Home Article ಭಾರತೀಯ ಸೇನೆಗೆ ಹೊರಟ ಅಂಕೋಲಾದ ನಾಯಿ ಮರಿಗಳು.

ಭಾರತೀಯ ಸೇನೆಗೆ ಹೊರಟ ಅಂಕೋಲಾದ ನಾಯಿ ಮರಿಗಳು.

ಅಂಕೋಲಾ : ತಾಲೂಕಿನ ಬಾವಿಕೇರಿ ಗ್ರಾಮದಲ್ಲಿ ಸಾಕಿಕೊಂಡಿದ್ದ ನಾಯಿಮರಿಗಳು ಈಗ ದೇಶ ಸೇವೆಗೆ ಹೊರಟಿದೆ. ಬಾವಿಕೇರಿ ಗ್ರಾಮದ ಊರಿನ ರಾಘವೇಂದ್ರ ಭಟ್ ಸಾಕಿದ ನಾಯಿಮರಿಗಳು ಈಗ ಭಾರತೀಯ ಸೇನೆಯ ಸೇವೆಗೆ ಹೊರಟಿದ್ದು ಸೇನೆಯ ಕಮಾಂಡ ಹಾಗೂ ಜವಾನರು ಆಗಮಿಸಿ ನಾಯಿ ಮರಿಗಳನ್ನು ಎಸಿ ಬಸ್ ನಲ್ಲಿ ಕೊಂಡೊಯ್ದಿದ್ದಾರೆ.

ರಾಘವೇಂದ್ರ ಭಟ್ ಸಾಕಿ ಬೆಳೆಸಿದ ಬೆಲ್ಲಿಯಂ ಮೆಲಿನೋಲ್ಡ್ ತಳಿಯ 17 ಮರಿಗಳು ಇಂಡಿಯನ್ ಆರ್ಮಿಯಲ್ಲಿ ಸೇವೆ ಸಲ್ಲಿಸಲು ಅಸ್ಸಾಂಗೆ ಹೊರಟಿವೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉದ್ಯೋಗಿಯಾಗಿರುವ ರಾಘವೇಂದ್ರ ಭಟ್ 25 ವರ್ಷಗಳಿಂದ ವಿವಿಧ ತಳಿಯ ನಾಯಿಗಳನ್ನು ಸಾಕುತ್ತಿದ್ದಾರೆ. ಈ ಹಿಂದೆ ಸಾಕಿದ್ದ ಬೆಲ್ಲಿಯಂ ಮೆಲಿನೋಯ್ಸ್ ಜಾತಿಯನಾಯಿಗಳು ಬೆಂಗಳೂರಿನ ಪೊಲೀಸ್ ಇಲಾಖೆ, ಕಾರ್ಕಳ, ಎಎನ್ ಎಫ್, ಬೆಳಗಾವಿ ಮತ್ತು ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಈಗಾಗಲೇ ಕಾರ್ಯ ನಿರ್ವಹಿಸುತ್ತಿದೆ.

ಇವರು ಬೆಂಗಳೂರಿನಲ್ಲಿ ಪೊಲೀಸ್ಇಲಾಖೆಗೆ ನೀಡಿದ್ದ ನಾಯಿಯನ್ನು ನೋಡಿ ಹಾಗೂ ಇವರ ಫೇಸುಕ್ ಪೇಜ್ ಅನ್ನು ವೀಕ್ಷಿಸಿ ಇಂಡಿಯನ್ ಆರ್ಮಿಯ ಅಧಿಕಾರಿಗಳು ಇವರನ್ನು ಸಂಪರ್ಕಿಸಿದ್ದಲ್ಲದೇ ನಾಯಿಗಳ ವೀಕ್ಷಣೆಗೆ ಇವರ ಮನೆಗೆ ಭೇಟಿ ಪರಿಶೀಲನೆ ಕೂಡಾ ನಡೆಸಿದ್ದರು. ಆ ನಂತರ ಇಂಡಿಯನ್ ಆರ್ಮಿಯ ಜವಾನ 45 ದಿನಗಳಿಂದ ಇವರ ಮನೆಯಲ್ಲೇ ತಂಗಿದ್ದು, ನಾಯಿಗಳ ನಡವಳಿಕೆ, ಆಹಾರ ಪದ್ಧತಿ, ಅವುಗಳ ಬುದ್ಧಿಮತ್ತೆ, ಆರೋಗ್ಯ ಪರಿಶೀಲಿಸಿ ದಿನಾಲೂ ಉನ್ನತಾಧಿಕಾರಿಗಳಿಗೆ ವರದಿ ನೀಡುತ್ತಿದ್ದರು.

