Home Article ಅಕ್ಷರ‌ಕ್ರಾಂತಿಯ ಮೂಲಕ‌ ಗೋವಿನ ಬಾಳಲಿ ಸಂಕ್ರಾಂತಿ ಮೂಡಿಸೋಣ

ಅಕ್ಷರ‌ಕ್ರಾಂತಿಯ ಮೂಲಕ‌ ಗೋವಿನ ಬಾಳಲಿ ಸಂಕ್ರಾಂತಿ ಮೂಡಿಸೋಣ

ಸಾವಿರದ ಅಭಯಾಕ್ಷರ ನೀಡೋಣ ಬನ್ನಿ, ಅಕ್ಷರ‌ಕ್ರಾಂತಿಯ ಮೂಲಕ‌ ಗೋವಿನ ಬಾಳಲಿ ಸಂಕ್ರಾಂತಿ ಮೂಡಿಸೋಣ

IMG 20170701 WA0017

ಬರವಣಿಗೆ: ಶಿಶರ ಅಂಗಡಿ.

ಭಾರತೀಯ ಗೋ ಪರಿವಾರ.

 

#ProtectWithPen ಎಂಬುದೊಂದು ಶಾಂತ ಸಮರ. ಜಗಕೇ ಅಭಯ ನೀಡುವ ಗೋವುಗಳು ಸಂಕಷ್ಟದಲ್ಲಿರುವಾಗ ಅವುಗಳಿಗೆ ಅಭಯ ನೀಡುವ ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರಭಾರತಿ ಮಹಾಸ್ವಾಮಿಗಳವರ ದಿವ್ಯ ಪರಿಕಲ್ಪನೆಯೇ ಅಭಯಾಕ್ಷರ.

ಗೋರಕ್ಷಣೆಯ ಸಪ್ತಸೂತ್ರಗಳನ್ನು ಮನೆ ಮನೆಗಳಿಗೆ ತಲುಪಿಸುವ ಮೂಲಕ ನಾಡಿನ ಪ್ರತಿ ವ್ಯಕ್ತಿಯ ಗೋರಕ್ಷಣೆಯ ಹಕ್ಕೊತ್ತಾಯಕ್ಕೆ ಹಸ್ತಾಕ್ಷರ ಪಡೆಯುವುದು ಈ ಅಭಯಾಕ್ಷರ ಯೋಜನೆಯ ಸ್ವರೂಪ.

ಇದುವರೆಗೂ ಬೆಂಗಳೂರಲ್ಲಿ ಪಡೆದ #ಅಭಯಾಕ್ಷರಗಳ ಸಂಖ್ಯೆ ಎರಡು ಲಕ್ಷಕ್ಕೂ ಅಧಿಕ.. ದೊಡ್ಡ ಸಂಖ್ಯೆಯೇನೋ ಹೌದು… ಇನ್ನೂ ಮಾಡಬೇಕಾದ್ದು ಬಹಳ ಬಹಳ ಬಹಳಷ್ಟಿದೆ… ಲಕ್ಷಗಳಷ್ಟು ಸಹಿ ಆಗಿದೆಯಷ್ಟೇ,‌ಲಕ್ಷಗಟ್ಟಲೇ ಕಾರ್ಯಕರ್ತರೇ ಬೇಕು ಐದಾರು ಕೋಟಿ ಅಭಯಾಕ್ಷರ ಸಂಗ್ರಹಿಸಲು..

ಮೊದಲ ಹಂತದಲ್ಲಿ ನಾವೆಲ್ಲ ಒಬ್ಬೊಬ್ಬರು ಕನಿಷ್ಠ ಸಾವಿರದಷ್ಟಾದರೂ ಅಭಯಾಕ್ಷರ ಸಂಗ್ರಹಿಸೋಣವೇ? ಹೆಚ್ಚೇನೂ ಕಷ್ಟಪಡಬೇಕಾಗಿಲ್ಲ ನಿಮ್ಮ ಬೀದಿಯಲ್ಲಿರುವ ಮನೆಗಳಿಗೆ, ನಿಮ್ಮ ಶಾಲೆ,‌ಕಾಲೇಜು,ಕಛೇರಿಗಳ, ಕಂಪನಿಗಳ, ಸಂಘ ಸಂಸ್ಥೆಗಳು, ಮಹಿಳಾ-ಭಜನಾ ಮಂಡಲಗಳ ಸಹಕಾರ‌ ಪಡೆದು ಅವರಿಗೆ ಗೋರಕ್ಷಣೆಯ ಅಗತ್ಯವನ್ನು ವಿವರಿಸಿ, ಅಭಯಾಕ್ಷರ ಅಭಿಯಾನದ ಸ್ವರೂಪವನ್ನು ಮನದಟ್ಟು ಮಾಡಿಸಿ ಅಲ್ಲಿರುವವರಿಂದ ಹಸ್ತಾಕ್ಷರ ಪಡೆಯುವುದು ಮತ್ತು ಅವರನ್ನು ನಮ್ಮ ಜೊತೆ ಕಾರ್ಯಕರ್ತರಾಗಿ ಬರಲು ಪ್ರೇರೇಪಿಸುವುದು. ನಮ್ಮೊಡನೆ ಬರಲು ಅವಕಾಶ ಇಲ್ಲದವರಿಗೆ ಅಭಯಾಕ್ಷರ ಹಕ್ಕೊತ್ತಾಯ ಪತ್ರಗಳನ್ನು ಕೊಟ್ಟು, ಹಸ್ತಾಕ್ಷರ ಸಂಗ್ರಹಿಸಿ ಮರಳಿಸುವಂತೆ ಕೇಳಿಕೊಳ್ಳುವುದು. ಹೀಗೆ ಒಂದು ರೀತಿಯಲ್ಲಿ ನೆಟ್ವರ್ಕ್ ಸ್ಥಾಪಿಸುತ್ತಾ ಹೋಗುವುದು, ಈ ಮೂಲಕ ಅಭಯಾಕ್ಷರವನ್ನು ಸಮಷ್ಟಿ ಸಮಾಜಕ್ಕೆ ತಲುಪಿಸುವ ಕಾರ್ಯ ಮಾಡೋಣ.

