Home KARWAR ಮಳೆ- ಬಿಸಿಲೆನ್ನದೆ ಕಾರವಾರ ಪ್ರವೇಶ ಮಾಡಿದ ಸ್ವಾಭಿಮಾನಿ ಪಾದಯಾತ್ರೆ: ಗುರುವಾರ ಬೆಳಿಗ್ಗೆ 11 ಘಂಟೆಗೆ ಮನವಿ...

ಮಳೆ- ಬಿಸಿಲೆನ್ನದೆ ಕಾರವಾರ ಪ್ರವೇಶ ಮಾಡಿದ ಸ್ವಾಭಿಮಾನಿ ಪಾದಯಾತ್ರೆ: ಗುರುವಾರ ಬೆಳಿಗ್ಗೆ 11 ಘಂಟೆಗೆ ಮನವಿ ಸಲ್ಲಿಕೆ

ಕಾರವಾರ: ಶಿರಸಿಯ ಸಮಾಜ ಸೇವಕ ಅನಂತಮೂರ್ತಿ ಹೆಗಡೆ ನೇತೃತ್ವದಲ್ಲಿ ಜಿಲ್ಲೆಯಲ್ಲಿ ಎರಡು ಮೆಡಿಕಲ್ ಕಾಲೇಜು ಹಾಗೂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆಗೆ ಅಗ್ರಹಿಸಿ ಹಮ್ಮಿಕೊಂಡ ಪಾದಯಾತ್ರೆಯೂ ಮಳೆ – ಬಿಸಿಲನ್ನು ಲೆಕ್ಕಿಸದೇ ಸತತ ಏಳು ದಿನಗಳಿಂದ ಸಾಗಿ ಇಂದು ಸಂಜೆ ಕಾರವಾರ ನಗರವನ್ನು ಪ್ರವೇಶಿಸಿದ್ದು, ಗುರುವಾರ ಬೆಳಿಗ್ಗೆ 11 ಘಂಟೆಗೆ ನಗರದ ಜಿಲ್ಲಾಧಿಕಾರಿಗಳ ಕಛೇರಿ ಎದುರು ಬೃಹತ್ ಬಹಿರಂಗ ಸಭೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಿದ್ದಾರೆ.

ಕಳೆದ ನವೆಂಬರ್ 2 ರಂದು ಶಿರಸಿಯ ಶ್ರೀ ಮಾರಿಕಾಂಬಾ ದೇವಸ್ಥಾನ ಎದುರು ಶಿರಸಿಯ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಕಾಶಿನಾಥ ಮೂಡಿ ಅವರಿಂದ ಚಾಲನೆಗೊಂಡ ಪಾದಯಾತ್ರೆಯೂ ನಿಲೇಕಣಿ, ಹನುಮಂತಿ ಮಾರ್ಗವಾಗಿ ಕೋಳಗಿಬಿಸ್ ನಲ್ಲಿ ವಾಸ್ತವ್ಯಹೂಡಿತು. ಎರಡನೇ ದಿನ ಕೋಳಗಿಬೀಸ್ ನಿಂದ ಪ್ರಾರಂಭವಾಗಿ ಅಮ್ಮಿನಳ್ಳಿ, ಜಾನ್ಮನೆ, ಸಂಪಖಂಡ, ಮಂಜುಗುಣಿ ಬಂಡಲ, ರಾಗೀಹೊಸಳ್ಳಿ ಮಾರ್ಗವಾಗಿ ದೇವಿಮನೆಯಲ್ಲಿ ತಂಗಿತು. ಮೂರನೇ ದಿನದ ಪಾದಯಾತ್ರೆಯೂ ದೇವಿಮನೆಯಿಂದ ಪ್ರಾರಂಭವಾದ ಪಾದಯಾತ್ರೆಗೆ ಕೆಡಿಸಿಸಿ ಬ್ಯಾಂಕ್ ನಿಧೇರ್ಶಕ ಶಿವಾನಂದ ಹೆಗಡೆ ಕಡತೋಕಾ ಹಾಗೂ ಮನುವಿಕಾಸ ಸಂಸ್ಥೆಯ ನಿದೇರ್ಶಕ ಗಣಪತಿ ಭಟ್ ಸಾಥ ನೀಡಿದರೆ, ನಂತರ ಕತಗಾಲನಲ್ಲಿ ಕೆಡಿಸಿಸಿ ಬ್ಯಾಂಕ್ ನಿದೇರ್ಶಕ ಗಜಾನನ ಪೈ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಪಾದಯಾತ್ರೆಗೆ ಬೆಂಬಲ ಘೋಷಿಸಿ ಹೆಜ್ಜೆಹಾಕಿದ್ದರು, ನಂತರ ಅಂದು ದಿವಗಿಯಲ್ಲಿ ವಾಸ್ತವ್ಯವಾಗಿತು.