ಆದರೆ, ಇಂಡಿಯನ್ ಆರ್ಮಿಯ ತಂಡವೇ ಬಂದು ಬೆಲ್ಲಿಯಂ ಮಲಿನೋಯ್ಸ್ ತಳಿಯ 17 ನಾಯಿ ಮರಿಗಳನ್ನು ಖಾಸಗಿ ಎಸಿ ಬಸ್‌ನಲ್ಲಿ ಕುಳ್ಳಿರಿಸಿ ಅಸ್ಸಾಂನತ್ತ ಕೊಂಡೊಯ್ದಿದ್ದಾರೆ. ಇವರು ಸಾಕಿರುವ ನಾಯಿಮರಿಗಳು ಪ್ರಸ್ತುತ
ದೇಶಸೇವೆಗೆ ತೆರಳಿರುವುದು ಮನೆಯವರಿಗೆಲ್ಲಾ ಸಾಕಷ್ಟು ಖುಷಿ ತಂದುಕೊಟ್ಟಿದೆ. ಈ ನಾಯಿಗಳು ಗುಣಮಟ್ಟದ ಆಧಾರದ ಮೇಲೆ ತಲಾ 80 ಸಾವಿರ ರು.ಗಳಿಂದ 2 ಲಕ್ಷ ರು.ಗಳ ತನಕ ಬೆಲೆ ಬಾಳುತ್ತವೆ. ಇವರು ಸಾಕಿರುವ ಒಂದು ನಾಯಿ ಕಾರವಾರ, ಶಿವಮೊಗ್ಗ,ಮಂಗಳೂರು, ಉಡುಪಿ, ಗೋವಾ, ಬೆಳಗಾವಿ, ಶಿರಸಿ ಮುಂತಾದೆಡೆ ನಡೆದ ಡಾಗ್ ಶೋಗಳಲ್ಲಿ ಪ್ರಶಸ್ತಿ ಹಾಗೂ ಚಿನ್ನ ಮತ್ತು ಬೆಳ್ಳಿಯ ಪದಕಗಳನ್ನು ಬಾಚಿಕೊಂಡಿದೆ.

ಈ ನಾಯಿಗಳಿಗೆ ಅನ್ನ, ಮಜ್ಜಿಗೆ, ಮೊಸರು, ಹಾಲು, ಮೊಟ್ಟೆ, ಸ್ವಲ್ಪ ಚಿಕನ್, ಡ್ರೈ ಫ್ರಟ್, ಮಲ್ಟಿ ಗ್ರೆನ್ ಪೌಡರ್‌ಗಳನ್ನು ಕಲಸಿ
ನೀಡಲಾಗುತ್ತದೆ. ಇದರೊಂದಿಗೆ ತರಕಾರಿಗಳನ್ನು ಕೂಡಾ ಬೇಯಿಸಿ ನೀಡಲಾಗುತ್ತದೆ. ರಾಘವೇಂದ್ರ ಭಟ್ ಅವರ ಪತ್ನಿ ರಾಜೇಶ್ವರಿ ಹಾಗೂ ಅವರ ತಾಯಿ ನಾಯಿಗಳಿಗೆ ಆಹಾರವನ್ನು ತಯಾರಿಸುತ್ತಾರೆ. ಮಾಂಸಾಹಾರಿ ಆಹಾರವನ್ನು ತಂದು ನೀಡಲು ಒಬ್ಬರನ್ನು ನೇಮಕ ಮಾಡಿಕೊಂಡಿದ್ದಾರೆ.