Home KUMTA ಗೋಕರ್ಣ ಮಹಾಬಲೇಶ್ವರ ದೇವಾಲಯಕ್ಕೆ 1.42 ಕೋಟಿ ಐ.ಟಿ ನೋಟೀಸ್ – ಮೇಲ್ಮನವಿ ಅಂಗೀಕಾರ – ಶ್ರೀಮಠದ...

ಗೋಕರ್ಣ ಮಹಾಬಲೇಶ್ವರ ದೇವಾಲಯಕ್ಕೆ 1.42 ಕೋಟಿ ಐ.ಟಿ ನೋಟೀಸ್ – ಮೇಲ್ಮನವಿ ಅಂಗೀಕಾರ – ಶ್ರೀಮಠದ ಆಡಳಿತ ಶುದ್ಧ ಎಂದು ಮತ್ತೊಮ್ಮೆ ದೃಢ.

ಶ್ರೀಸಂಸ್ಥಾನ ಶ್ರೀ ಮಹಾಬಲೇಶ್ವರ ದೇವಾಲಯಕ್ಕೆ ಸಂಬಂಧಿಸಿದಂತೆ ಮೌಲ್ಯಮಾಪನ ವರ್ಷ 2015-16 ನೆಯ ಸಾಲಿಗೆ ರೂ. 1.42 ಕೋಟಿ ತೆರಿಗೆ ಬಾಕಿ ಪಾವತಿಸುವಂತೆ ಆದಾಯ ತೆರಿಗೆ ಇಲಾಖೆಯು ಕೆಲವಾರು ತಿಂಗಳ ಹಿಂದೆ ಆದೇಶಿಸಿತ್ತು. ಈ ಆದೇಶದ ವಿರುದ್ಧವಾಗಿ ಮೇಲ್ಮನವಿ ಮಾಡಲಾಗಿ; ಇದೀಗ ಮೇಲ್ಮನವಿಯ ಆದೇಶ ಬಂದಿದ್ದು, ದೇವಾಲಯಕ್ಕೆ ಜಯ ಲಭಿಸಿದೆ ಹಾಗೂ ಆ ಮೂಲಕ ತೆರಿಗೆ ಬಾಕಿ ಶೂನ್ಯ ಎಂಬುದನ್ನು ಆದಾಯ ತೆರಿಗೆ ಇಲಾಖೆಯ Commissioner of Appeal ಅವರು ತಮ್ಮ ಆದೇಶದಲ್ಲಿ ದೃಢೀಕರಿಸಿದ್ದಾರೆ.

ಶ್ರೀರಾಮಚಂದ್ರಾಪುರಮಠವು ಮಾನ್ಯ ಕರ್ನಾಟಕ ಸರ್ಕಾರದ ಆದೇಶದನ್ವಯ 2008 ರಿಂದ ಶ್ರೀಮಹಾಬಲೇಶ್ವರ ದೇವಾಲಯದ ಆಡಳಿತವನ್ನು ವಹಿಸಿಕೊಂಡಿತ್ತು‌ ಹಾಗೂ ಸರ್ವೋಚ್ಚ ನ್ಯಾಯಾಲಯದ ಮದ್ಯಂತರ ತೀರ್ಪಿನ ಅನ್ವಯ 08.05.2021 ರಂದು ಮೇಲುಸ್ತುವಾರಿ ಸಮಿತಿಗೆ ಶ್ರೀಮಠದಿಂದ ಆಡಳಿತವು ಹಸ್ತಾಂತರಿಸಲ್ಪಟ್ಟಿದೆ.

2015-16 ನೇ ಸಾಲಿನಲ್ಲಿ ಶ್ರೀರಾಮಚಂದ್ರಾಪುರಮಠದ ಆಡಳಿತದಲ್ಲಿದ್ದ ಸಾರ್ವಭೌಮ ಮಹಾಬಲೇಶ್ವರ ದೇವಾಲಯದ ಬ್ಯಾಂಕ್ ಖಾತೆಯಲ್ಲಿ ನಗದು ಹಣ ಜಮಾವಣೆಯ ಕುರಿತಾಗಿ ಸ್ಪಷ್ಟೀಕರಣವನ್ನು ಕೋರಿ ಆದಾಯ ತೆರಿಗೆ ಇಲಾಖೆಯು ನೋಟೀಸ್ ನೀಡಿತ್ತು ಹಾಗೂ ಈ ಕುರಿತಾಗಿ ರೂ.1.42 ಕೋಟಿಯನ್ನು ತೆರಿಗೆ ಬಾಕಿಯಾಗಿ ಪರಿಗಣಿಸಿ ಜಮಾ ಮಾಡುವಂತೆ ಆದಾಯ ತೆರಿಗೆ ಇಲಾಖೆಯು ಆದೇಶಿಸಿತ್ತು. ಇದು ಭಕ್ತಾದಿಗಳಲ್ಲಿ ಗೊಂದಲಗಳನ್ನು ಉಂಟುಮಾಡಿತ್ತು ಹಾಗೂ ಚರ್ಚೆಯ ವಿಷಯವೂ ಆಗಿತ್ತು.