ಕುಮಟಾದ ದಿವಗಿಯಿಂದ ಆರಂಭವಾದ ನಾಲ್ಕನೇ ದಿನದ ಪಾದಯಾತ್ರೆಯೂ ಬೆಳಿಗ್ಗೆ ಕುಮಟಾ ನಗರವನ್ನು ತಲುಪುತ್ತಿದ್ದಂತೆ ಕುಮಟಾ – ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕ ದಿನಕರ್ ಶೆಟ್ಟಿ ಸ್ವಾಗತಿಸಿ, ಅಲ್ಲಿನ ಮಹಾಸತಿ ದೇವಸ್ಥಾನ ಆವರಣಲ್ಲಿ ಆಯೋಜಿಸಿದ ಸಭೆಯಲ್ಲಿ ಪಾದಯಾತ್ರೆಗೆ ಬೆಂಬಲ ಘೋಷಿಸಿ, ಪಾದಯಾತ್ರೆಗೆ ಹಸಿರು ನಿಶಾನೆ ತೊರಿಸುವುದರ ಮೂಲಕ ಪಾದಯಾತ್ರೆಗೆ ಶುಭಹಾರೈಸಿದರು. ಕುಮಟಾ ನಗರದಿಂದ ಮಿರ್ಜಾನ ವರೆಗೆ ನೂರಾರು ಆಟೋ ಚಾಲಕರು ತಮ್ಮ ಆಟೋದೊಂದಿಗೆ ಸ್ವಯಂ ಪ್ರೇರಿತರಾಗಿ ಪಾದಯಾತ್ರೆಗೆ ಕೈಜೋಡಿಸಿದರು. ಅಂದು ಕುಮಟಾ ಬರ್ಗಿಯಲ್ಲಿ ಅಂದಿನ ವಾಸ್ತವ್ಯಹೂಡಿತು. ನವೆಂಬರ್ 6 ರಂದು ಸೋಮವಾರ ಬೆಳಿಗ್ಗೆ ಐದನೇ ದಿನದ ಪಾದಯಾತ್ರೆಯು ಕುಮಟಾದ ಬರ್ಗಿಯಿಂದ ಆರಂಭವಾಗಿ ನಂತರ ಹಿರೇಗುತ್ತಿ, ಮಾದನಗೇರಿ, ಶಿರೂರ ಮಾರ್ಗವಾಗಿ ಅಂಕೋಲಾ ತಲುಪಿತು, ಮಾರ್ಗಮಧ್ಯ ಹಿರೇಗುತ್ತಿಯಲ್ಲಿ ಸ್ಥಳೀಯ ಮುಖಂಡರು ಹಾಗೂ ಊರ ಗ್ರಾಮಸ್ಥರು ಪಾದಯಾತ್ರೆಯನ್ನು‌ ಸ್ವಾಗತಿಸಿ, ಬೆಂಬಲ ಘೋಷಣೆ ಮಾಡಿದರು.