ಅಕ್ಷರ ಸೇನೆ:

ಸೇನೆ ಎಂದಾಕ್ಷಣ ರಣರಂಗದಲ್ಲಿ ಸೆಣಸುವುದು ಎಂದು ಭಾವಿಸಬೇಡಿ. ಅಕ್ಷರಗಳ ಮೂಲಕ ಮಾಧ್ಯಮ ಮತ್ತು ಸಮಾಜ ಮಾಧ್ಯಮಗಳಲ್ಲಿ ಗೋವಿನ ಕುರಿತಾದ ವಿಷಯಗಳನ್ನು ಪ್ರಕಟಿಸುವುದು, ಪಸರಿಸುವುದು. ಗೋವಿನ ಪರವಾದ ಕೂಗಿಗೆ ಶಕ್ತಿ ತುಂಬುವುದು. ನಾವೆಲ್ಲರೂ ಟ್ವೀಟ್ ಮಾಡುವುದು ಫೇಸ್ಬುಕ್ಕಲ್ಲಿ ಸ್ಟೇಟಸ್ಸುಗಳನ್ನು ಹಾಕುವುದು ಪತ್ರಿಕೆಗಳಿಗೆ ಲೇಖನಗಳನ್ನು ಕಳುಹಿಸುವುದು ಅಥವಾ ಮಾಡಿರುವ ಟ್ವೀಟ್, ಪೋಸ್ಟ್ ಮತ್ತು ಲೇಖನಗಳನ್ನು ಪಸರಿಸುವ ಮೂಲಕ ಹೆಚ್ಚಿನ ಜನರಿಗೆ ತಲುಪಿಸುವುದು. ಹೀಗೆ ನಾವು ಸಮಾಜದಲ್ಲಿ ಇನ್ನಷ್ಟು ಜಾಗೃತಿ ಉಂಟು‌ಮಾಡಬೇಕಿದೆ. ಇದನ್ನು ಅತ್ಯಂತ ಸುಲಭ, ನಾವು ಇದ್ದಲ್ಲಿಂದಲೇ ಮಾಡಬಹುದಾದ ಕಾರ್ಯ.‌ ಹೀಗೆ ಯಾರೆಲ್ಲ ಅಕ್ಷರಗಳ ಮೂಲಕ ಗೋರಕ್ಷಣೆಯ ಕ್ರಾಂತಿ ಮಾಡಲು ಸಿದ್ಧರಿದ್ದಾರೋ ಅವರ ಬಳಗವೇ ಅಕ್ಷರ ಸೇನೆ.

ಇದಕ್ಕಾಗಿ ನೀವು ಮಾಡಬೇಕಾಗಿರುವುದಿಷ್ಟೇ. ಪರಮಪೂಜ್ಯ ಶ್ರೀಶ್ರೀ ರಾಘವೇಶ್ವರಭಾರತಿ ಮಹಾಸ್ವಾಮಿಗಳವರಿಂದ  ಅಕ್ಷರದೀಕ್ಷೆ ಪಡೆದು ಅಕ್ಷರಯೋಧ ರಾದರೆ ನೀವು ಅಕ್ಷರಸೇನೆ ಸೇರಿದಂತೆ. ಪ್ರತಿ ಮಂಗಳವಾರ ಬೆಳಿಗ್ಗೆ ೧೦ರಿಂದ ೧೨ಗಂಟೆಯ ವರೆಗೆ ಸಾಮಾಜಿಕ ಜಾಲತಾಣದಲ್ಲಿ ಮಾಡುವ ಅಭಿಯಾನದಲ್ಲಿ ನೀವು ನಮ್ಮ ಕೈಜೋಡಿಸಿ.

ಒಟ್ಟಿನಲ್ಲಿ ದೇಶದಲ್ಲಿ ನ ಭೂತೋ ಎಂಬಂತಹ ಗೋರಕ್ಷಣಾ ಜನಾಂದೋಲನದಲ್ಲಿ ನಮ್ಮದೂ ಕಿರುಕಾಣಿಕೆ ಇರಲಿ.. ಗೋರಕ್ಷಣೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಜೀವನ ಸಾರ್ಥಕ ಪಡಿಸಿಕೊಳ್ಳೋಣ.