Home KUMTA ಎಂ. ಕೆ. ಹೆಗಡೆಯವರಿಗೆ ‘ಸೌರಭ’ ಸಂಸ್ಥೆಯಿಂದ ಶ್ರದ್ಧಾಂಜಲಿ.

ಎಂ. ಕೆ. ಹೆಗಡೆಯವರಿಗೆ ‘ಸೌರಭ’ ಸಂಸ್ಥೆಯಿಂದ ಶ್ರದ್ಧಾಂಜಲಿ.

ಕುಮಟಾ : ಪಟ್ಟಣದ ವಿನಾಯಕ ರೆಕ್ಸಿನ್ ಹೌಸ್ ನ ಸಭಾಭವನದಲ್ಲಿ ನಡೆದ ಇತ್ತೀಚಿಗೆ ನಿಧನರಾದ ತೆರಿಗೆ ಸಲಹೆಗಾರರಾದ ಹಾಗೂ ಸೌರಭ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷರಾಗಿದ್ದ ಎಂ. ಕೆ ಹೆಗಡೆಯವರಿಗೆ ಸೌರಭ ಸಂಸ್ಥೆಯ ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಡಾ. ಅನಿಲ ಹೆಗಡೆ ಮಾತನಾಡಿ ಎಂ.ಕೆ ಹೆಗಡೆ ಕಲಾ ಪ್ರೇಮಿಗಳಾಗಿ, ಸಾಂಸ್ಕೃತಿಕ ಕಾರ್ಯಗಳಲ್ಲಿ ಸದಾ ಮುಂದಿದ್ದವರು. ಇನ್ನು ಅನೇಕ ವರ್ಷಗಳ ಕಾಲ ಬಾಳಿ ಬದುಕಬೇಕಿದ್ದ ಅವರು, ಅಲ್ಪಾಯುಷ್ಯದಲ್ಲಿ ನಮ್ಮೆಲ್ಲರನ್ನೂ ಬಿಟ್ಟು ತೆರಳಿದ್ದಾರೆ. ಅವರಾಗಲುವಿಕೆ ಸೌರಭ ಸಂಸ್ಥೆಗೆ ಹಾಗೂ ಸಮಾಜಕ್ಕೆ ತುಂಬಲಾರದ ನಷ್ಟ ಎಂದರು.

ಸೌರಭ ಸಾಂಸ್ಕೃತಿಕ ಸಂಸ್ಥೆಯನ್ನು ಸ್ಥಾಪಿಸುವಾಗ ನಾವು ಸಪ್ತಋಷಿಗಳಂತೆ ಒಟ್ಟಿಗೆ ಇದ್ದವರು. ಸಮಾನ ಮನಸ್ಕರೆಲ್ಲರೂ ಸೇರಿ ಒಂದೇ ಚಿಂತನೆಯಲ್ಲಿ ಕಾರ್ಯ ಮಾಡುತ್ತಿದ್ದೆವು. ಅಂತರಾಷ್ಟ್ರೀಯ ಮಟ್ಟದವರೆಗೆ ಗಮನ ಸೆಳೆದ ಕಾರ್ಯಕ್ರಮಗಳನ್ನು ಮಾಡುವಲ್ಲಿ ಎಂ.ಕೆ ಹೆಗಡೆಯವರ ಪ್ರಯತ್ನ ಮರೆಯುವಂತಿಲ್ಲ. ಸರಳ ವ್ಯಕ್ತಿತ್ವದ ಸ್ನೇಹಜೀವಿಯನ್ನು ಕಳೆದುಕೊಂಡ ಸಮಾಜ ಬಡವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಹವ್ಯಕ ಮಹಾಮಂಡಲದ ಅಧ್ಯಕ್ಷ ಮೋಹನ ಭಾಸ್ಕರ ಹೆಗಡೆ ಮಾತನಾಡಿ ಎಂ. ಕೆ ಹೆಗಡೆಯವರು ಸೌರಭದ ಆಧಾರ ಸ್ತಂಭದಂತೆ ಇದ್ದವರು. ಅವರ ಪದಚಿಹ್ನಗಳನ್ನು ಎಂದೂ ಅಳಿಸಲು ಸಾಧ್ಯವಿಲ್ಲ. ಅವರ ಋಣವನ್ನು ಸೌರಭ ತೀರಿಸಲು ಸಾಧ್ಯವಿಲ್ಲ. ಎಲ್ಲಾ ಕಾರ್ಯವನ್ನು ಪರಿಪೂರ್ಣವಾಗಿ ಮಾಡುವ ಸ್ವಭಾವ ಅವರದಾಗಿತ್ತು. ಕಾರ್ಯಕ್ರಮದ ಮಹತ್ವವನ್ನು ತಿಳಿಸಿ, ದಾನಿಗಳ ಮನ ಒಲಿಸುವ ಕಾರ್ಯ ಮಾಡಿ, ಸೌರಭದ ಕಾರ್ಯಗಳನ್ನು ಯಶಸ್ವಿಯಾಗಿಸುತ್ತಿದ್ದರು. ಸಮಾಜಕ್ಕೆ ಎಂ ಕೆ ಹೆಗಡೆಯವರು ಕೊಟ್ಟ ಕೊಡುಗೆ ಉದಾತ್ತವಾದದ್ದು ಎಂದು ನುಡಿನಮನ‌ ಸಲ್ಲಿಸಿದರು.

