Home Food ಏಕೈಕ ಧನ್ವಂತರೀ ಮಹಾವಿಷ್ಣು ದೇವಾಲಯ

ಏಕೈಕ ಧನ್ವಂತರೀ ಮಹಾವಿಷ್ಣು ದೇವಾಲಯ

ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಖರ್ವಾ ಗ್ರಾಮದ ಯಲಗುಪ್ಪ ಎಂಬ ಊರಿನಲ್ಲಿ ನೆಲೆಸಿದ್ದಾನೆ ರಾಜ್ಯದ ಏಕೈಕ ಪುರಾತನ ಧನ್ವಂತರೀ ಮಹಾವಿಷ್ಣು! ಹೊನ್ನಾವರ ಪಟ್ಟಣದಿಂದ ಸುಮಾರು 11 ಕಿಲೋಮೀಟರ್ ದೂರ ಇರುವ ಈ ಕ್ಷೇತ್ರಕ್ಕೆ ಬೆಂಗಳೂರು ಇತ್ಯಾದಿ ಯಾವುದೇ ಸ್ಥಳದಿಂದ ಬಂದು ಹೋಗಬೇಕಾದಲ್ಲಿ ಉತ್ತಮ ವಾಹನ ಸೌಕರ್ಯ ಇದೆ. ಮೂರು ದಿಕ್ಕಿನಲ್ಲಿಯೂ ಗುಡ್ಡಗಾಡು, ಒಂದು ದಿಕ್ಕಿನಲ್ಲಿ ತುಂಬು ಹಸಿರು ತೋಟದಿಂದ ಈ ರಮ್ಯ ಮನೋಹರ ದೇಗುಲ ಕೂಡಿದ್ದು, ಅತ್ಯಂತ ಪ್ರಶಾಂತ ಹಾಗೂ ರಮಣೀಯ ಸ್ಥಳದಲ್ಲಿ ಇದೆ. ರಾಷ್ಟ್ರೀಯ ಹೆದ್ದಾರಿ 206ರಿಂದ ಅಂದಾಜು 200 ಮೀಟರ್ ದೂರ ಹಸಿರು ತೋಟಗಳ ಮಧ್ಯ ಹಳ್ಳಿ ಸೊಗಡಿನ ಮನೆಗಳ ಮುಂದೆ ಅಂದಾಜು 200 ಮೀಟರ್ ಕ್ರಮಿಸಿದರೆ ಒಂದು ಚಿಕ್ಕ ಪುಷ್ಕರಿಣಿ ಸಿಗುತ್ತದೆ.

ಆ ಪುಷ್ಕರಿಣಿಯ ಎದುರಿನಲ್ಲಿ ಮೆಟ್ಟಿಲು ಹತ್ತಿ ಹೋದರೆ ಸರ್ವ ರೋಗ ನಿವಾರಕ ಧನ್ವಂತರಿ ದೇಗುಲವಿದೆ. ದೇವರ ಗರ್ಭಗುಡಿಯು ಶಿಲಾಮಯ. ಕರ್ನಾಟಕ ಹಾಗೂ ಮಹಾರಾಷ್ಟ್ರ ಈ ಎರಡೂ ರಾಜ್ಯಗಳಲ್ಲಿ ನೂರಾರು ದೇಗುಲಗಳನ್ನು ಗುರುತಿಸಿ, ಪ್ರತಿಷ್ಠಾಪಿಸಿದ ಹಾಗೂ ಇನ್ನೂ ಕೆಲ ಪ್ರತಿಷ್ಠಾಪಿತ ದೇಗುಲಗಳನ್ನು ಉದ್ಧರಿಸಿ ಅವುಗಳನ್ನು ಶಕ್ತಿ ಕೇಂದ್ರಗಳಾಗಿ ಪರಿವರ್ತಿಸಿದ ಶ್ರೀಧರ ಸ್ವಾಮಿಗಳೇ ಸಹ ಖುದ್ದು ಈ ದೇಗುಲಕ್ಕೆ ಭೇಟಿ ಕೊಟ್ಟಿದ್ದಾರೆ.

 

ಈ ಧನ್ವಂತರಿ ಮಹಾವಿಷ್ಣು ಮೂರ್ತಿಯನ್ನು ಕಂಡು, ಕರ್ನಾಟಕ ಹಾಗೂ ಮಹಾರಾಷ್ಟ್ರ ಎಲ್ಲಿಯೂ ಕಾಣದ ಈ ಸ್ವಾಮಿಯನ್ನು ಇಲ್ಲಿ ಕಂಡೆವು ಎಂದು ಸಂತಸ ಪಟ್ಟು, ಅಲ್ಲಿಯೇ ಸ್ವಾಮಿಯ ಗರ್ಭಗುಡಿಯಲ್ಲಿ ಧ್ಯಾನಾಸಕ್ತರಾದರು ಹಾಗೂ ಈ ದೇಗುಲದಲ್ಲಿ ಸಾಕ್ಷಾತ್ ಧನ್ವಂತರಿ ಮಹಾ ವಿಷ್ಣುವೇ ಸ್ವಯಂ ನೆಲೆಸಿದ್ದಾನೆ ಎಂದು ಹೇಳಿದ್ದಾರೆ.