ಮಂಗಳವಾರ ಆರನೇ ದಿನದ ಪಾದಯಾತ್ರೆಯೂ ಅಂಕೋಲಾ ನಗರವನ್ನು ಪ್ರವೇಶಿಸುತ್ತಿದ್ದಂತೆ ಅಲ್ಲಿಗೆ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ, ಜಾನಪದ ಕೋಗಿಲೆ, ನಾಡೋಜ ಸುಕ್ರಿ ಬೊಮ್ಮ ಗೌಡ ಅವರು ಆಗಮಿಸಿ ಪಾದಯಾತ್ರೆಗೆ ತಮ್ಮ ಬೆಂಬಲ ಘೋಷಿಸಿ, ಪಾದಯಾತ್ರೆಯ ರೂವಾರಿಗಳಾದ ಅನಂತಮೂರ್ತಿ ಹೆಗಡೆಯರಮವರ ಅಪಾದಯಾತ್ರೆಯಶುಭಹಾರೈಸಿ, ಆಶೀರ್ವದಿಸಿದ್ದು, ವಿಶೇಷವಾಗಿತ್ತು. ನಂತರ ಅವರ್ಸಾ ಮಾರ್ಗವಾಗಿ ಅಮದಳ್ಳಿಯಲ್ಲಿ ವಾಸ್ತವ್ಯಹೂಡಿ, ಮಾರನೇ ದಿನ ಅಮದಳ್ಳಿಯಿಂದ ಹೊರಟು ಚೆಂಡಿಯಾ, ಬಿಣಗಾ ಮೂಲಕ ಕಾರವಾರ ನಗರವನ್ನು ತಲುಪಿತು. ಮಾರ್ಗ‌ ಮಧ್ಯ ಪಾದಯಾತ್ರೆ ಸ್ಥಳಕ್ಕೆ ಅಗಮಿಸಿದ ಕರವೇ ಜಿಲ್ಲಾಧ್ಯಕ್ಷ ಭಾಸ್ಕರ ಪಟಗಾರ ತಮ್ಮ ಬೆಂಬಲ ಘೋಷಿಸಿ ಪಾದಯಾತ್ರೆಯಲ್ಲಿ ಹೆಜ್ಜೆಹಾಕಿದರು. ಗುರುವಾರ ಕಾರವಾರ ನಗರದಲ್ಲಿ ಪಾದಯಾತ್ರೆಯ ಮೂಲಕ ನಗರದಲ್ಲಿ ಮೆರವಣಿಗೆ ಮಾಡಿ ನಗರದ ಸುಭಾಷ್ ಚಂದ್ರ ಭೋಸ್ ಸರ್ಕಲ್ ನಲ್ಲಿ ಸುಭಾಷಚಂದ್ರ ಭೋಸರವರ ಪುಥಳಿಗೆ ಮಾಲಾರ್ಪಣೆ ಮಾಡಿ, ನಂತರ ಜಿಲ್ಲಾಧಿಕಾರಿಗಳ ಕಛೇರಿ ಎದುರು ಬಹಿರಂಗ ಸಭೆ ನಡೆಸಿ, ಜಿಲ್ಲಾಧಿಕಾರಿಗಳಿಗೆ ಅನಂತಮೂರ್ತಿ ಹೆಗಡೆಯವರು ಮನವಿ ಸಲ್ಲಿಸಲಿದ್ದಾರೆ.

