Home Local News ಉತ್ತರಕನ್ನಡದ ಪ್ರಮುಖ ಸುದ್ದಿಗಳು

ಉತ್ತರಕನ್ನಡದ ಪ್ರಮುಖ ಸುದ್ದಿಗಳು

ಹದಗೆಟ್ಟ ರಸ್ತೆ ಸರಿಪಡಿಸಲು ಆಗ್ರಹ

ಕಾರವಾರ: ನೆರೆ ಹಾವಳಿಯ ಸಂದರ್ಭದಲ್ಲಿ ಹಳಗಾ ಉಳಗಾಮುಖ್ಯ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಇದರಿಂದ ಸ್ಥಳೀಯರ ರಸ್ತೆ ಸಂಚಾರ ದುಸ್ತರವಾಗಿದೆ. ಕಳೆದ 2019ರಲ್ಲಿ ಉಂಟಾದ ಪ್ರವಾಹದ ಕಾರಣದಿಂದ ಹಳಗಾ-ಉಳಗಾದ ಈ ಪ್ರಮುಖ ಮುಖ್ಯ ಸಂಪರ್ಕ ರಸ್ತೆ ಸಂಪೂರ್ಣ ಹಾನಿಗೊಳಗಾಗಿತ್ತು. ಬಳಿಕ ರಸ್ತೆಯ ಅಲ್ಲಲ್ಲಿ ತುಂಡು ಕಾಮಗಾರಿ ಮಾಡಲಾಗಿತ್ತು. ಬಳಿದ ಮತ್ತೆ ಬಂದ ನೆರೆಯಿಂದ ಈಗ ರಸ್ತೆ ಸಂಪೂರ್ಣ ಹಾನಿಗೊಂಡಿದೆ. ರಸ್ತೆಯನ್ನು ಸೂಕ್ತ ರೀತಿಯಲ್ಲಿ ದುರಸ್ತಿ ಮಾಡಬೇಕು ಎಂದು ಆಗ್ರಹ ಸ್ಥಳೀಯರು ಮಾಡಿದ್ದಾರೆ.

ವಿದ್ಯಾರ್ಥಿಗಳಿಗೆ ನಗದು ಬಹುಮಾನ

ಕಾರವಾರ: ಪ್ರತಿ ವರ್ಷ ಉತ್ತರಕನ್ನಡ ಜಿಲ್ಲಾ ಸರ್ಕಾರಿ ನೌಕರರ ಪತ್ತಿನ ಸಹಕಾರ ಸಂಘವು ತನ್ನ ಸದಸ್ಯರ ಮಕ್ಕಳಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ವಿಜ್ಞಾನ, ವಾಣಿಜ್ಯ ಹಾಗು ಕಲಾ ವಿಭಾಗದಲ್ಲಿ ಗರಿಷ್ಠ ಅಂಕ ಪಡೆದ ಮೊದಲ ಮೂರು ವಿದ್ಯಾರ್ಥಿಗಳಿಗೆ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸುತ್ತಿದೆ. ಅದೇ ರೀತಿ 2021ರ ಸಾಲಿನಲ್ಲಿ ನಡೆದ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ಮೊದಲ ಮೂರು ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಿದೆ. ಆಸಕ್ತ ಸದಸ್ಯರು ತಮ್ಮ ಮಕ್ಕಳ ಮಾರ್ಕ್ಸ ಕಾರ್ಡ್ ಪ್ರತಿಯೊಂದಿಗೆ, ಅಧ್ಯಕ್ಷರು, ಉತ್ತರಕನ್ನಡ ಜಿಲ್ಲಾ ಸರ್ಕಾರಿ
ನೌಕರರ ಪತ್ತಿನ ಸಹಕಾರ ಸಂಘ ನಿಯಮಿತ ಕಾರವಾರ ಇವರಿಗೆ ಸೆ.30ರೊಳಗಾಗಿ ಅರ್ಜಿ ಸಲ್ಲಿಸಲು ಪ್ರಕಟಣೆಯಲ್ಲಿ ತಿಳಿಸಿದೆ.

ವರ್ಧಮಾನ ಪ್ರಶಸ್ತಿಗೆ ಡಾ. ಜಿ.ಎಂ ಹೆಗಡೆ ಆಯ್ಕೆ.

ಶಿರಸಿ: ಕಳೆದ 40 ವರ್ಷಗಳಿಂದ ಮೂಡುಬಿದಿರೆಯ ಪ್ರತಿಷ್ಠಿತ ವರ್ಧಮಾನ ಸಾಹಿತ್ಯಪೀಠವು ನೀಡುವ ವರ್ಧಮಾನ ಪ್ರಶಸ್ತಿಗೆ ಈ ಬಾರಿ ತಾಲೂಕಿನ ಆಲ್ಮನೆ ಮಸಗುತ್ತಿಮನೆಯ ಡಾ. ಜಿ.ಎಂ. ಹೆಗಡೆ ಅವರು ಆಯ್ಕೆಯಾಗಿದ್ದಾರೆ. ಕಾಂತಾವರದ ಕನ್ನಡ‌ ಭವನದಲ್ಲಿ ಪ್ರಶಸ್ತಿ ಪೀಠದ ಕಾರ್ಯಾಧ್ಯಕ್ಷ ಎಸ್. ಡಿ.ಸಂಪತ್‌ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಸಭೆಯಲ್ಲಿ ನಾಡಿನೆಲ್ಲೆಡೆಯಿಂದ ಬಂದ ಶಿಫಾರಸುಗಳು ಹಾಗೂ ಸಾಹಿತಿಗಳ ಜೀವಮಾನದ ಸಾಧನೆಯ ಆಧಾರದಲ್ಲಿ ಡಾ. ಬಿ. ಜನಾರ್ದನ ಭಟ್, ಬೆಳಗೋಡು ರಮೇಶ ಭಟ್ ಮತ್ತು ಡಾ.ಎಸ್.ಪಿ. ಸಂಪತ್ ಕುಮಾರ್ ಅವರನ್ನೊಳಗೊಂಡ ತೀರ್ಪುಗಾರರ ಬಳಗ ಈ ಪ್ರಶಸ್ತಿಗಳನ್ನು ನಿರ್ಣಯಿಸಿದೆ ಎಂದು ಪೀಠದ ಪ್ರಧಾನ ನಿರ್ದೆಶಕ ಡಾ. ನಾ. ಮೊಗಸಾಲೆ ತಿಳಿಸಿದ್ದಾರೆ. ವಿಶ್ರಾಂತ ಪ್ರಾಧ್ಯಾಪಕ, ಹಿರಿಯ ವಿಮರ್ಶಕ ಡಾ.ಜಿ. ಎಂ. ಹೆಗ್ಡೆ ಅವರು ಕಳೆದ ಸುಮಾರು 4 ದಶಕಗಳಿಂದ ಧಾರವಾಡದ ಸಾಹಿತ್ಯ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿದ್ದು ಸಂಶೋಧನೆ ಅಧ್ಯಯನ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. 20ಕ್ಕೂ ಅಧಿಕ ವಿಮರ್ಶಕ ಕೃತಿಗಳು, 40 ಸಂಪಾದಿತ ಗ್ರಂಥಗಳು, 400ಕ್ಕೂ ಅಧಿಕ ಪುಸ್ತಕ ವಿಮರ್ಶೆ ನಡೆಸಿರುವ ಹೆಗ್ಗೆ ಸಂಶೋಧನಾ ಮಾರ್ಗದರ್ಶಕರಾಗಿಯೂ ಗುರುತಿಸಿಕೊಂಡಿದ್ದಾರೆ.