅವಿಸ್ಮರಣೀಯವಾದುದು. ನೈಜವಾಗಿ ನೋಡಿದರೆ ನಾವು ಅಲ್ಪಸಂಖ್ಯಾತರಾಗಿದ್ದೇವೆ. ಆದರೆ ನಮಗೆ ಯಾವುದೇ ಸರ್ಕಾರಿ ಸೌಲಭ್ಯಗಳು ಸಿಗುತ್ತಿಲ್ಲ. ಆದರೆ ನಮ್ಮಲ್ಲಿರುವ ಪ್ರತಿಭೆಯಿಂದ ನಾವು ಎಲ್ಲಾ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿದ್ದೇವೆ ಎಂದರು.

ಹವ್ಯಕರನ್ನು ಮಯೂರ ವರ್ಮ ಉತ್ತರದ ಅಹಿಚ್ಛತ್ರದಿಂದ ಕರೆದುಕೊಂಡು ಬಂದ ಎಂಬುದು ನಿಜವಾದರೂ, ಹವ್ಯಕರು ಮೂಲತಃ ಈ ನಾಡಿನವರು. ಕಾರಣಾಂತರಗಳಿಂದ ಇಲ್ಲಿಂದ ಉತ್ತರ ಭಾರತಕ್ಕೆ ವಲಸೆ ಹೋಗಿದ್ದರು. ಮಯೂರವರ್ಮ ಮತ್ತೆ ನಮ್ಮ ಈ ಮಣ್ಣಿಗೆ ಕರೆತಂದ ಎಂದು ಹವ್ಯಕರ ಇತಿಹಾಸದ ಕುರಿತಾಗಿ ಹೇಳಿದರು.

ಗಣೇಶ್ ಎಲ್ ಭಟ್ ಅವರು ಹವ್ಯಕ ಭೂಷಣ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ,
ಅಯೋಧ್ಯೆಯ ರಾಮಲಲಾ ಮೂರ್ತಿಯನ್ನು ಕೆತ್ತುವಾಗಿನ ಕುರಿತಾದ ಅನುಭವವನ್ನು ಹಂಚಿಕೊಂಡ ಇವರು, ಹವ್ಯಕರು ಮೂರ್ತಿ ಪೂಜಕರು. ನಾವು ಶಿಲ್ಪಶಾಸ್ತ್ರದ ಕುರಿತಾಗಿಯೂ ಬಲ್ಲವರಾದರೆ ಇನ್ನೂ ಹೆಚ್ಚಿನ ಅಧ್ಯಾತ್ಮ ಸಾಧನೆ ಸಾಧ್ಯ ಎಂದರು.

ಪರಿಸರ ತಜ್ಞ ಶಿವಾನಂದ ಕಳವೆ ಹವ್ಯಕ ಭೂಷಣ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ,
ಹವ್ಯಕ ಸಮಾಜ ಪರಿಸರ ತಜ್ಞ ಸಮಾಜವಾಗಿದೆ. ಪರಿಸರದ ಸೂಕ್ಷ್ಮಗಳನ್ನು ಗಮನಿಸಿ; ಅಭ್ಯಸಿಸಿ ಅಲ್ಲಿ ಕೃಷಿಯನ್ನು ಕಟ್ಟಿಬೆಳಸಿದ ಹೆಮ್ಮೆ ಹವ್ಯಕ ಸಮಾಜದ್ದು. ನಮ್ಮ ಹಿರಿಯರು ಕಾಡಿನ ಹಾಗೂ ಕಾಡಿನ ಉತ್ಪನ್ನಗಳ ಕುರಿತಾದ ಆಂತರಿಕ ಜ್ಞಾನ ಹೊಂದಿದ ಕೃಷಿ ವಿಜ್ಞಾನಿಗಳು ಎಂದು ಅಭಿಪ್ರಾಯಪಟ್ಟರು.