ಶ್ರೀರಾಮಚಂದ್ರಾಪುರಮಠವು ದೇವಾಲಯದ ಆಡಳಿತ ನಡೆಸುತ್ತಿದ್ದ ಸಮಯದಲ್ಲಿ ಆದಾಯ ತೆರಿಗೆ ಕಾಯಿದೆ ಕಲ್ಂ 10(23BBA) ಅನ್ವಯ ಆದಾಯ ತೆರಿಗೆ ಸಲ್ಲಿಸಲು ವಿನಾಯಿತಿಯನ್ನು ಹೊಂದಿತ್ತು ಹಾಗೂ ದೇವಾಲಯದಲ್ಲಿ ನಗದು ರೂಪದಲ್ಲಿ ಸಂಗ್ರಹವಾಗಿದ್ದ ಹುಂಡಿ ಕಾಣಿಕೆ , ಸೇವಾ ಕಾಣಿಕೆ ಮತ್ತು ದೇಣಿಗೆ ಹಣವನ್ನು ದೇವಾಲಯದ ಬ್ಯಾಂಕ್ ಖಾತೆಯಲ್ಲಿ ಜಮಾವಣೆ ಮಾಡಲಾಗಿತ್ತು. ಈ ಕುರಿತಾಗಿ ಆದಾಯ ತೆರಿಗೆ ಇಲಾಖೆಯು ಸ್ಪಷ್ಟೀಕರಣವನ್ನು ಕೋರಿದ್ದು ಸಹಜವಾ ಪ್ರಕ್ರಿಯೆಯಾಗಿದ್ದು, Question is not of mis appropriation. but it is a matter of taxability ಎಂದು ತೆರಿಗೆ ಇಲಾಖೆಯೇ ಹೇಳಿರುವಂತೆ, ಇಲಾಖೆಯು ನೀಡಿದ್ದ ನೋಟೀಸ್ ತೆರಿಗೆ ಸಾಧ್ಯತೆಯನ್ನು ನಿರ್ಧರಿಸುವ ಸಲುವಾಗಿತ್ತೇ ವಿನಃ ಇದು ಅಲ್ಲಿ ಯಾವುದೇ ಅವ್ಯವಹಾರ ನಡೆದಿತ್ತು ಎಂಬುದನ್ನು ಸೂಚಿಸುವುದಿಲ್ಲ. ಇದೀಗ ಆದಾಯ ತೆರಿಗೆ ಇಲಾಖೆಯ ನೋಟೀಸ್ ವಿರುದ್ಧ ದಾಖಲಿಸಲಾಗಿದ್ದ ಮೇಲ್ಮನವಿಯ ತೀರ್ಪು ಪ್ರಕಟವಾಗಿದ್ದು ; ಮಹಾಬಲೇಶ್ವರ ದೇವಾಲಯವು ಯಾವುದೇ ತೆರಿಗೆ ಬಾಕಿ ಹೊಂದಿರುವುದಿಲ್ಲ ಎಂದು ಆದಾಯ ತೆರಿಗೆ ಇಲಾಖೆಯೇ ದೃಢೀಕರಿಸಿ ಆದೇಶಿಸಿದೆ.

ಶ್ರೀರಾಮಚಂದ್ರಾಪುರಮಠವುಸುಮಾರು 13 ವರ್ಷಗಳ ಕಾಲ ಶ್ರೀಸಂಸ್ಥಾನ ಮಹಾಬಲೇಶ್ವರ ದೇವಾಲಯದ ಆಡಳಿತವನ್ನು ನಿರ್ವಹಿಸಿದ್ದು, ಪ್ರತಿ ವರ್ಷ ಲೆಕ್ಕಪರಿಶೋಧನೆಯನ್ನು ನಡೆಸಿ; ಸುವ್ಯವಸ್ಥಿತವಾಗಿ ಲೆಕ್ಕಪತ್ರಗಳನ್ನು ನಿರ್ವಹಿಸಿ – ಸುಭದ್ರವಾಗಿ ದಾಖಲೀಕರಣ ಮಾಡಿದೆ. ದೇವಾಲಯದಲ್ಲಿ ಶ್ರೀಮಠದ ಸುವ್ಯವಸ್ಥಿತ – ಸುಭದ್ರ ಹಾಗೂ ಪಾರದರ್ಶಕ ಆಡಳಿತಕ್ಕಾಗಿ ಅಂತಾರಾಷ್ಟ್ರೀಯವಾದ ISO ಪ್ರಮಾಣಪತ್ರವೂ ಲಭಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ಇದೀಗ ಮೇಲ್ಮನವಿ ಆದೇಶದನ್ವಯ ತೆರಿಗೆ ಬಾಕಿ ಶೂನ್ಯವಾಗಿರುವುದು ಭಕ್ತಾದಿಗಳ ಗೊಂದಲಗಳನ್ನು ನಿವಾರಿಸಿದ್ದು ಮಾತ್ರವಲ್ಲದೇ, ದೇಗುಲದ ಇಂದಿನ ಆಡಳಿತ ಮಂಡಳಿಯ ಸ್ಪಷ್ಟೀಕರಣವನ್ನು ಆದಾಯ ತೆರಿಗೆ ಇಲಾಖೆ ಮಾನ್ಯ ಮಾಡಿರುವುದು ಅಂದಿನ ಶ್ರೀರಾಮಚಂದ್ರಾಪುರಮಠದ ಮಾದರಿ ಆಡಳಿತ ವ್ಯವಸ್ಥೆಗೆ ಸಂದ ಜಯವಾಗಿದೆ.