ಸೌರಭದ ಸದಸ್ಯ ಶ್ರೀಕಾಂತ ಭಟ್ಟ ಮಾತನಾಡಿ, ಸಾಮಾಜಿಕ ಕಾರ್ಯಕರ್ತ, ದೈವೀಭಕ್ತ, ನೇರ ನಡೆ-ನುಡಿಯ ಸ್ನೇಹಮಯ ವ್ಯಕ್ತಿತ್ವದ ಎಂ. ಕೆ ಹೆಗಡೆಯವರನ್ನು ಕಳೆದುಕೊಂಡಿದ್ದು, ವೈಯಕ್ತಿಕವಾಗಿಯೂ ಸಮಾಜದ ದೃಷ್ಟಿಯಿಂದಲೂ ಬಹುದೊಡ್ಡ ನಷ್ಟವಾಗಿದೆ. ಅವರ ಕುಟುಂಬಕ್ಕೆ ಅವರ ಅಗಲುವಿಕೆಯನ್ನು ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಆಶಿಸಿದರು.

ಸೌರಭದ ಸದಸ್ಯ ಎಸ್.ವಿ ಹೆಗಡೆ ಮಾತನಾಡಿ ತೆರಿಗೆ ಸಲಹೆಗಾರರಾಗಿ ಅತ್ಯುತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಎಂ.ಕೆ ಹೆಗಡೆಯವರು, ವೈಯಕ್ತಿಕವಾಗಿ ನನಗೂ ನನ್ನ ವೃತ್ತಿಯಲ್ಲಿ ಮಾರ್ಗದರ್ಶನ ಮಾಡಿದ್ದಾರೆ. ಎಲ್ಲ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ರೂಪಿಸುವ ಅವರ ಕಾರ್ಯವೈಖರಿ ಸಮಾಜಕ್ಕೆ ಮಾದರಿ. ರಾಮಚಂದ್ರಾಪುರ ಮಠದ ಸಂಘಟನೆಯ ವಿವಿಧ ಜವಾಬ್ದಾರಿಗಳನ್ನು ಯಶಸ್ವಿಯಾಗಿ ಮುನ್ನಡೆಸಿದವರು. ಸಮಾಜದ ಎಲ್ಲರ ನೋವು ನಲಿವಿಗೆ ಸ್ಪಂದಿಸಿದ ಅವರ ಅಗಲುವಿಕೆ ನೋವು ತಂದಿದೆ ಎಂದರು.

ವಿನಾಯಕ ರೆಕ್ಸಿನ್ ಹೌಸ್ ಮಾಲಿಕ ಸೌರಭ ಸದಸ್ಯ ವಿನಾಯಕ ಹೆಗಡೆಕಟ್ಟೆ ಎಂ.ಕೆ ಹೆಗಡೆಯವರ ಒಡನಾಟ ಬಹು ವರ್ಷಗಳದ್ದು, ಸರಳ ವ್ಯಕ್ತಿತ್ವ ಹಾಗೂ ಅಗಾಧವಾದ ಜ್ಞಾನ, ನೇರ ನಡೆನುಡಿಯ ಅವರು, ನಮ್ಮಂತಹ ಸಾವಿರಾರು ಯುವಕರನ್ನು ಮುನ್ನೆಲೆಗೆ ತಂದವರು ಎಂದು ಅಭಿಪ್ರಾಯಪಟ್ಟರು.

ಸೌರಭದ ಇನ್ನೋರ್ವ ಸದಸ್ಯ ವಿಶ್ರಾಂತ ಪ್ರಾಂಶುಪಾಲ ಅರುಣ ಹೆಗಡೆ ಮಾತನಾಡಿ, ಎಂ.ಕೆ ಹೆಗಡೆಯವರನ್ನು ಸದಾ ಸ್ಮರಿಸುವಂತಾಗಬೇಕು ಅಂತಹ ಮಾದರಿ ಕಾರ್ಯಗಳನ್ನು ಮುಂದಿನ ದಿನಗಳಲ್ಲಿ ನಾವೆಲ್ಲರೂ ಕೂಡಿ ಮಾಡೋಣ.. ಅವರು ಸಮಾಜಕ್ಕೆ ಹಾಗೂ ಸಾಂಸ್ಕೃತಿಕ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅತ್ಯಮೋಘವಾದದ್ದು. ಇಂತಹ ವ್ಯಕ್ತಿಗಳು ನಮ್ಮ ನಡುವೆ ಇಷ್ಟು ಬೇಗ ಮರೆಯಾಗಿದ್ದು ನೋವಿನ ಸಂಗತಿ ಎಂದರು.

ಸೌರಭ ಸಂಸ್ಥೆಯ ಸದಸ್ಯರುಗಳು, ಎಂ.ಕೆ ಹೆಗಡೆಯವರ ಹಿತೈಷಿಗಳು ಹಾಗೂ ಸಾರ್ವಜನಿಕರು ಹಾಜರಿದ್ದು ಮೌನ ವಂದನೆ ಸಲ್ಲಿಸಿ, ಅಗಲಿದ ಆತ್ಮಕ್ಕೆ ಚಿರ ಶಾಂತಿ ಕೋರಿದರು.