Home Article ‘ಆಟೋ ರಕ್ಷಕ’ ನಾದರು ಅನಂತಮೂರ್ತಿ ಹೆಗಡೆ – ಚ್ಯಾರಿಟೇಬಲ್ ಟ್ರಸ್ಟ್ ವತಿಯಿಂದ ಅರ್ಥಪೂರ್ಣ ಕಾರ್ಯಕ್ರಮ.

‘ಆಟೋ ರಕ್ಷಕ’ ನಾದರು ಅನಂತಮೂರ್ತಿ ಹೆಗಡೆ – ಚ್ಯಾರಿಟೇಬಲ್ ಟ್ರಸ್ಟ್ ವತಿಯಿಂದ ಅರ್ಥಪೂರ್ಣ ಕಾರ್ಯಕ್ರಮ.

ಶಿರಸಿ : ನಗರದ ಅಂಬೇಡ್ಕರ ಭವನದಲ್ಲಿ ಅನಂತಮೂರ್ತಿ ಹೆಗಡೆ ಚ್ಯಾರಿಟೇಬಲ್ ಟ್ರಸ್ಟ್ ವತಿಯಿಂದ ಶಿರಸಿ ತಾಲೂಕಾ ಆಟೋ ರಿಕ್ಷಾ & ಗೂಡ್ಸ್ ರಿಕ್ಷಾ ಚಾಲಕ ಮಾಲಕರಿಗೆ ಔತಣಕೂಟ, ಉಚಿತ ಸಮವಸ್ತ್ರ ವಿತರಣೆ, ಆಟೋ ರಿಕ್ಷಾ ಪಾಸಿಂಗ್ ಯೋಜನೆ ಮತ್ತು ರಿಕ್ಷಾ ಪ್ರಿಂಟಿಂಗ್ ಹುಡ್ ವಿತರಣಾ ಸಮಾರಂಭ ಅರ್ಥಪೂರ್ಣವಾಗಿ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿದ ಸ್ಕೊಡವೆಸ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ವೆಂಕಟೇಶ ನಾಯ್ಕ, ಹಸಿದವರಿಗೆ ಅನ್ನ, ಅವಶ್ಯಕತೆ ಇರುವವರಿಗೆ ಶಿಕ್ಷಣ, ಉತ್ತಮ ಆರೋಗ್ಯ, ಅನಿವಾರ್ಯತೆ ಇರುವವರಿಗೆ ಆಶ್ರಯ ನೀಡುವುದು ಅನಂತಮೂರ್ತಿ ಹೆಗಡೆ ಟ್ರಸ್ಟ್ ನ ಉದ್ದೇಶವಾಗಿದೆ. ಆ ನಿಟ್ಟಿನಲ್ಲಿ‌ ಸಮಾಜಮುಖಿಯಾಗಿ ಕೆಲಸ ಮಾಡುತ್ತಿರುವ ಅನಂತಮೂರ್ತಿ ಹೆಗಡೆ ಬೆನ್ನಿಗೆ ಸಮಸ್ತ ಸಮಾಜ ನಿಲ್ಲಬೇಕಿದೆ ಎಂದರು.

ಹಣಬಲವಿರುವ ಎಲ್ಲರಿಗೂ ಕಷ್ಟದಲ್ಲಿದ್ದವರಿಗೆ ಸಹಾಯ ಮಾಡುವ ಮನಸ್ಸು ಇರುವುದಿಲ್ಲ. ಆದರೆ ಅನಂತಮೂರ್ತಿ ಹೆಗಡೆ ಈ ನಿಟ್ಟಿನಲ್ಲಿ ಬಡವರ ಪರ ನಿಲ್ಲುವುದರ ಮೂಲಕ ಬದಲಾವಣೆಯ ಹರಿಕಾರರಾಗಿ ಕಾಣುತ್ತಾರೆ. ಅವರಿಂದ ಮುಂದೆ ಇನ್ನಷ್ಟು ಧನಾತ್ಮಕ ಪರಿವರ್ತನೆಯಾಗಲಿ ಎಂದರು.

ಆಟೋ ಚಾಲಕ -ಮಾಲಕ ಸಂಘದ ಅಧ್ಯಕ್ಷ ಉಪೇಂದ್ರ ಪೈ ಮಾತನಾಡಿ, ಅಪರಿಚಿತರಿಗೆ ಪ್ರಾಮಾಣಿಕವಾಗಿ ದಾರಿ ತೋರಿಸುವ ಕೆಲಸವನ್ನು ಆಟೋ ಚಾಲಕರು ಮಾಡುತ್ತಾರೆ. ಆಟೋ ಚಾಲಕರ ಮಾತು ಒರಟಾಗಿದ್ದರೂ, ಮನಸ್ಸು ಒಳ್ಳೇದಿದೆ. ಆಟೋದಲ್ಲಿ ಪ್ರಯಾಣಿಕರು ಬಿಟ್ಟುಹೋದ ವಸ್ತು ಕೋಟಿಯಷ್ಟಿದ್ದರೂ ಅದನ್ನು ಸಂಬಂಧಪಟ್ಟವರಿಗೆ ತಲುಪಿಸುವ ಕಾರ್ಯ ಆಟೋ ಚಾಲಕರು ಮಾಡುತ್ತಾರೆ ಎಂದು ಅವರು ಹೇಳಿದರು. ಸರಕಾರ ಗ್ಯಾರಂಟಿ ಯೋಜನೆಯ ಮೂಲಕ ಆಟೋ ಚಾಲಕರನ್ನು ಹತ್ತಿಕ್ಕುವ ಕೆಲಸ ಮಾಡಿದೆ. ಆಟೋ ಚಾಲಕರಿಗೆ ಸರಕಾರದಿಂದ ಪರ್ಯಾಯ ಅನುಕೂಲವಾಗುವಂತೆ ವ್ಯವಸ್ಥೆ ಮಾಡಬೇಕಿದೆ ಎಂದರು.

ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ ನ ಸಂಸ್ಥಾಪಕ‌ ಅಧ್ಯಕ್ಷ ಅನಂತಮೂರ್ತಿ ಹೆಗಡೆ ಮಾತನಾಡಿ, ಇದು ಯೋಚನೆ ಮಾಡಿ ಮಾಡಿರುವ ಕಾರ್ಯಕ್ರಮವಲ್ಲ, ಬದಲಾಗಿ ಹೃದಯದಿಂದ ಮಾಡಿರುವ ಕಾರ್ಯಕ್ರಮವಾಗಿದೆ. ಅನ್ನ, ಅಕ್ಷರ, ಆಶ್ರಯದ ದಾಸೋಹವು ಅತೀ ಶ್ರೇಷ್ಠವಾಗಿದ್ದು. ಪೂಜನೀಯ ಸಿದ್ಧಗಂಗಾ ಶ್ರೀಗಳು ಹಾಗು ಪುನೀತ್ ರಾಜಕುಮಾರ್ ನನ್ನೆಲ್ಲ ಒಳ್ಳೆಯ ಕಾರ್ಯಕ್ಕೆ ಪ್ರೇರಣೆ. ಶಿರಸಿಯಲ್ಲಿ ಇಂದಿನಿಂದ ಒಂದು ತಿಂಗಳ ಕಾಲ ರಿಕ್ಷಾ ಪಾಸಿಂಗ್ ಯೋಜನೆ ಉಚಿತವಾಗಿ ನಡೆಯಲಿದೆ.

ಪ್ರತಿ ವೃತ್ತಿಗೂ ಅದರದ್ದೇ ಆದ ಗೌರವವಿದೆ. ಪ್ರತಿಯೊಬ್ಬರಿಗೂ ಗೌರವ ನೀಡುವ ಮೂಲಕ ನಾವು ಸಮಾಜದಲ್ಲಿ ಸರ್ವರನ್ನೂ ಪ್ರೀತಿಯಿಂದ ಕಾಣಬೇಕು ಎಂದರು. ಕೆಲವು ಆಟೋ ಚಾಲಕರು ಕೆಲಸದ ಸಮಯದಲ್ಲಿ ಕುಡಿತದ ಚಟ ಹೊಂದಿರುತ್ತಾರೆ. ದಯವಿಟ್ಟು ಆಂತಹ ದುಶ್ಚಟವನ್ನು ಬಿಡುವುದರ ಮೂಲಕ ಉತ್ತಮ ಜೀವನವನ್ನು ನಮ್ಮದಾಗಿಸಿಕೊಳ್ಳೋಣ ಎಂದು ಆಶಿಸಿದರು.

ಯುವ ಧುರೀಣ ಗುರುಪ್ರಸಾದ ಭಟ್ಟ ಅಂಬ್ಲಿಹೊಂಡ ಪ್ರಾಸ್ತಾವಿಕ ಮಾತುಗಳನ್ನಾಡಿ, ಅನಂತಮೂರ್ತಿ ಹೆಗಡೆ ಗ್ರಾಮೀಣ ಭಾಗದಿಂದ ಬಂದವರಾಗಿದ್ದಾರೆ. ಇಷ್ಟು ದಿನ ಅನಿವಾರ್ಯವಾಗಿ ಪರವೂರಿನಲ್ಲಿ ನೆಲೆಸಿ, ಇದೀಗ ತಮ್ಮೂರಿನ ಬಡವರಿಗೆ ಸಹಾಯ ಮಾಡುವ ಮೂಲಕ ಇತರರಿಗೆ ಪ್ರೇರಣೆಯಾಗಿದ್ದಾರೆ. ಬಡತನದ ಅರಿವಿದ್ದವರು ಮಾತ್ರ ಮತ್ತೊಬ್ಬ ಬಡವರಿಗೆ ಸಹಾಯಹಸ್ತ ಚಾಚುತ್ತಾರೆ. ಅನಂತಮೂರ್ತಿ ಹೆಗಡೆ ಜನಪರ ಕಾರ್ಯ ನಿರಂತರವಾಗಿರಲಿ ಎಂದರು.

ಇದೇ ವೇಳೆ ಸಮಸ್ತ ಆಟೋ ಚಾಲಕರು ಅನಂತಮೂರ್ತಿ ಹೆಗಡೆಗೆ ‘ಆಟೋ ರಕ್ಷಕ’ ಎಂದು ಬಿರುದು ನೀಡಿ, ಸನ್ಮಾನಿಸಿ ಗೌರವಿಸಲಾಯಿತು. ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ನಾರಾಯಣ ಗುರು ನಗರದ ಮನೋಹರ ಗೌಡ ಅವರ ತಾಯಿಗೆ ಧನಸಹಾಯ, ದೇಹ ದಾನ ಮಾಡಿ ಮಾದರಿಯಾದ ನೀಲಕಂಠ ಗೌಡ ಅವರಿಗೆ ಸನ್ಮಾನಿಸಲಾಯಿತು.