Home Article ಅಂಕೋಲಾ ಸೀಮೆಯ ಯಕ್ಷಗಾನದ ದೈತ್ಯ ಪ್ರತಿಭೆ ವಂದಿಗೆ ವಿಠೋಬ ನಾಯಕ!

ಅಂಕೋಲಾ ಸೀಮೆಯ ಯಕ್ಷಗಾನದ ದೈತ್ಯ ಪ್ರತಿಭೆ ವಂದಿಗೆ ವಿಠೋಬ ನಾಯಕ!

ಅಂಕೋಲಾ ಶಹರದಿಂದ ತುಸು ದೂರದಲ್ಲಿರುವ ʼವಂದಿಗೆʼಯೆಂಬ ಪುಟ್ಟ ಗ್ರಾಮವು ಅಂಕೋಲಾದ ಸುತ್ತಣದ ಹತ್ತೂರುಗಳಲ್ಲಿ ಸುಪರಿಚಿತಗೊಳ್ಳುವಲ್ಲಿ ಯಕ್ಷಗಾನ ಕ್ಷೇತ್ರದಲ್ಲಿ ಮೆರೆದ ನಾಯಕದ್ವಯರಾದ ವಿ.ಜೆ ಹಾಗೂ ವಿಠೋಬ ನಾಯಕರವರಿಂದ ಎನ್ನುವಲ್ಲಿ ಕೊಂಚವೂ ಉತ್ಪ್ರೇಕ್ಷಯಿಲ್ಲ.

ವಿಠೋಬ ನಾಯಕರವರು ಎಂಬತ್ತೆಂಟು ವತ್ಸರಗಳ ತುಂಬು ಬದುಕನ್ನು ಕಂಡವರು. ಅವರದು ನಾಡವರ ಕಟ್ಟುಮಸ್ತಾದ ಗಟ್ಟುಮುಟ್ಟಿನ ಮೈಕಟ್ಟು. ಉದ್ದನೆಯ ಆಳು, ನೀಳವಾದ ತೋಳು, ಹವಳದಂತೆ ಹೊಳೆಯುವ ಕವಳ ತುಂಬಿದ ತುಟಿಯ ಮುಂದಿರುವ ನಗುವಿನೊಂದಿಗಿನ ಅಗಲವಾದ ಮುಖದಲ್ಲಿನ ಮೋಹಕವಾದ ಹಣೆಯೊಂದಿಗಿರುವ ಸೆಳೆವ ಕಂಗಳು, ನಿರ್ಭೀತ ಗುಂಡಿಗೆಗೆ ಸಾಕಾರವಾದ ವಿಸ್ತಾರವಾಗಿರುವ ಎದೆ, ಹೀಗೆ ಸುಮ್ಮನೆ ಮಾತನ್ನಾಡಿದರೂ ʼಝಲ್ʼ ಎನ್ನಿಸುವ ಸಿರಿಕಂಠ, ರಾಜಗಾಂಭೀಯದ ನಡೆ… ಹೀಗೆ ಕಣ್ಣಿಗೆ ಕಟ್ಟಿದ್ದ ಅವರು ರಂಗದಲ್ಲಿ ಹಾಗೂ ರಂಗದಾಚೆಯೂ ರಂಗಾಗಿಯೇ ಇದ್ದ ಯಕ್ಷಗಾನದ ಅಭಿಜಾತ ಕಲಾವಿದ!

ನಾವೆಲ್ಲ ಪ್ರವರ್ಧಮಾನಕ್ಕೆ ಬರುವ ಹೊತ್ತಿನಲ್ಲಿ “ವಿಠೋಬಣ್ಣ” ರಂಗದಿಂದ ದೂರ ಸರಿದು ಸಾಕಷ್ಟು ಸಮಯವೇ ಸಂದಿದ್ದರೂ, ಅವರೊಂದಿಗೆ ಒಡನಾಡಿದ ಅವರ ಕಿರಿಯ ಸಮಕಾಲೀನ ಸಹ ಕಲಾವಿದರು ವೇಷ ಮಾಡಿಕೊಳ್ಳುವಾಗಲೆಲ್ಲ “ಇದು ವಂದಿಗೆಯ ವಿಠೋಬ ನಾಯಕರವರು ಮಾಡುತ್ತಿದ್ದ ವೇಷ, ವಿಠೋಬ ನಾಯಕರವರ ನಡೆ ಹಾಗಿತ್ತು, ಅವರ ಪಾತ್ರವನ್ನು ಕಂಡವರು ಈ ಪಾತ್ರವನ್ನೆಲ್ಲಾ ಕಂಡರೆ ಏನೆನ್ನುತ್ತಾರೋ? ವಿಠೋಬ ನಾಯಕರವರು ಆಟ ನೋಡಲು ಬಂದು ಕುಳಿತಿದ್ದಾರೆ, ಪಾತ್ರ ನೋಡಿ ಏನೆಂದುಕೊಳ್ಳುತ್ತಾರೋ”! ಎಂದಾಡಿದ್ದನೆಲ್ಲಾ ಕೇಳಿದಾಗ ಪುಳಕಗೊಂಡಿದ್ದೇನೆ.