ಬಹಿರಂಗ ಸಭೆ ಅನೇಕ ಗಣ್ಯರ ಆಗಮನ
ಶಿರಸಿಯ ಸಮಾಜ ಸೇವಕ ಅನಂತಮೂರ್ತಿ ಹೆಗಡೆ ನೇತೃತ್ವದಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಎರಡು ಮೆಡಿಕಲ್ ಕಾಲೇಜು ಮತ್ತು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಶಿರಸಿಯಿಂದ ಕಾರವಾರದವರೆಗೆ ಹಮ್ಮಿಕೊಂಡ 8 ದಿನಗಳ ಪಾದಯಾತ್ರೆಯೂ ಬುಧವಾರ ಕಾರವಾರ ನಗರವನ್ನು ತಲುಪಿದ್ದು, ಗುರುವಾರ ಬೆಳಿಗ್ಗೆ ಕಾರವಾರ ನಗರದಲ್ಲಿ ಪಾದಯಾತ್ರೆಯ ಮೂಲಕ ಮೆರವಣಿಗೆ ಮಾಡಿ ನಗರದ ಸುಭಾಷ್ ಚಂದ್ರ ಭೋಸ್ ಸರ್ಕಲ್ ನಲ್ಲಿ ಸುಭಾಷಚಂದ್ರ ಭೋಸರವರ ಪುಥಳಿಗೆ ಮಾಲಾರ್ಪಣೆ ಮಾಡಿ, ನಂತರ ಜಿಲ್ಲಾಧಿಕಾರಿಗಳ ಕಛೇರಿ ಎದುರು ಬಹಿರಂಗ ಸಭೆ ನಡೆಸಿ, ಬೆಳಿಗ್ಗೆ 11 ಘಂಟೆಗೆ ಜಿಲ್ಲಾಧಿಕಾರಿಗಳಿಗೆ ಅನಂತಮೂರ್ತಿ ಹೆಗಡೆಯವರು ಮನವಿ ಸಲ್ಲಿಸಲಿದ್ದು, ಈ ಬಹಿರಂಗ ಸಭೆಗೆ ಸ್ಕೋಡ್ ವೆಸ್ ಸಂಸ್ಥೆಯ ನಿಧೇರ್ಶಕ ಡಾ. ವೆಂಕಟೇಶ ನಾಯ್ಕ , ಬಿಜೆಪಿಯ ನಿಕಟಪೂರ್ವ ಜಿಲ್ಲಾಧ್ಯಕ್ಷ ಕೆ.ಜಿ.ನಾಯ್ಕ, ಕೆಡಿಸಿಸಿ ಬ್ಯಾಂಕ್ ನಿದೇರ್ಶಕ ಶಿವಾನಂದ ಹೆಗಡೆ ಕಡತೋಕಾ, ಕುಮಟಾದ ಹಿರಿಯ ವಕೀಲ ಆರ್. ಜಿ. ನಾಯ್ಕ, ಮನು ವಿಕಾಸ ಸಂಸ್ಥೆಯ ಗಣಪತಿ ಭಟ್, ಶಿರಸಿಯ ಮುಖಂಡ ಬಸವರಾಜ ಓಶಿಮಠ, ಕರವೇ ಜನಧ್ವನಿಯ ಜಿಲ್ಲಾಧ್ಯಕ್ಷ ಉಮೇಶ ಹರಿಕಾಂತ, ಜಿಲ್ಲಾ ಆಟೋ ಚಾಲಕ ಮಾಲಕರ ಸಂಘದ ಜಿಲ್ಲಾಧ್ಯಕ್ಷ ಶಿವರಾಜ ಮೇಸ್ತ ಸೇರಿದಂತೆ ಇನ್ನಿತರ ಗಣ್ಯರು ಪಾಲ್ಗೊಳ್ಲಲಿದ್ದು, ಸಭೆಗೆ ಜಿಲ್ಲೆಯ ಎಲ್ಲಾ ತಾಲೂಕುಗಳಿಂದ ಜನರು ಆಗಮಿಸಲಿದ್ದು, ಮೂರಿಂದ ಐದು ಸಾವಿರ ಜನರು ಸೇರುವ ನಿರೀಕ್ಷೆಯಿದೆ ಎಂದು ಪಾದಯಾತ್ರೆಯ ರೂವಾರಿಯಾದ ಅನಂತಮೂರ್ತಿ ಹೆಗಡೆ ತಿಳಿಸಿದ್ದಾರೆ.