Home KARWAR ಸಹಸ್ರಾರು ಜನರೊಂದಿಗೆ ಮೆರವಣಿಗೆ : ನಾಮಪತ್ರ ಸಲ್ಲಿಸಿದ ಕಾಗೇರಿ.

ಸಹಸ್ರಾರು ಜನರೊಂದಿಗೆ ಮೆರವಣಿಗೆ : ನಾಮಪತ್ರ ಸಲ್ಲಿಸಿದ ಕಾಗೇರಿ.

ಕಾರವಾರ : ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ವಿಶ್ವೇಶ್ವರ ಹೆಗಡೆ ಕಾಗೇರಿ ಶುಕ್ರವಾರ ನಾಮಪತ್ರ ಸಲ್ಲಿಸಿದ್ದಾರೆ. ಅಪಾರ ಬೆಂಬಲಿಗರೊಂದಿಗೆ ಕಾರವಾರ ನಗರದ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಕಾಗೇರಿ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಅವರಿಗೆ ನಾಮಪತ್ರ ಸಲ್ಲಿಸಿದರು. ಅವರು ಒಟ್ಟು ಮೂರು ನಾಮಪತ್ರ ಸಲ್ಲಿಕೆ ಮಾಡಿದರು. ಪತ್ನಿ, ಪುತ್ರಿ ಹಾಗೂ ಪ್ರಮುಖ ಮುಖಂಡರು ಅವರ ಜೊತೆಗಿದ್ದರು.

ನಾಮಪತ್ರ ಸಲ್ಲಿಕೆಯೂ ಮುನ್ನ ಕಾಗೇರಿ ಅವರು ಕಾರವಾರದ ದೈವಜ್ಞ ಸಭಾಭವನದಿಂದ ನಗರದಾದ್ಯಂತ ತೆರೆದ ವಾಹನದಲ್ಲಿ ರ‍್ಯಾಲಿ ನಡೆಸಿದರು. ವಿಶ್ವೇಶ್ವರ ಹೆಗಡೆ ಕಾಗೇರಿಗೆ ಅವರಿಗೆ ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್, ಬಿಜೆಪಿ ಶಾಸಕ ಬಸವನಗೌಡ ಪಾಟೀಲ ಯತ್ನಾಳ , ಶಾಸಕ ಸುನೀಲಕುಮಾರ, ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ನಾಯ್ಕ, ಧಾರವಾಡ ಶಾಸಕ ಅರವಿಂದ ಬೆಲ್ಲದ, ಚುನಾವಣಾ ಉಸ್ತುವಾರಿ ಹರತಾಳು ಹಾಲಪ್ಪ, ಕುಮಟಾ ಶಾಸಕ ದಿನಕರ್ ಶೆಟ್ಟಿ, ಖಾನಾಪುರ ಶಾಸಕ ವೀಠ್ಠಲ ಹಲಗೇಕರ, ವಿಧಾನ ಪರಿಷತ್‌ ಸದಸ್ಯ ಗಣಪತಿ ಉಳ್ವೇಕರ ಮೊದಲಾದವರು ಸಾಥ್ ನೀಡಿದರು.

ನಾಮಪತ್ರ ಸಲ್ಲಿಕೆಗೂ ಮೊದಲು ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಪತ್ನಿ ಸಮೇತ ಸಮುದ್ರ ಪೂಜೆ , ಗೋ ಪೂಜೆ ನೆರವೇರಿಸಿದರು. ಕಾರವಾರದ ರವೀಂದ್ರನಾಥ ಕಡಲತೀರದಲ್ಲಿ ಕಾಗೇರಿ ಸಮುದ್ರ ಪೂಜೆ ನೆರವೇರಿಸಿದ್ದು, ಸಮುದ್ರ ಪೂಜೆಯಲ್ಲಿ ರಾಜ್ಯ ಬಿಜೆಪಿ ಉಪಾಧ್ಯಕ್ಷೆ ರೂಪಾಲಿ ನಾಯ್ಕ, ಜಿಲ್ಲಾ ಚುನಾವಣಾ ಉಸ್ತುವಾರಿ ಹರತಾಳು ಹಾಲಪ್ಪ , ಕಾರ್ಕಳ ಶಾಸಕ ಸುನಿಲಕುಮಾರ, ಧಾರವಾಟ ಶಾಸಕ ಅರವಿಂದ ಬೆಲ್ಲದ ಮೊದಲಾದವರು ಭಾಗಿಯಾದರು.