ವಿಠೋಬ ನಾಯಕರವರು ಖಳ ಪಾತ್ರಗಳಿಗೆ ಹೆಸರಾದವರು. ಅವರ ಆಕಾರ, ಬಣ್ಣ, ಸ್ವರ-ಎಲ್ಲವೂ ದೈತ್ಯ ಪಾತ್ರಗಳಿಗೆ ಹೇಳಿ ಮಾಡಿಸಿದಂತಿತ್ತು. ಕಾಲಜಂಘನ ಪಾತ್ರಕ್ಕಂತೂ ಅವರಿಗವರೇ ಸಾಟಿಯಾಗಿದ್ದರು. ಹಿಂದೆ ಸ್ತ್ರೀಪಾತ್ರಗಳನ್ನು ಮಾಡುತ್ತಿದ್ದ ನಾನು ಅಪರೂಪಕ್ಕೆ ಕಾಲಜಂಘನ ಪಾತ್ರವನ್ನು ಮಾಡಿದಾಗ ನೋಡಲು ಬಂದಿದ್ದ ಅವರು ಚೌಕಿ(ಬಣ್ಣದ) ಮನೆಗೆ ಬಂದು “ಮಂಜು ಭೇಷ್!” ಎಂದು ಬೆನ್ನು ತಟ್ಟಿ ಮತ್ತೊಬ್ಬರನ್ನು ಒಪ್ಪುವ ಹಾಗೂ ಬೆಂಬಲಿಸುವ ನಿಜವಾದ ಕಲಾವಿದನಲ್ಲಿರಬೇಕಾದ ಸಜ್ಜನಿಕೆಯನ್ನು ಸಾದರಪಡಿಸಿದ್ದು ಮರೆಯುವ ವಿಷಯವೇ ಅಲ್ಲ. ಅವರ ವಲಲ, ದುಷ್ಟಬುದ್ದಿ, ಭೀಮ, ಘಟೋತ್ಕಚ ಹಾಗೂ ಕಂಸ ಮೊದಲಾದ ಪಾತ್ರಗಳು ಇಂದಿಗೆ ಇತಿಹಾಸ!

ಕುಂದಾಪುರದಲ್ಲಿರುವ ಬೇಲೇಕೇರಿಯ ಉಪನ್ಯಾಸಕ ಮಿತ್ರ ಹರೀಶಣ್ಣ-ವಿಠೋಬ ನಾಯಕರವರ “ಶನಿ”ಯ ಪಾತ್ರವನ್ನು ನೆನೆದು, ಮೇಳದ ಆಟಗಳಲ್ಲಿ ತಮ್ಮ ಕಲಾ ಪ್ರೌಢಿಮೆಯ ಮೂಲಕ “ಅಭಿನವ ಶನೀಶ್ವರ” ಎಂದೇ ಸುವಿಖ್ಯಾತರಾಗಿದ್ದ ದಿ||ಜಲವಳ್ಳಿ ವೆಂಕಟೇಶ ರಾವ್ ರಂತೆ ಬಯಲಾಟಗಳಲ್ಲಿ ತನ್ನ ವಿಭಿನ್ನ ಶೈಲಿಯಿಂದ “ನಿಜಶನಿ”ಯಾಗಿ ಮಹೋನ್ನತವಾಗಿ ಪಾತ್ರವನ್ನು ಪೋಷಿಸಿದ್ದರೂ, ಆ ಕಾಲಘಟ್ಟದಲ್ಲಿನ ಕೊರತೆಯ ಕಾರಣಕ್ಕೆ ಅಂಕೋಲಾದ ಪರಿಸರದಾಚೆ ಅಷ್ಟಾಗಿ ಪ್ರಚಾರವಾಗದಿರುವುದಕ್ಕೆ ವಿಷಾದಿಸುತ್ತಾರೆ.

ನಾಯಕರು ಓದಿದವರಲ್ಲ, ಯಕ್ಷಗಾನವನ್ನೂ ಶಾಸ್ತ್ರೀಯವಾಗಿ ಅಭ್ಯಸಿಸಿದವರೂ ಅಲ್ಲ, ಹಾಗೆಯೇ ಗೆಜ್ಜೆಯನ್ನು ಕಟ್ಟಿದವರು. ರಂಗದಲ್ಲೇ ಕಲಿತವರು. ಗತ್ತು-ಸುತ್ತು-ಗಮ್ಮತ್ತುಗಳಲ್ಲಿಯೇ ಕಟ್ಟಿದ ಪಾತ್ರಗಳಿಗೆ ಕಳೆಗಟ್ಟಿದವರು. ರಂಗದಲ್ಲಾಗಲಿ, ರಂಗದಾಚೆಯಾಗಲಿ ಇತಿ-ಮಿತಿಯಲ್ಲಿದ್ದವರು. ಕನ್ನಡ ರಾಜ್ಯೋತ್ಸವ ಪ್ರಶಸ್ತಿಯ ಜೊತೆಯಲ್ಲಿ ಹಲವು ಸಂಘಟನೆಗಳ ಮಾನ-ಸಮ್ಮಾನಗಳಿಗೆ ಭಾಜನರಾದರೂ, ಬೀಗದೇ-ಅಭಿಮಾನಿಗಳ ಅಂತರಂಗದಲ್ಲಿ ನೆಲೆಯಾಗಿದ್ದವರು.

“ವೀಠೋಬಣ್ಣ ಸಾವಿರದ ಕಲಾವಿದ!” ಎಂಬ ಯಕ್ಷಮುಖಿಯ ಸಂಚಾಲಕರಾದ ಗೆಳೆಯ ಸೂರ್ವೆಯ ರಾಜೇಶಣ್ಣನ ಉದ್ಘಾರದಲ್ಲಿ ಹುರುಳಿದೆ!

-ಮಂಜುನಾಥ ಗಾಂವಕರ್, ಬರ್ಗಿ,