Home Local News ಉತ್ತರಕನ್ನಡದ ಪ್ರಮುಖ ಸುದ್ದಿಗಳು

ಉತ್ತರಕನ್ನಡದ ಪ್ರಮುಖ ಸುದ್ದಿಗಳು

ಬೈಕಿನಲ್ಲಿ ಸಾಗುತ್ತಿದ್ದ ಯುವಜೋಡಿಯ ಮೇಲೆ ಹಲ್ಲೆ

ಭಟ್ಕಳ: ತಾಲೂಕಿನ ಮನ್ಕುಳಿ ಪೆಟ್ರೋಲ್ ಪಂಪ್ ಎದುರು ಬೈಕಿನಲ್ಲಿ ಸಾಗುತ್ತಿದ್ದ ಯುವಜೋಡಿಯ ಮೇಲೆ ಯುವತಿಯ ಪರಿಚಯಸ್ಥರು ಹಲ್ಲೆ ನಡೆಸಿದ ಘಟನೆ ನಡೆದಿದೆ.

ಗುಳ್ಮಿಯ ಯುವತಿಯನ್ನು ರಾಜಸ್ತಾನದ ಮೂಲದ ಯುವಕನೊರ್ವ ಕರೆದುಕೊಂಡು ಹೋಗಲು ಅಟೋ ರಿಕ್ಷಾವೊಂದನ್ನು ಕರೆಸಿದ್ದಾನೆ. ಯುವತಿ ಆಟೋ ಹತ್ತಿ ಯುವಕ ತಿಳಿಸಿದ ಸ್ಥಳಕ್ಕೆ ಹೋಗಬೇಕು ಎನ್ನುವಷ್ಟರಲ್ಲಿ ಸ್ಥಳಕ್ಕೆ ಬಂದ ಯುವತಿಯ ಪರಿಚಯಸ್ಥರು ಯುವಕನನ್ನು ಹಿಡಿದು ಹಿಗ್ಗಾಮುಗ್ಗ ಥಳಿಸಿದ್ದಾರೆ.

ಹಾಡು ಹಗಲಿನಲ್ಲಿ ಯುವಕನೊರ್ವನನ್ನು ಹೆದ್ದಾರಿ ಬದಿಯಲ್ಲಿ ಹಿಡಿದು ಥಳಿಸುತ್ತಿರುವುದನ್ನು ನೋಡಿದ ಜನ ಹಲ್ಲೆ ನಡೆಸುತ್ತಿದ್ದ ಯುವಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಹಲ್ಲೆ ನಡೆಸಲು ನಿಮಗೆ ಅಧಿಕಾರ ಕೊಟ್ಟವರ‍್ಯಾರು ಎಂದು ಮಾತಿನ ಚಕಮಕಿ ನಡೆದಿದೆ.

ಓಲಿವ್ ರೆಡ್ಲಿ ಜಾತಿಯ ಆಮೆ ಮೃತ ಶರೀರ ಪತ್ತೆಯಾಗಿದೆ.

ಹೊನ್ನಾವರ: ತಾಲೂಕಿನ ಕಾಸರಕೋಡು, ಟೊಂಕ ಕಡಲತೀರದ ಉದ್ದೇಶಿತ ವಾಣಿಜ್ಯ ಬಂದರು ನಿರ್ಮಾಣ ಪ್ರದೇಶದಲ್ಲಿ ಓಲಿವ್ ರೆಡ್ಲಿ ಜಾತಿಯ ಆಮೆಯ ಮೃತ ಶರೀರ ಪತ್ತೆಯಾಗಿದೆ. ಅದರ ಹೊಟ್ಟೆ ಭಾಗದಲ್ಲಿ ಗಾಯವಾಗಿದ್ದು, ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಹೊನ್ನಾವರ ಅರಣ್ಯ ಇಲಾಖೆಯವರು ಸ್ಥಳಕ್ಕೆ ಭೇಟಿ ನೀಡಿ ಮೃತ ಆಮೆಯನ್ನು ಮರಣೋತ್ತರ ಪರೀಕ್ಷೆಗೆ ಕೊಂಡೊಯ್ದಿದ್ದಾರೆ.

ವಿಕಲಚೇತನನ ನಾಲ್ಕು ಚಕ್ರದ ಬೈಕ್ ಪಲ್ಟಿ : ಗಂಭೀರ ಗಾಯ

ನಿಯಂತ್ರಣ ತಪ್ಪಿ ವಿಕಲಚೇತನನ ನಾಲ್ಕು ಚಕ್ರದ ಬೈಕ್ ಪಲ್ಟಿಯಾದ ಪರಿಣಾಮ ಸವಾರ ಗಂಭೀರ ಗಾಯಗೊಂಡ ಘಟನೆ ಪಟ್ಟಣದ ಹೆರವಟ್ಟಾದ ರೈಲ್ವೆ ಬ್ರಿಡ್ಜ್ ಬಳಿ ಇಂದು ಸಂಭವಿಸಿದೆ.

ಕುಮಟಾ ತಾಲೂಕಿನ ವಾಲಗಳ್ಳಿ ಗ್ರಾಪಂ
ವ್ಯಾಪ್ತಿಯ ಕಲಕೇರಿ ನಿವಾಸಿ ಸಾಂತಪ್ಪರಾಮ ಗೌಡ ಗಾಯಗೊಂಡ ಸವಾರ, ಈತ ಕುಮಟಾ ಕಡೆಯಿಂದ ಚಂದಾವರ ಕಡೆಗೆ ಅತಿವೇಗ ಹಾಗೂ ನಿಷ್ಕಾಳಜಿಯಿಂದ ತನ್ನ ನಾಲ್ಕು ಚಕ್ರದ ಬೈಕ್ ಚಲಾಯಿಸಿದ ಪರಿಣಾಮ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಕಾಲುವೆಯಲ್ಲಿ ಪಲ್ಟಿಯಾಗಿದೆ. ಸವಾರ ಗಂಭೀರ ಗಾಯಗೊಂಡಿದ್ದು, ಈ ಕುರಿತು ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.