ಇದಕ್ಕೂ ಮೊದಲು, ಹವ್ಯಕ ವಿಭೂಷಣ, ಹವ್ಯಕ ಭೂಷಣ, ಹವ್ಯಕ ಶ್ರೀ ಹಾಗೂ ಹವ್ಯಕ ಸೇವಾಶ್ರೀ ಪ್ರಶಸ್ತಿಯನ್ನು ಆಯ್ಕೆಯಾದ ಸಾಧಕರಿಗೆ ನೀಡಿ ಮಹಾಸಭೆಯ ಗೌರವ ಸಲ್ಲಿಸಲಾಯಿತು. ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ 13 ಜನರಿಗೆ ಪಲ್ಲವಪುರಸ್ಕಾರ ನೀಡಿ ಗೌರವಿಸಲಾಯಿತು.

ಪ್ರಧಾನ ಕಾರ್ಯದರ್ಶಿ ಸಿಎ. ವೇಣುವಿಘ್ನೇಶ ಸಂಪ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಉಪಾಧ್ಯಕ್ಷರಾದ ಆರ್ ಎಂ ಹೆಗಡೆ ಬಾಳೇಸರ, ಶ್ರೀಧರ ಜೆ ಭಟ್ಟ ಕೆಕ್ಕಾರು, ಕೋಸಾಧಿಕಾರಿ ಕೃಷ್ಣಮೂರ್ತಿ ಭಟ್ ಯಲಹಂಕ, ಕಾರ್ಯದರ್ಶಿಗಳಾದ ಪ್ರಶಾಂತ ಕುಮಾರ ಜಿ ಭಟ್ಟ ಮಲವಳ್ಳಿ, ಆದಿತ್ಯ ಹೆಗಡೆ ಕಲಗಾರು, ಕಾರ್ಯಕ್ರಮದ ಸಂಚಾಲಕರಾದ ರವಿನಾರಾಯಣ ಪಟ್ಟಾಜೆ, ಮುಗಲೋಡಿ ಕೃಷ್ಣಮೂರ್ತಿ ಉಪಸ್ಥಿತರಿದ್ದರು.

ಸಭಾ ಕಾರ್ಯಕ್ರಮದ ನಂತರ ಕುಮಾರಿ ತುಳಸಿ ಹೆಗಡೆ ಅವರಿಂದ ನಡೆದ ಯಕ್ಷನೃತ್ಯ ರೂಪ ಸಭಾಸದರ ಮೆಚ್ಚುಗೆಗೆ ಪಾತ್ರವಾಯಿತು.

ಪ್ರಶಸ್ತಿ ಪುರಸ್ಕೃತರು:

ಹವ್ಯಕ ವಿಭೂಷಣ –
1 ಶ್ರೀ ಹೆಚ್. ಎಂ. ತಿಮ್ಮಪ್ಪ ಕಲಸಿ – ಸಾಹಿತ್ಯ

ಹವ್ಯಕ ಭೂಷಣ

  1. ಶ್ರೀ ಗಣೇಶ್ ಎಲ್ ಭಟ್ – ಶಿಲ್ಪಶಾಸ್ತ್ರ
  2. ಶ್ರೀ ಶಿವಾನಂದ ಕಳವೆ – ಪರಿಸರ
  3. ಯೋಗರತ್ನ ಶ್ರೀ ಗೋಪಾಲಕೃಷ್ಣ
    ದೇಲಂಪಾಡಿ – ಯೋಗ

ಹವ್ಯಕ ಶ್ರೀ

  1. ಶ್ರೀ ಗಿರಿಧರ್ ದಿವಾನ್ – ಛಾಯಾಗ್ರಹಣ, ಸಂಗೀತ ನಿರ್ದೇಶನ
  2. ಶ್ರೀ ಗಣೇಶ್ ದೇಸಾಯಿ – ಸಂಗೀತ
  3. ಶ್ರೀಮತಿ ಮಂಗಳ ಬಾಲಚಂದ್ರ – ಕಥಾಕೀರ್ತನಕಾರರು

ಹವ್ಯಕ ಸೇವಾಶ್ರೀ

  1. ಶ್ರೀ ಶ್ರೀಕಾಂತ ಹೆಗಡೆ ಅಂತ್ರವಳ್ಳಿ, ವಿಶ್ರಾಂತ ಸಂಪಾದಕರು ‘ಹವ್ಯಕ’ ಪತ್ರಿಕೆ